ಹುತಾತ್ಮರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ; ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಸವಾಲು
ಮಂಗಳವಾರ ರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿತ್ತು. ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಭಾರತ ವೈಮಾನಿಕ ದಾಳಿಯ ಮೂಲಕ ಧ್ವಂಸಗೊಳಿಸಿತ್ತು. ಈ ಬಗ್ಗೆ ಇಂದು ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಶಹಬಾಜ್ ಷರೀಫ್, ಭಾರತೀಯ ಸೇನೆ ದಾಳಿಗೆ ಪಾಕಿಸ್ತಾನ ತಕ್ಕ ಪ್ರತ್ಯುತ್ತರ ನೀಡಲಿದೆ, ಪಾಕಿಸ್ತಾನ ಮುಂದಿಟ್ಟ ಹೆಜ್ಜೆಯನ್ನು ಎಂದಿಗೂ ಹಿಂದಿಡುವುದಿಲ್ಲ ಎಂದು ದರ್ಪದ ಹೇಳಿಕೆ ನೀಡಿದ್ದಾರೆ.

ಇಸ್ಲಾಮಾಬಾದ್, ಮೇ 7: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವೈಮಾನಿಕ ದಾಳಿ ನಡೆಸಿದ್ದ ಭಾರತ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಕಾಶ್ಮೀರದ ಎಲ್ಒಸಿ ಬಳಿ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿ 15 ಜನರನ್ನು ಕೊಂದಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತ ಪಾಕಿಸ್ತಾನದ ನಾಗರಿಕರನ್ನು ಟಾರ್ಗೆಟ್ ಮಾಡದೆ ಕೇವಲ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದ್ದರೂ ಪಾಕಿಸ್ತಾನ ಅಮಾಯಕ ಜನರ ಪ್ರಾಣ ತೆಗೆಯುವುದನ್ನು ನಿಲ್ಲಿಸಿಲ್ಲ. ಇದೆಲ್ಲದರ ನಡುವೆ ಭಾರತದ ದಾಳಿ ಹೇಡಿತನದ್ದು ಎಂದು ಪಾಕಿಸ್ತಾನ ಟೀಕಿಸಿದೆ.
ಇಂದು ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ‘ಹೇಡಿತನದ’ ದಾಳಿಯ ಪರಿಣಾಮವನ್ನು ಭಾರತ ಅನುಭವಿಸಲೇಬೇಕು ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದಾರೆ. ಹಾಗೇ, ಈ ದಾಳಿಗೆ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ: ಭಾರತದ ದಾಳಿ ಬಗ್ಗೆ ಮಹಿಳಾ ಅಧಿಕಾರಿಗಳಿಂದಲೇ ಮೋದಿ ಸುದ್ದಿಗೋಷ್ಠಿ ನಡೆಸಿದ್ದೇಕೆ?
ಭಾರತದ ವಾಯುಪಡೆಯ ರಾತ್ರಿಯ ಕ್ಷಿಪಣಿ ದಾಳಿಯ ನಂತರ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ರೀತಿ ದಾಳಿ ಮಾಡಿದ ನಂತರ ಬಹುಶಃ ನಾವು ಹಿಂದೆ ಸರಿಯುತ್ತೇವೆ ಎಂದು ಭಾರತ ಭಾವಿಸಿರಬಹುದು. ಆದರೆ ಇದು ಧೈರ್ಯದ ಮೇಲೆ ನಿರ್ಮಿಸಲಾದ ರಾಷ್ಟ್ರ ಎಂಬ ಅಂಶವನ್ನು ಅವರು ಮರೆತಿದ್ದಾರೆ. ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಪ್ರಶ್ನೆಯೇ ಇಲ್ಲ. ಇದರ ಪರಿಣಾಮವನ್ನು ಭಾರತ ಅನುಭವಿಸಬೇಕಾಗುತ್ತದೆ ಎಂದು ದರ್ಪದ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನದಲ್ಲಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಉಗ್ರರನ್ನು ಹುತಾತ್ಮರು ಎಂದಿರುವ ಪಾಕಿಸ್ತಾನ ಪ್ರಧಾನಿ, ಈ ಹುತಾತ್ಮರ ಸಾವಿಗೆ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ಹೇಗೆ ನೀಡಬೇಕೆಂದು ತಿಳಿದಿದೆ. ಇಡೀ ರಾಷ್ಟ್ರವು ತನ್ನ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಮಸ್ಕರಿಸುತ್ತದೆ. ಪಾಕಿಸ್ತಾನ ಸೇನೆಯು ಭಾರತದ ದಾಳಿಗೆ ಸಿದ್ಧವಾಗಿದೆ ಎಂದು ಹೇಳಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ