ಜಾಗತಿಕ ಪ್ರಕ್ಷುಬ್ದತೆಯಲ್ಲೂ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿ: ಸಿಇಎ ಅನಂತನಾಗೇಶ್ವರನ್ ಹೇಳಿಕೆ
Indian economy growing strongly: ಜಾಗತಿಕ ಅನಿಶ್ಚಿತ ವಾತಾವರಣದ ಮಧ್ಯೆಯೂ ಭಾರತದ ಆರ್ಥಿಕತೆ ಉತ್ತಮ ಕ್ಷಮತೆಯಲ್ಲಿ ಬೆಳೆಯುತ್ತಿದೆ ಎಂದು ಸಿಇಎ ಅನಂತನಾಗೇಶ್ವರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶ್ವದ ದೊಡ್ಡ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗದಲ್ಲಿ ಬೆಳೆಯುತ್ತಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದಾರೆ. ಉದ್ಯೋಗಸೃಷ್ಟಿ, ಕೃತಕ ಬುದ್ಧಿಮತ್ತೆ, ಆಹಾರ ಭದ್ರತೆ, ತಯಾರಿಕೆ ಇತ್ಯಾದಿ ಕೆಲ ಕ್ಷೇತ್ರಗಳನ್ನು ಆದ್ಯತೆ ರೀತಿಯಲ್ಲಿ ಪರಿಗಣಿಸಬೇಕು ಎಂದೂ ಸಲಹೆ ನೀಡಿದ್ದಾರೆ.

ನವದೆಹಲಿ, ಮೇ 5: ಜಾಗತಿಕವಾಗಿ ಸವಾಲಿನ ವಾತಾರಣ ಅಸ್ತಿತ್ವದ್ದರೂ ಭಾರತದ ಆರ್ಥಿಕ ಕ್ಷಮತೆ (economic resilience) ಉತ್ತಮವಾಗಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ (Chief Economic Advisor V Anantha Nageswaran) ಹೇಳಿದ್ದಾರೆ. ಅಶೋಕ ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಈಗ ಬರುತ್ತಿರುವ ಆರ್ಥಿಕ ಸೂಚಕಗಳು ಭಾರತದ ಆರ್ಥಿಕತೆ ಉತ್ತಮವಾಗಿ ಸಾಗುತ್ತಿರುವುದನ್ನು ಸಾರಿ ಹೇಳುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಜಾಗತಿಕವಾಗಿ ಕಠಿಣ ಪರಿಸ್ಥಿತಿ ಇದ್ದಾಗ್ಯೂ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. 2024-25ರ ವರ್ಷದ ಜಿಡಿಪಿ ಎಷ್ಟು ಎಂಬುದು ಈ ತಿಂಗಳು (ಮೇ) ಬರಬೇಕಿದೆಯಾದರೂ ಈಗಿರುವ ಸೂಚಕಗಳು ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ತೋರಿಸುತ್ತಿವೆ’ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಮುಂದಿನ ಎರಡು ವರ್ಷದಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಅತಿವೇಗದಲ್ಲಿ ಬೆಳವಣಿಗೆ ಹೊಂದಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. 2025ರ ಏಪ್ರಿಲ್ ತಿಂಗಳಲ ಐಎಂಎಫ್ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯ ಪ್ರಕಾರ 2025 ಮತ್ತು 2026ರಲ್ಲಿ ಭಾರತದ ಆರ್ಥಿಕತೆ ಶೇ. 6.2 ಮತ್ತು ಶೇ. 6.3ರಷ್ಟು ಬೆಳೆಯಬಹುದು ಎಂದು ಹೇಳಿದೆ. ಆರ್ಬಿಐ ಹಾಗೂ ಇನ್ನೂ ಬೇರೆ ಬೇರೆ ಸಂಸ್ಥೆಗಳೂ ಕೂಡ ಭಾರತದ ಮುಂದಿನ ಆರ್ಥಿಕ ಬೆಳವಣಿಗೆ ಶೇ. 6ಕ್ಕಿಂತಲೂ ಅಧಿಕ ಇರಬಹುದು ಎನ್ನುತ್ತಿವೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ
ಭಾರತ ಸ್ಥೂಲ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವುದು ಅವಶ್ಯ
‘ಭಾರತ ತನ್ನ ವೇಗವನ್ನು ಕಾಯ್ದುಕೊಳ್ಳಬೇಕಾದರೆ ಸ್ಥೂಲ ಆರ್ಥಿಕ ಸ್ಥಿರತೆಯನ್ನು (Macro Economic stability) ಕಾಯ್ದುಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಸೃಜನಾತ್ಮಕತೆ (Innovation) ಹಾಗೂ ಸಮಗ್ರ ಬೆಳವಣಿಗೆಯ ತಂತ್ರಗಳನ್ನು (Inclusive development strategies) ಅಳವಡಿಸಬೇಕಾಗುತ್ತದೆ. ಮಾನವ ಬಂಡವಾಳ, ತಂತ್ರಜ್ಞಾನ, ಮೂಲಸೌಕರ್ಯಗಳಲ್ಲಿ ನಿರ್ದಿಷ್ಟ ರೀತಿಯಲ್ಲಿ ಹೂಡಿಕೆಗಳು (targeted investment) ಬೇಕು. ರಚನಾತ್ಮಕವಾದ ಸುಧಾರಣಾ ಕ್ರಮಗಳನ್ನು ಸರ್ಕಾರ ಮುಂದುವರಿಸಬೇಕು’ ಎಂದು ವಿ ಅನಂತ ನಾಗೇಶ್ವರನ್ ಸಲಹೆ ನೀಡಿದ್ದಾರೆ.
ಭಾರತಕ್ಕೆ ಮುಖ್ಯವಾದ ಆದ್ಯತಾ ಕ್ಷೇತ್ರಗಳು…
ಅಶೋಕ ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಇಒ ವಿ ಅನಂತನಾಗೇಶ್ವರನ್ ಅವರು ಭಾರತ ಈಗ ಆದ್ಯತೆ ಮೇರೆ ಗಮನ ಹರಿಸಬಹುದಾದ ಕೆಲ ಕ್ಷೇತ್ರಗಳನ್ನು ಹೆಸರಿಸನ್ನು ಪ್ರಸ್ತಾಪಿಸಿದ್ದಾರೆ. ಅವುಗಳು ಇಂತಿವೆ:
- ವಿದ್ಯುತ್
- ಉದ್ಯೋಗ ಸೃಷ್ಟಿ
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
- ಶಿಕ್ಷಣ ಮತ್ತು ಕೌಶಲ್ಯ
- ಮ್ಯಾನುಫ್ಯಾಕ್ಚರಿಂಗ್
- ಆಹಾರ ಭದ್ರತೆ
- ಖಾಸಗಿ ವಲಯ ಬಂಡವಾಳ ಹೂಡಿಕೆ
ಅಶೋಕ ಯೂನಿವರ್ಸಿಟಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೀತಿ ಆಯೋಗ್ನ ವೈಸ್ ಛೇರ್ಮನ್ ಸುಮನ್ ಬೇರಿ ಅವರೂ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, 2047ರಲ್ಲಿ ಭಾರತ ಉನ್ನತ ಆದಾಯದ ದೇಶವಾಗಿ ಅಭಿವೃದ್ಧಿಯಾಗುವ ದೂರಗಾಮಿ ಕನಸನ್ನು ತೆರೆದಿಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Mon, 5 May 25