ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಆಟವಾಡುತ್ತಿದ್ದ ಮಗು ಮೇಲೆ ಹರಿದ ಜೆಸಿಬಿ
ಬೆಂಗಳೂರಿನ ಕಾಡುಗೋಡಿ ಬಳಿ 2 ವರ್ಷದ ಮಗುವಿನ ಮೇಲೆ ಜೆಸಿಬಿ ಹರಿದ ಪರಿಣಾಮ ಮಗು ಮೃತಪಟ್ಟಿದೆ. ಘಟನೆಯಲ್ಲಿ ಜೆಸಿಬಿ ಚಾಲಕನ ಅಜಾಗರೂಕತೆ ಪ್ರಮುಖ ಕಾರಣ ಎನ್ನಲಾಗಿದೆ. ಚಾಲಕ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ರೋಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.

ಬೆಂಗಳೂರು, ಫೆಬ್ರವರಿ 19: ಜೆಸಿಬಿ ಹರಿದು ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ (death) ಹೊಂದಿರುವಂತಹ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್ನಲ್ಲಿ ನಡೆದಿದೆ. ಥನವ್ ರೆಡ್ಡಿ ಮೃತ ಮಗು. ಜೆಸಿಬಿ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಜೆಸಿಬಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮನೆ ಮುಂದೆ ಥನವ್ ರೆಡ್ಡಿ ಆಟವಾಡುತ್ತಿದ್ದ. ಈ ವೇಳೆ ಆತನ ಮೇಲೆ ಜೆಸಿಬಿ ಹರಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗುವನ್ನು ವೈದೇಹಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಥನವ್ ರೆಡ್ಡಿ(2) ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಆಂಧ್ರದ ಮದನಪಲ್ಲಿ ಮೂಲದ ದಂಪತಿಯ ಪುತ್ರ ಥವನ್. ಮದುವೆಯಾಗಿ 4 ವರ್ಷದ ನಂತರ ಹುಟ್ಟಿದ್ದ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಥವನ್ ತಂದೆ, ಎರಡು ವರ್ಷದಿಂದ ಬಾಲಾಜಿ ಲೇಔಟ್ನಲ್ಲಿ ವಾಸವಿದ್ದರು. ಇದೇ ಲೇಔಟ್ನಲ್ಲಿ ಹೊಸ ಮನೆ ಕೂಡ ಕಟ್ಟಿಸುತ್ತಿದ್ದರು. ನಿನ್ನೆ ಸಂಜೆ ಮನೆ ಪಕ್ಕದಲ್ಲೇ ಜೆಸಿಬಿ ಕೆಲಸ ಮಾಡುತ್ತಿತ್ತು. ಕೆಲಸ ಮುಗಿದ ಬಳಿಕ ವೇಗವಾಗಿ ಚಾಲಕ ಜೆಸಿಬಿ ಚಲಾಯಿಸಿದ್ದ. ಈ ವೇಳೆ ಮನೆ ಮುಂದೆ ಇದ್ದ ಮಗು ಜೆಸಿಬಿಗೆ ಸಿಲುಕಿದೆ. ಇನ್ನು ಮಗು ಸಿಲುಕಿರೋದೇ ಜೆಸಿಬಿ ಚಾಲಕನಿಗೆ ಗೊತ್ತೇ ಆಗಿಲ್ಲ. ಮಗು ಬಿದ್ದಿರೋದನ್ನ ನೋಡಿ ಪೋಷಕರು ಕಿರುಚಿಕೊಂಡಿದ್ದಾರೆ. ಬಳಿಕ ಜೆಸಿಬಿ ಚಾಲಕನಿಗೆ ವಿಚಾರ ಗೊತ್ತಾಗಿ ಎಸ್ಕೇಪ್ ಆಗಿದ್ದಾನೆ.
ಜಿಮ್ಸ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ರೋಗಿ ಆತ್ಮಹತ್ಯೆ
ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ರೋಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಕಲಬುರಗಿ ನಗರದ ಝಮ್ ಝಮ್ ಕಾಲೋನಿಯ ನಿವಾಸಿ ಸೈಯದ್ ಅಝರೋದ್ದಿನ್ (33) ಆತ್ಮಹತ್ಯೆ ಮಾಡಿಕೊಂಡ ರೋಗಿ.
ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಮನನೊಂದ ಪತಿ ಆತ್ಮಹತ್ಯೆಗೆ ಶರಣು
ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಸೈಯದ್ ಅಝರೋದ್ದಿನ್, ಅದರಿಂದ ಮನನೋಂದು ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಕೋಲಾರ: ಶ್ರೀನಿವಾಸಪುರ ತಾಲೂಕಿನ ಬಟ್ಟುವಾರಪಲ್ಲಿ ತಿರುವಿನಲ್ಲಿ ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೊಣ್ಣಕಲ್ಲು ಗ್ರಾಮದ ನರಸಿಂಹ(38) ಮೃತ ವ್ಯಕ್ತಿ.
ಇದನ್ನೂ ಓದಿ: ಬೆಂಗಳೂರು: 5 ವರ್ಷದ ಮಗಳ ಕೊಂದು ಗ್ರಾ.ಪಂ ಅಧ್ಯಕ್ಷೆ ಆತ್ಮಹತ್ಯೆ, ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ನೇಣಿಗೆ ಶರಣು
ಅರಣ್ಯ ಇಲಾಖೆಯಲ್ಲಿ ದಿನಕೂಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Wed, 19 February 25