ಯುದ್ಧ ಭೂಮಿಯಾಗಿದೆ ಬೆಂಗಳೂರಿನ ಈ ರಸ್ತೆ, ಮಂತ್ರಿ ಮಹನೀಯರೇ ಇಲ್ಲಿ ನೋಡಿ ಒಮ್ಮೆ
ಬೆಂಗಳೂರಿನಲ್ಲಿ ವಾಹನ ಓಡಿಸುವವರು ಟ್ರಾಫಿಕ್ ಜಾಮ್ ನಿಂದ ಹೈರಾಣಾದರೆ, ಮತ್ತೊಂದೆಡೆ ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ರಾಶಿ ತುಂಬಿದ್ದು ಯಾವಾಗಪ್ಪ ಇದಕ್ಕೆ ಮುಕ್ತಿ ಸಿಗುವುದು ಎಂದು ಗೊಣಾಗುವವರೇ ಹೆಚ್ಚು. ಹೌದು, ಬೆಂಗಳೂರಿನ ಮುತ್ತನಲ್ಲೂರ್ ಕ್ರಾಸ್ ಹಾಗೂ ಸರ್ಜಾಪುರ ರಸ್ತೆಗಳು ಯುದ್ಧ ಭೂಮಿಯಂತಾಗಿದ್ದು, ಈ ರಸ್ತೆಯ ಸ್ಥಿತಿ ಹೇಗಿದೆ ಎನ್ನುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು, ಮೇ 19: ಬೆಂಗಳೂರಿ (bengaluru) ನ ವಾಹನ ಓಡಿಸುವವರು ಜೀವವನ್ನು ಕೈಯಲ್ಲೇ ಹಿಡಿದು ಓಡಾಡಬೇಕು. ಇಲ್ಲಿನ ರಸ್ತೆಗಳನ್ನು ನೋಡಿದರೆ ಅಯ್ಯೋ ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದೆನಿಸುತ್ತದೆ. ಟ್ರಾಫಿಕ್ ಜಾಮ್ ಒಂದೆಡೆಯಾದರೆ, ಬೆಂಗಳೂರಿನ ರಸ್ತೆಗಳು ಇದೀಗ ಯಮಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವು ರಸ್ತೆಗಳಲ್ಲಿ ಗುಂಡಿಗಳು, ಹೊಂಡಗಳೇ ತುಂಬಿ ಹೋಗಿದ್ದು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ. ಬೆಂಗಳೂರಿನ ಮುತ್ತನಲ್ಲೂರ್ ಕ್ರಾಸ್ (muthanallur cross) ಹಾಗೂ ಸರ್ಜಾಪುರ ರಸ್ತೆ (sarjapura road) ಗಳು ಕೂಡ ಅಲ್ಲಲ್ಲಿ ಗುಂಡಿಗಳು, ಹೊಂಡಗಳೇ ತುಂಬಿ ಹೋಗಿದ್ದು ಡಾಂಬರು ಕಾಣದೇ ವರ್ಷಗಳೇ ಆಗಿದೆ. ಬೆಂಗಳೂರಿನ ರಸ್ತೆಯ ವಾಸ್ತವ ಸ್ಥಿತಿಯನ್ನು ಹೇಳುವ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರು, ಸರ್ಕಾರ, ಶಾಸಕರು, ಸಂಸದರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
@eastbengaluru ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೆಂಗಳೂರಿನ ಮುತ್ತನಲ್ಲೂರ್ ಕ್ರಾಸ್ ಹಾಗೂ ಸರ್ಜಾಪುರ ರಸ್ತೆಗಳು ಯುದ್ಧ ಭೂಮಿಗಳಾಂತಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳೇ, ಹಾಗೂ ಡಿಕೆ ಶಿವಕುಮಾರ್ ಅವರೇ ನಿಮ್ಮ ಅರ್ಧ ಅಧಿಕಾರದ ಅವಧಿ ಮುಗಿದಿದೆ. ಆದರೆ ಈ ಭಾಗದಲ್ಲಿ ರಸ್ತೆಗಳಿಗೆ ಒಂದು ಹನಿ ಡಾಂಬರು ಕೂಡ ಬಿದ್ದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರಿನ ಈ ರಸ್ತೆಗಳಲ್ಲಿ ಗುಂಡಿ ಹಾಗೂ ಹೊಂಡಗಳಿಂದ ತುಂಬಿಹೋಗಿರುವುದನ್ನು ನೋಡಬಹುದು. ರಸ್ತೆ ಕಾಮಗಾರಿಗೆ ಕೈ ಹಾಕದೇ ವರ್ಷಗಳೇ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.
ಇದನ್ನೂ ಓದಿ : ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟ ಮರುದಿನವೇ ಚಿನ್ನಾಭರಣ, ಹಣ ದೋಚಿ ಪರಾರಿಯಾದ ನವವಿವಾಹಿತೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
Muthanallur Cross, Sarjapur Road — roads have turned into craters, resembling a war zone.@CMofKarnataka @DKShivakumar, half your term is over, but this stretch hasn’t seen a drop of tar!#BrandBengaluru #BengaluruRains pic.twitter.com/VKmx6VSllq
— Citizens Movement, East Bengaluru (@east_bengaluru) May 18, 2025
ಮೇ 18 ರಂದು ಶೇರ್ ಮಾಡಲಾದ ಈ ವಿಡಿಯೋವು ಈವರೆಗೆ ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರೊಬ್ಬರು, ‘ಬೆಂಗಳೂರಿನ ಬಹುತೇಕ ರಸ್ತೆಗಳು ಈ ರೀತಿಯೇ ಇದೆ. ಅಲ್ಲಲ್ಲಿ ಹೊಂಡಗಳು, ವಾಹನ ಸವಾರರ ಗೋಳು ಹೇಳಲಾಗದು. ಇದಕ್ಕೆ ಅಂತ್ಯವೇ ಇಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಈ ಪ್ರದೇಶದ ಸಂಸದ, ಶಾಸಕರು, ವಿಧಾನ ಪರಿಷತ್ ಸದಸ್ಯ ಯಾರು? ಅವರಿಗೆ ಈ ವಿಡಿಯೋ ಟ್ಯಾಗ್ ಮಾಡಿ’ ಎಂದಿದ್ದಾರೆ. ಮತ್ತೊಬ್ಬರು, ‘ಬೆಂಗಳೂರಿನ ಸಂಚಾರ ಜೀವಕ್ಕೆ ಸಂಚಕಾರ! ಸರ್ಕಾರ ಇದಕ್ಕೆ ಯಾವಾಗ ಪರಿಹಾರ?’ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




