AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್​ಗೆ ಟ್ರಂಪ್ ವಾರ್ನಿಂಗ್

Donald Trump warns Iran: ಇರಾನ್ ವಿಚಾರದಲ್ಲಿ ಅಮೆರಿಕಕ್ಕೆ ಬೇಕಾದ್​ದು ಸಿಗದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗೊಳಿಸಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಇರಾನ್​ನ ನೌಕಾಸೇನೆ ಮತ್ತು ವಾಯುಸೇನೆಯನ್ನು ಸಂಪೂರ್ಣ ನಾಶ ಮಾಡಿದ್ದೇವೆ. ಅದರ ಮಿಲಿಟರಿಗೆ ಹಾನಿ ಮಾಡಲು ಹೋಗಿಲ್ಲ ಎಂದಿದ್ದಾರೆ. ಇರಾನ್ ಶಾಂತಿ ಒಪ್ಪಂದಕ್ಕೆ ಬರಲೇಬೇಕು. ಇಲ್ಲದಿದ್ದರೆ ಅವರ ಸಮಯ ಮುಗಿದುಹೋಗುತ್ತದೆ ಎಂದೂ ಟ್ರಂಪ್ ವಾರ್ನಿಂಗ್ ಇತ್ತಿದ್ದಾರೆ.

‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್​ಗೆ ಟ್ರಂಪ್ ವಾರ್ನಿಂಗ್
ಡೊನಾಲ್ಡ್ ಟ್ರಂಪ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2026 | 4:42 PM

Share

ವಾಷಿಂಗ್ಟನ್, ಮೇ 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ದೇಶಕ್ಕೆ ತೀವ್ರ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟು ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಶಾಂತಿ ಒಪ್ಪಂದದ ನಿಯಮಗಳನ್ನು ಕಠಿಣಗೊಳಿಸಿರುವ ಟ್ರಂಪ್, “ನಾವು ಅಂದುಕೊಂಡಿದ್ದು ನಮಗೆ ಸಿಗದಿದ್ದರೆ, ನಾವು ಬೇರೆ ಮಾರ್ಗದಲ್ಲೇ ಇದನ್ನು ಕೊನೆಗಾಣಿಸುತ್ತೇವೆ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಮಧ್ಯವರ್ತಿಗಳ ಮೂಲಕ ನಡೆಯುತ್ತಿರುವ ಶಾಂತಿ ಒಪ್ಪಂದದ ಕರಡು ಪ್ರತಿಯನ್ನು (Draft MoU) ಶ್ವೇತಭವನದ ಸಿಚುಯೇಷನ್ ರೂಮ್‌ನಲ್ಲಿ ಪರಾಮರ್ಶಿಸಿದ ನಂತರ ಡೊನಾಲ್ಡ್ ಟ್ರಂಪ್ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಸಂಧಾನದ ಮಾತುಕತೆಗಳು ನಡೆಯುತ್ತಿವೆಯಾದರೂ ಅಮೆರಿಕದ ನಿಯಮಗಳಿಗೆ ಇರಾನ್ ಒಪ್ಪಲೇಬೇಕು ಎಂದು ಒತ್ತಾಯಿಸಿದ್ದಾರೆ.

ಬೇರೆ ಮಾರ್ಗದ ಎಚ್ಚರಿಕೆ ಇತ್ತ ಟ್ರಂಪ್

ಶಾಂತಿ ಮಾತುಕತೆಯಲ್ಲಿ ಅತಿ ಹೆಚ್ಚು ಆತುರಪಡುವುದು ಒಳ್ಳೆಯದಲ್ಲ ಎಂದು ಹೇಳಿದ ಟ್ರಂಪ್, “ಒಂದು ವೇಳೆ ನಾವು ಬಯಸಿದ ಫಲಿತಾಂಶ ನಮಗೆ ಸಿಗದಿದ್ದರೆ, ನಾವು ಈ ಬಿಕ್ಕಟ್ಟನ್ನು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಕೊನೆಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ನಾವು ಕೇವಲ ‘ಯುದ್ಧ ಇಲಾಖೆ’ಯನ್ನು (Department of War) ಕಣಕ್ಕಿಳಿಸಬೇಕಾಗುತ್ತದೆ” ಎಂದು ಪರೋಕ್ಷವಾಗಿ ಸೇನಾ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಿಂಧೂ ನದಿ ಒಪ್ಪಂದದ ಬಿಕ್ಕಟ್ಟು: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಜಲಕ್ಷಾಮ, ರಾಜಕೀಯ ಕೆಸರೆರಚಾಟ

ಇರಾನ್​ನ ಮಿಲಿಟರಿಯನ್ನು ಗುರಿ ಮಾಡಿಕೊಂಡಿಲ್ಲವಂತೆ ಟ್ರಂಪ್

ಡೊನಾಲ್ಡ್ ಟ್ರಂಪ್ ಇದೇ ವೇಳೆ ಕುತೂಹಲಕಾರಿ ಸಂಗತಿಯೊಂದನ್ನು ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಅಮೆರಿಕವು ಇರಾನ್​ನ ನೌಕಾಪಡೆ ಮತ್ತು ವಾಯುಪಡೆಯನ್ನು ನೂರಕ್ಕೆ ನೂರು ಧ್ವಂಸ ಮಾಡಿದೆಯಂತೆ. ಆದರೆ, ಮಿಲಿಟರಿ ಉದಾರ ಧೋರಣೆ ಹೊಂದಿರುವುದರಿಂದ ಅದನ್ನು (ಇರಾನ್ ಭೂಸೇನೆ) ಅಷ್ಟೇನೂ ಮುಟ್ಟಿಲ್ಲ ಎನ್ನುತ್ತಾರೆ ಟ್ರಂಪ್.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಟ್ರಂಪ್ ಅವರು ಇರಾನ್ ಮುಂದಿಟ್ಟಿದ್ದ ಶಾಂತಿ ಪ್ರಸ್ತಾವನೆಯ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿ ಟೆಹ್ರಾನ್‌ಗೆ (ಇರಾನ್ ರಾಜಧಾನಿ) ವಾಪಸ್ ಕಳುಹಿಸಿದ್ದಾರೆ. ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಹಣವನ್ನು ಬಿಡುಗಡೆ ಮಾಡುವ (Unfreeze Funds) ಯಾವುದೇ ನಿಯಮಕ್ಕೆ ಟ್ರಂಪ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬರಾಕ್ ಒಬಾಮಾ ಅವರ ಅವಧಿಯಲ್ಲಿ ಇರಾನ್‌ಗೆ ಶತಕೋಟಿ ಡಾಲರ್ ಹಣ ನೀಡಿದ್ದನ್ನು ಟ್ರಂಪ್ ಈ ಸಂದರ್ಭದಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.

ಇರಾನ್ ತನ್ನ ಬಳಿ ಇರುವ ಸಮೃದ್ಧ ಯುರೇನಿಯಂ ದಾಸ್ತಾನನ್ನು (Enriched Uranium Stockpile) ಯಾವಾಗ ಮತ್ತು ಹೇಗೆ ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಟ್ರಂಪ್ ಸೂಚಿಸಿದ್ದಾರೆ. ಇದರೊಂದಿಗೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯನ್ನು ಮುಕ್ತವಾಗಿಡುವ ಕುರಿತಾದ ನಿಯಮಗಳನ್ನು ಕರಡಿನಲ್ಲಿ ಬದಲಾಯಿಸಲು ಅವರು ತಮ್ಮ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು

“ಅವರು ಇನ್ನು ಮುಂದೆ ನಗಲು ಸಾಧ್ಯವಿಲ್ಲ”

ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರುತ್ ಸೋಷಿಯಲ್’ (Truth Social) ಪೋಸ್ಟ್‌ನಲ್ಲಿ ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಕಳೆದ 47 ವರ್ಷಗಳಿಂದ ಇರಾನಿಯನ್ನರು ನಮ್ಮನ್ನು ಕಾಯುವಂತೆ ಮಾಡುತ್ತಾ, ನಮ್ಮ ಜನರನ್ನು ರಸ್ತೆಬದಿಯ ಬಾಂಬ್‌ಗಳ ಮೂಲಕ ಕೊಲ್ಲುತ್ತಾ, ನಮ್ಮ ದೇಶವನ್ನು ನೋಡಿ ನಗುತ್ತಿದ್ದರು. ಆದರೆ ಅವರು ಇನ್ನು ಮುಂದೆ ನಗಲು ಸಾಧ್ಯವಿಲ್ಲ! ಶಾಂತಿ ಒಪ್ಪಂದಕ್ಕೆ ಇರಾನ್ ತಕ್ಷಣವೇ ಒಪ್ಪಿಗೆ ಸೂಚಿಸಬೇಕು, ಇಲ್ಲದಿದ್ದರೆ ಅವರಿಗೆ ಸಮಯ ಮುಗಿಯುತ್ತಾ ಬರುತ್ತದೆ” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಪ್ರಸ್ತುತ ಪಾಕಿಸ್ತಾನ ಸೇರಿದಂತೆ ಕೆಲವು ಮಧ್ಯವರ್ತಿ ದೇಶಗಳ ಮೂಲಕ ಅಮೆರಿಕ ಮತ್ತು ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ನಡುವೆ ಮಾತುಕತೆಗಳು ನಡೆಯುತ್ತಿವೆ. ಆದರೆ ಟ್ರಂಪ್ ಅವರ ಈ ಕಠಿಣ ನಿಲುವು ಮತ್ತು ಯುದ್ಧದ ಎಚ್ಚರಿಕೆಯು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More