ಯಾರನ್ನೋ ಮೆಚ್ಚಿಸಲು ರಾಜನ್​ರಿಂದ ಗಾಳಿಯಲ್ಲಿ ಗುದ್ದುವ ಕೆಲಸ: ಮಾಜಿ ಆರ್​​ಬಿಐ ಗವರ್ನರ್​ಗೆ ಕೇಂದ್ರ ಸಚಿವ ಎ ವೈಷ್ಣವ್ ತರಾಟೆ

|

Updated on: Aug 20, 2023 | 12:56 PM

Ashwini Vasihnaw vs Raghuram Rajan: ತಯಾರಿಕಾ ವಲಯದಲ್ಲಿ ವಿಶ್ವದ ಫ್ಯಾಕ್ಟರಿಯಾಗುವ ಭಾರತದ ಪ್ರಯತ್ನ ನಿರುಪಯುಕ್ತ ಎಂಬ ರಘುರಾಮ್ ರಾಜನ್ ಅವರ ವಾದವನ್ನು ಕೇಂದ್ರ ಸಚಿವ ಎ ವೈಷ್ಣವ್ ಅಲ್ಲಗಳೆದಿದ್ದಾರೆ. ಇನ್ನೆರಡು ವರ್ಷದೊಳಗೆ ಭಾರತ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುತ್ತದೆ ಎನ್ನುವ ವಿಶ್ವಾಸವನ್ನು ವೈಷ್ಣವ್ ವ್ಯಕ್ತಪಡಿಸಿದ್ದಾರೆ.

ಯಾರನ್ನೋ ಮೆಚ್ಚಿಸಲು ರಾಜನ್​ರಿಂದ ಗಾಳಿಯಲ್ಲಿ ಗುದ್ದುವ ಕೆಲಸ: ಮಾಜಿ ಆರ್​​ಬಿಐ ಗವರ್ನರ್​ಗೆ ಕೇಂದ್ರ ಸಚಿವ ಎ ವೈಷ್ಣವ್ ತರಾಟೆ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
Follow us on

ಬೆಂಗಳೂರು, ಆಗಸ್ಟ್ 20: ಭಾರತ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುತ್ತಿಲ್ಲ, ಕೇವಲ ಅಸೆಂಬಲ್ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ (Raghuram Rajan) ಮಾಡಿರುವ ಟೀಕೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರದ್ದೋ ಪರವಾಗಿ ರಾಜನ್ ಅವರು ಗಾಳಿಯಲ್ಲಿ ಗುದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ವೈಷ್ಣವ್ ಟೀಕಿಸಿದ್ದಾರೆ.

‘ಒಳ್ಳೆಯ ಆರ್ಥಿಕ ತಜ್ಞರು ರಾಜಕಾರಣಿಗಳಾದರೆ ಅವರು ಆರ್ಥಿಕ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ರಘುರಾಮ್ ರಾಜನ್ ರಾಜಕಾರಣಿಯಾಗಿದ್ದಾರೆ. ಅವರು ಬಹಿರಂಗವಾಗಿ ಬಂದು, ಚುನಾವಣೆಯಲ್ಲಿ ಹೋರಾಡಬೇಕು. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸುಮ್ಮನೆ ನೆರಳ ಗುದ್ದಾಟ (Shadow Boxing) ನಡೆಸುವುದು ಸರಿಯಲ್ಲ. ಯಾರದೋ ಪರವಾಗಿ ಅವರು ಶ್ಯಾಡೋ ಬಾಕ್ಸಿಂಗ್ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಕಾಂಗ್ರೆಸ್ ಪಕ್ಷದ ಪಾಳಯದಲ್ಲಿದ್ದಾರೆ. ಚೀನಾ ಪ್ರಾಬಲ್ಯ ಹೊಂದಿರುವ ತಯಾರಿಕಾ ಕ್ಷೇತ್ರದಲ್ಲಿ ಭಾರತ ಹೆಜ್ಜೆ ಇಡುವುದನ್ನು ರಾಜನ್ ವಿರೋಧಿಸುತ್ತಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನಲ್ಲಿ ಚೀನಾದಂತೆ ಭಾರತ ಮುಂದುವರಿಯಲು ಆಗುವುದಿಲ್ಲ. ಆ ದುಸ್ಸಾಹಸದ ಬದಲು ಸರ್ವಿಸ್ ಸೆಕ್ಟರ್​ನಲ್ಲಿ ಭಾರತ ಉನ್ನತಿ ಸಾಧಿಸಬೇಕು. ಈ ಸೇವಾ ವಲಯದಲ್ಲಿ ಭಾರತಕ್ಕೆ ಹೆಚ್ಚು ಉದ್ಯೋಗ ಸೃಷ್ಟಿ ಸಾಧ್ಯ ಎಂಬುದು ರಾಜನ್ ಅವರ ಅನಿಸಿಕೆ.

ಇದನ್ನೂ ಓದಿ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್

ಭಾರತದಲ್ಲಿ ಇದೀಗ ನಡೆಯುತ್ತಿರುವ ಐಫೋನ್ ಉತ್ಪಾದನೆ ಬಗ್ಗೆಯೂ ರಘುರಾಮ್ ರಾಜನ್ ಚಕಾರ ಎತ್ತಿದ್ದಾರೆ. ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಭಾರತ ಮೊಬೈಲ್ ಫೋನ್​ಗಳನ್ನು ತಯಾರಿಸುತ್ತಿಲ್ಲ. ಅವುಗಳನ್ನು ಅಸೆಂಬಲ್ ಅಷ್ಟೇ ಮಾಡುತ್ತಿದೆ. ಇದರಿಂದ ಹೆಚ್ಚೇನೂ ಪ್ರಯೋಜನ ಇಲ್ಲ ಎಂದು ರಾಜನ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.

ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್ ಕಾರಿನ ವಿಶೇಷತೆಗಳೇನು?
ಹ್ಯಾಪಿ ಬರ್ತ್ ಡೇ MSD
ಹ್ಯಾಪಿ ಕಟುಂಬದ ಫೋಟೋ ಹಂಚಿಕೊಂಡ ಸೋನು ಗೌಡ 

ರಘುರಾಮ್ ರಾಜನ್ ಅವರ ಈ ಹೇಳಿಕೆಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು ಕೊಟ್ಟಿದ್ದಾರೆ. ಯಾವುದೇ ದೇಶವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆ ಆರಂಭಿಸಲು ಮೊದಲು ಹಾದಿ ತುಳಿಯುವುದು ಅಸೆಂಬ್ಲಿಂಗ್ ಮೂಲಕವೇ. ಬಳಿಕ ಬೇರೆ ಬೇರೆ ಬಿಡಿಭಾಗಗಳ ಉತ್ಪಾದನೆ ನಡೆಯುತ್ತದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಾಧುನಿಕ ಐವಾರ್ನ್, ಸ್ಮಾರ್ಟ್​ಫಾಗ್ ಸೆಕ್ಯೂರಿಟಿ ವ್ಯವಸ್ಥೆ ರೂಪಿಸಿರುವ ಗೋದ್ರೇಜ್​ಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್

‘ಇವತ್ತಿನ ಸಂಕೀರ್ಣ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಯಅವ ದೇಶವೂ ಶೇ. 40ಕ್ಕಿಂತ ಹೆಚ್ಚು ವ್ಯಾಲ್ಯು ಅಡಿಶನ್ (ಮೌಲ್ಯ ಹೆಚ್ಚಳ) ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಭಾರತ ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಇನ್ನೆರಡು ವರ್ಷದೊಳಗೆ ಶೇ. 30ಕ್ಕಿಂತ ಹೆಚ್ಚು ವ್ಯಾಲ್ಯು ಅಡಿಶನ್ ಮಟ್ಟ ತಲುಪುತ್ತದೆ’ ಎಂದು ಎ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Sun, 20 August 23