ಮುಂಬೈ, ಮಾರ್ಚ್ 5: ಮುಂಬರುವ ತಿಂಗಳಿಂದ ಅಮೆರಿಕ ಸರ್ಕಾರ ಭಾರತ ಸೇರಿದಂತೆ ಎಲ್ಲಾ ದೇಶಗಳ ಮೇಲೂ ಪ್ರತಿಸುಂಕ ಹೇರಿಕೆ ನೀತಿ ಜಾರಿಗೆ ತರುತ್ತಿದೆ. ಭಾರತದ ಆರ್ಥಿಕತೆಗೆ ಬಹಳಷ್ಟು ಹಿನ್ನಡೆಯಾಗುತ್ತದೆ ಎಂದು ಹಲವರು ಎಚ್ಚರಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅಮೆರಿಕದ ಟ್ಯಾರಿಫ್ ಹೇರಿಕೆಯಿಂದ ಭಾರತದ ಆರ್ಥಿಕತೆಗೆ ಎಷ್ಟು ನಷ್ಟವಾಗಬಹುದು? ಮನಿ9 ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆಯಲ್ಲಿ (HDFC during Money9 Financial Freedom Summit 2025) ಈ ವಿಚಾರವನ್ನು ಚರ್ಚಿಸಲಾಯಿತು. ಟಿವಿ9 ನೆಟ್ವರ್ಕ್ನ ಸಂಪಾದಕ ಆರ್ ಶ್ರೀಧರನ್ ಜೊತೆ ಸಂವಾದದಲ್ಲಿ ಎಚ್ಡಿಎಫ್ಸಿ ಸಿಇಒ ಕೇಕಿ ಮಿಸ್ತ್ರಿ (Keki Mistry) ಮಾತನಾಡುತ್ತಾ, ಅಮೆರಿಕದ ಟ್ಯಾರಿಫ್ ಹೇರಿಕೆಯಿಂದ ಭಾರತದ ಆರ್ಥಿಕತೆಗೆ ಹೆಚ್ಚೇನು ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದು, ಅದಕ್ಕೆ ಕಾರಣವನ್ನೂ ಬಿಚ್ಚಿಟ್ಟರು. ಚೀನಾ ಮೊದಲಾದ ರಫ್ತು ಆಧಾರಿತ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ದೇಶೀಯ ಅನುಭೋಗದ ಮೇಲೆ ನಿಂತಿರುವ ಸಂಗತಿಯನ್ನು ಎತ್ತಿ ತೋರಿಸಿದ ಕೇಕಿ ಮಿಸ್ತ್ರಿ, ಇದೇ ಕಾರಣಕ್ಕೆ ಭಾರತಕ್ಕೆ ಅಮೆರಿಕದ ಸುಂಕ ಹೇರಿಕೆ ಪರಿಣಾಮ ನಗಣ್ಯವಾಗಿರುತ್ತದೆ ಎಂದರು.
‘ನ್ಯಾವಿಗೇಟಿಂಗ್ ಟ್ಯಾರಿಫೈಯಿಂಗ್ ಟೈಮ್ಸ್’ ಹೆಸರಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಅಮೆರಿಕದ ಟ್ಯಾರಿಫ್ ಕ್ರಮದಿಂದ ಭಾರತದ ಜಿಡಿಪಿ ಮೇಲೆ ಶೇ. 2-3 ರಷ್ಟು ಮಾತ್ರ ಪರಿಣಾಮ ಬೀರಬಹುದು ಎಂದು ಹೇಳಿದರು.
‘ಅದು ಜಾಗತಿಕವಾಗಿ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ಜಾಗತಿಕವಾಗಿ ಮೈತ್ರಿಗಳ ಪುನಾರಚನೆ ಆಗಬಹುದು. ಕೆಲ ಮೈತ್ರಿಗಳಿಗೆ ಧಕ್ಕೆಯಾಗಬಹುದು. ಭಾರತಕ್ಕೆ ದೊಡ್ಡ ಹೊಡೆತವೇನೂ ಆಗುವುದಿಲ್ಲ. ಭಾರತದ ರಫ್ತು ನಮ್ಮ ಜಿಡಿಪಿ ಶೇ. 22ರಷ್ಟಿರಬಹುದು. ಒಟ್ಟಾರೆ ರಫ್ತಿನಲ್ಲಿ ಅಮೆರಿಕದ ಪಾಲು ಶೇ. 17-18ರಷ್ಟಿರಬಹುದು. ಹೀಗಾಗಿ, ಟ್ಯಾರಿಫ್ ಹೇರಿಕೆಯಿಂದ ಭಾರತದ ಜಿಡಿಪಿ ಮೇಲೆ ಶೇ. 2-3ರಷ್ಟು ಮಾತ್ರವೇ ಪರಿಣಾಮ ಬೀರಬಹುದು’ ಎಂದು ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ವಿವರಿಸಿದರು.
ಅಮೆರಿಕದ ಟ್ಯಾರಿಫ್ ಕ್ರಮಕ್ಕೆ ಬದಲಾಗಿ ಕೆನಡಾ, ಮೆಕ್ಸಿಕೋ, ಚೀನಾ ದೇಶಗಳೂ ಕೂಡ ಅಮೆರಿಕದ ಸರಕುಗಳ ಮೇಲೆ ಸುಂಕ ಹಾಕುತ್ತಿವೆ. ಒಟ್ಟಾರೆ ಜಾಗತಿಕವಾಗಿ ಟ್ಯಾರಿಫ್ ಯುದ್ಧ ಚಾಲನೆಗೆ ಬರುವ ಕುರುಹು ದಟ್ಟವಾಗಿದೆ. ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆ ದುರ್ಬಲಗೊಳ್ಳುವ ಸಾಧ್ಯತೆ ಕಾಣುತ್ತಿದೆ. ಈ ಅಂಶಗಳನ್ನು ಆರ್ ಶ್ರೀಧರನ್ ಮತ್ತು ಕೇಕಿ ಮಿಸ್ತ್ರಿ ಚರ್ಚಿಸಿದರು. ಸುಂಕ ಸಮರದಿಂದ ದುರ್ಬಲ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ತೋರಿಸಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿ, ಒಪ್ಪಲಾಯಿತು. ಜಾಗತಿಕ ವಿದ್ಯಮಾನದಲ್ಲಿ ಭಾರತ ತಾನೊಂದೇ ಏಕಾಂಗಿಯಾಗಿ ನಿಲ್ಲಲು ಕಷ್ಟವೆಂಬುದನ್ನು ಕೇಕಿ ಮಿಸ್ತ್ರಿ ಒಪ್ಪಿದರು.
ಇದನ್ನೂ ಓದಿ: ಚೀನಾ, ಮೆಕ್ಸಿಕೋ, ಕೆನಡಾ ಆಯ್ತು, ಏ. 2ರಿಂದ ಭಾರತದ ಮೇಲೂ ಅಮೆರಿಕದಿಂದ ಪ್ರತಿ ಸುಂಕ; ಏನಿದು ಟ್ಯಾರಿಫ್ ನೀತಿ?
ಟಿವಿ9 ನೆಟ್ವರ್ಕ್ ವತಿಯಿಂದ ಆಯೋಜಿಸಲಾದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಇದು ಮೂರನೇ ವರ್ಷದ್ದಾಗಿದೆ. ಹಿಂದಿನ ಎರಡು ಸಮಿಟ್ಗಳು ಯಶಸ್ವಿಯಾಗಿದ್ದವು. ಈ ವರ್ಷ ಹಣಕಾಸು ಕ್ಷೇತ್ರದ ಹಲವು ದಿಗ್ಗಜು ಪಾಲ್ಗೊಂಡಿದ್ದರು. ಮುಂಬೈನ ಸಾಂಟಾಕ್ರೂಜ್ನ ಹೋಟೆಲ್ ತಾಜ್ನಲ್ಲಿ ನಡೆದ ಸಮಾವೇಶವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉದ್ಘಾಟನೆ ಮಾಡಿದರು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Wed, 5 March 25