
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಈ ಚಿತ್ರಕ್ಕೆ ತಗುಲಲಿರುವ 4 ಸಾವಿರ ಕೋಟಿ ರೂಪಾಯಿ ಬಜೆಟ್ (Ramayana Movie Budget) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಕೆಲವರಿಗೆ ಈ ಸಂಖ್ಯೆಯ ಮೇಲೆ ಅನುಮಾನ ಇದೆ. ಇದೀಗ ಈ ಬೃಹತ್ ಮೊತ್ತದ ಹಿಂದಿರುವ ಸತ್ಯಾಸತ್ಯತೆ ಮತ್ತು ಹಾಲಿವುಡ್ ಲೆಕ್ಕಾಚಾರವನ್ನು ನಟ ಹಾಗೂ ಚಿತ್ರದ ಸಹ-ನಿರ್ಮಾಪಕ ಯಶ್ (Yash) ಸ್ಪಷ್ಟಪಡಿಸಿದ್ದಾರೆ.
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಯಶ್, ಈ 4 ಸಾವಿರ ಕೋಟಿ ಬಜೆಟ್ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿದೆ ಎಂದು ಸ್ಪಷ್ಟಪಡಿಸಿದರು. ‘4 ಸಾವಿರ ಕೋಟಿ ರೂಪಾಯಿ ಎಂಬುದು ರಾಮಾಯಣ ಚಿತ್ರದ ಮೊದಲ ಭಾಗದ ನಿರ್ಮಾಣ ವೆಚ್ಚ ಮಾತ್ರವಲ್ಲ. ಇದು ಈ ಸಿನಿಮಾದ ಎರಡು ಭಾಗಗಳ ಸಂಪೂರ್ಣ ನಿರ್ಮಾಣ, ಜಾಗತಿಕ ಮಟ್ಟದ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಒಳಗೊಂಡ ಒಟ್ಟು ಬಜೆಟ್ ಆಗಿದೆ. ಇದು ಹಾಲಿವುಡ್ ಮಾದರಿಯ ಲೆಕ್ಕಾಚಾರ’ ಎಂದು ಯಶ್ ಹೇಳಿದ್ದಾರೆ.
‘ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪಲು ಹಾಲಿವುಡ್ ಮಾದರಿಯಲ್ಲೇ ಪ್ರಚಾರ ಮತ್ತು ವಿತರಣೆಗೆ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗುತ್ತಿದೆ. ಹಾಗಾಗಿ, ಬರುವ ಆದಾಯವೂ ಜಾಗತಿಕ ಮಟ್ಟದಲ್ಲೇ ಇರಲಿದೆ’ ಎಂದು ಯಶ್ ಅವರು ವಿವರಿಸಿದ್ದಾರೆ. ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಕೂಡ ‘ರಾಮಾಯಣ’ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ಇಂತಹ ಬೃಹತ್ ಹೂಡಿಕೆ ಅತ್ಯಗತ್ಯ ಎಂದು ಯಶ್ ಪ್ರತಿಪಾದಿಸಿದ್ದಾರೆ. ‘ಸಿನಿಮಾ ಎನ್ನುವುದು ದೇಶದ ಸಾಫ್ಟ್ ಪವರ್. ರಾಮಾಯಣ ಹಾಗೂ ನನ್ನ ಮುಂಬರುವ ಟಾಕ್ಸಿಕ್ ಸಿನಿಮಾಗಳು ಭಾರತೀಯ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿ ನೆಲೆಗೊಳಿಸುವ ಸಣ್ಣ ಪ್ರಯತ್ನಗಳಾಗಿವೆ’ ಎಂದು ಯಶ್ ಹೆಮ್ಮೆಯಿಂದ ಹೇಳಿದ್ದಾರೆ.
ಇದನ್ನೂ ಓದಿ: ‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್
ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲು ಸಜ್ಜಾಗಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಅವರು ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್ ಹಾಗೂ ರವಿ ದುಬೆ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.