ಕಂಗನಾಗೆ ಇರುವ ಕೆಟ್ಟ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ನಟಿ ಕುನಿಕಾ
ನಟಿ ಕಂಗನಾ ರಣಾವತ್ ಅವರನ್ನು ಅನೇಕರು ವಿರೋಧಿಸುತ್ತಾರೆ. ಅಂಥವರ ಪೈಕಿ ಕುನಿಕಾ ಸದಾನಂದ್ ಕೂಡ ಇದ್ದಾರೆ. ಕಂಗನಾ ಅವರನ್ನು ಕಂಡರೆ ತಮಗೆ ಯಾಕೆ ಆಗುವುದಿಲ್ಲ ಎಂದು ಕುನಿಕಾ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುನಿಕಾ ಸದಾನಂದ್ ಅವರು ಕಂಗನಾ ಬಗ್ಗೆ ಹಲವು ಟೀಕೆಗಳನ್ನು ಮಾಡಿದ್ದಾರೆ.

ಹಲವು ಸಿನಿಮಾಗಳಲ್ಲಿ ನಟಿಸಿರುವ ಕುನಿಕಾ ಸದಾನಂದ್ (Kunickaa Sadanand) ಅವರು ಹಿಂದಿ ಕಿರುತೆರೆಯಲ್ಲೂ ಫೇಮಸ್ ಆಗಿದ್ದಾರೆ. ಈಗ ಅವರು ನಟಿ ಕಂಗನಾ ರಣಾವತ್ ಬಗ್ಗೆ ಮಾತನಾಡಿ ಸುದ್ದಿ ಆಗುತ್ತಿದ್ದಾರೆ. ಕಂಗನಾ ರಣಾವತ್ (Kangana Ranaut) ಅವರು ಈಗಾಗಲೇ ಹಲವಾರು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಬಾಲಿವುಡ್ನಲ್ಲೇ ಬೆಳೆದ ಅವರಿಗೆ ಬಾಲಿವುಡ್ (Bollywood) ಬಗ್ಗೆ ಇರುವ ಅಸಮಾಧಾನ ಒಂದೆರಡಲ್ಲ. ಆ ಬಗ್ಗೆ ಕುನಿಕಾ ಸದಾನಂದ್ ಅವರು ಮಾತನಾಡಿದ್ದಾರೆ. ‘ನನಗೆ ಕಂಗನಾ ರಣಾವತ್ ಅವರನ್ನು ಕಂಡರೆ ಆಗುವುದಿಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಅಲ್ಲದೇ, ತಮ್ಮ ಈ ಹೇಳಿಕೆಗೆ ಕಾರಣ ಏನು ಎಂಬುದನ್ನು ಕೂಡ ಕುನಿಕಾ ಸದಾನಂದ್ ವಿವರಿಸಿದ್ದಾರೆ.
ನಟಿ ಕಂಗನಾ ರಣಾವತ್ ಅವರು ಬಾಲಿವುಡ್ನ ಅನೇಕರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಹೃತಿಕ್ ರೋಷನ್, ಜಾವೇದ್ ಅಖ್ತರ್, ಕರಣ್ ಜೋಹರ್, ರಣಬೀರ್ ಕಪೂರ್ ಸೇರಿದಂತೆ ಹಲವರ ವಿರೋಧವನ್ನು ಕಂಗನಾ ಕಟ್ಟಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಹಲವರಿಗೆ ಕಂಗನಾ ಮೇಲೆ ದ್ವೇಷ ಇದೆ. ಅದಕ್ಕೆ ಕಾರಣ ಏನೆಂದು ಕುನಿಕಾ ತಿಳಿಸಿದ್ದಾರೆ.
‘ಕಂಗನಾ ಅವರ ಗುಣವನ್ನು ನೋಡಿ. ಅವರ ಬಾಯಿಯಿಂದ ಒಂದಾದರೂ ಒಳ್ಳೆಯ ಮಾತು ಬರುತ್ತಾ? ಯಾವಾಗ ನೋಡಿದರೂ ಅಸಂಬದ್ಧ ಮಾತನಾಡುತ್ತಾರೆ. ಯಾವಾಗಲೂ ಅವರು ನೆಗೆಟಿವ್. ಚಿತ್ರರಂಗ ಆಕೆಯನ್ನು ಬೆಳೆಸಿತು, ಹೀರೋಯಿನ್ ಮಾಡಿತು. ಆಕೆ ಹೊರಗಿನವರು. ಆದರೂ ಅವಕಾಶ ಸಿಕ್ಕಿತು. ಶಾರುಖ್ ಖಾನ್, ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ಧಿಖಿ ಕೂಡ ಹೊರಗಿನವರಾಗಿದ್ದರು. ಆದರೆ ಕಂಗನಾ ಯಾವಾಗಲೂ ಕೆಟ್ಟದಾಗಿ ಮಾತನಾಡುತ್ತಾರೆ. ಜನರ ಬಗ್ಗೆ ಆಕೆ ಆ ರೀತಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ನನಗೆ ಅವರು ಇಷ್ಟವಿಲ್ಲ’ ಎಂದು ಕುನಿಕಾ ಹೇಳಿದ್ದಾರೆ.
‘ಅವರೇ ನಟಿ ಆಗಬೇಕು, ನಿರ್ದೇಶಕಿ ಆಗಬೇಕು, ನಿರ್ಮಾಪಕಿಯೂ ಆಗಬೇಕು. ಯಾಕೆ? ಎಲ್ಲರಿಗೂ ಅವರವರ ಕೆಲಸ ಇದೆ. ಅದನ್ನು ಅವರಿಗೆ ಮಾಡಲು ಬಿಡಿ. ಅವರ ಸಿನಿಮಾಗೆ ಬಂಡವಾಳ ಎಲ್ಲಿಂದ ಬರುತ್ತೆ ಎಂಬುದು ತಿಳಿದಿಲ್ಲ. ಎಲ್ಲ ಸಿನಿಮಾ ಫ್ಲಾಪ್ ಆಗುತ್ತವೆ. ಅವರ ನಟನೆ ನನಗೆ ಇಷ್ಟ. ಹಾಗಾಗಿ ಅವರ ಸಿನಿಮಾ ಗೆಲ್ಲಲಿ ಎಂದು ನಾನು ಹಾರೈಸುತ್ತೇನೆ. ಆಕೆ ಮಣಿಕರ್ಣಿಕಾ ಸಿನಿಮಾಗೆ ಬಂಡವಾಳ ಪಡೆದರು. ನಿರ್ದೇಶಕರನ್ನು ನೇಮಿಸಿಕೊಂಡರು. ಆನಂತರ ಅಭದ್ರತೆಯಿಂದ ನಿರ್ದೇಶಕರನ್ನು ಹೊರಗಿಟ್ಟರು’ ಎಂದು ಕುನಿಕಾ ಸದಾನಂದ್ ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ಕಂಗನಾ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದು ನಿಜವೇ? ನಟಿಯ ಕಳ್ಳಾಟ ಬಯಲು
ಹಲವು ವರ್ಷಗಳಿಂದ ಕಂಗನಾ ರಣಾವತ್ ಅವರಿಗೆ ಚಿತ್ರರಂಗದಲ್ಲಿ ಸಕ್ಸಸ್ ಸಿಕ್ಕಿಲ್ಲ. ಮಾಡಿದ ಸಿನಿಮಾಗಳೆಲ್ಲವೂ ಸೋತಿವೆ. ಈಗ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆ ಆಗಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.