AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಪ್ರಚಾರ ಮಾಡದ ಸಿಎಂ ವಿಜಯ್; ಆದರೂ ಹೇಗಿದೆ ಅಭಿಮಾನಿಗಳ ಕ್ರೇಜ್?

ಜುಲೈ 23ರಂದು ವಿಶ್ವಾದ್ಯಂತ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗುತ್ತಿದೆ. ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಸಂಭ್ರಮಿಸಲು ದಳಪತಿ ವಿಜಯ್ ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಸಿನಿಮಾದ ಬಾಕ್ಸ್ ಆಫೀಸ್ ಭವಿಷ್ಯ ಏನಾಗಲಿದೆ ಎಂಬ ಕೌತುಕ ಸಿನಿಪ್ರಿಯರಿಗೆ ಇದೆ.

‘ಜನ ನಾಯಗನ್’ ಪ್ರಚಾರ ಮಾಡದ ಸಿಎಂ ವಿಜಯ್; ಆದರೂ ಹೇಗಿದೆ ಅಭಿಮಾನಿಗಳ ಕ್ರೇಜ್?
Thalapathy Vijay
ಮದನ್​ ಕುಮಾರ್​
|

Updated on: Jul 22, 2026 | 5:43 PM

Share

ಮುಖ್ಯಾಂಶಗಳು

  • ನಟ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಕನ್’ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
  • ರಿಮೇಕ್, ಲೀಕ್ ಹಾಗೂ ವಿಜಯ್ ಪ್ರಚಾರದಿಂದ ದೂರ ಉಳಿದಿರುವುದರಿಂದ ಕಡಿಮೆ ಕ್ರೇಜ್?
  • ವಿಜಯ್ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳಿಗೆ ಕೊನೆಯ ಅವಕಾಶ.

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣುತ್ತಿದೆ. ತೆಲುಗಿನಲ್ಲಿ ಈ ಚಿತ್ರವು ‘ಜನ ನಾಯಕಡು’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ‘ಜನ್ ನೇತ’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಮನೆ ಮಾಡಿದೆ. ಈ ನಡುವೆ ದಳಪತಿ ವಿಜಯ್ (Thalapathy Vijay) ಅವರು ಈ ಸಿನಿಮಾವನ್ನು ಪ್ರಚಾರ ಮಾಡದೇ ಇರುವುದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ.

ಸಾಮಾನ್ಯವಾಗಿ ವಿಜಯ್ ಅಭಿನಯದ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂದರೆ ಚಿತ್ರಮಂದಿರಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ, ಈ ಬಾರಿಯ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಹೈಪ್ ಅಥವಾ ಕ್ರೇಜ್ ಕಂಡುಬರುತ್ತಿಲ್ಲ. ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಈ ಚಿತ್ರವು ರಿಮೇಕ್ ಆಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಕೊಂಚ ತಗ್ಗಿಸಿದೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಅಂತರ್ಜಾಲದಲ್ಲಿ ಲೀಕ್ ಆಗಿದ್ದು ಪ್ರಚಾರಕ್ಕೆ ಹಿನ್ನಡೆಯಾಗಿದೆ. ರಾಜಕೀಯದಲ್ಲಿ ನಿರತರಾದ ಬಳಿಕ ವಿಜಯ್ ಅವರು ಚಿತ್ರದ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿದಿರುವುದು ಅಭಿಮಾನಿಗಳಿಗೆ ಕೊಂಚ ನಿರಾಶೆ ಮೂಡಿಸಿದೆ. ಈ ಎಲ್ಲ ಮೈನಸ್ ಅಂಶಗಳ ನಡುವೆಯೂ ಈ ಚಿತ್ರಕ್ಕೆ ಹಲವು ಕಡೆಗಳಲ್ಲಿ ಟಿಕೆಟ್ ಬುಕಿಂಗ್ ಚೆನ್ನಾಗಿ ಆಗುತ್ತಿದೆ. ಹಾಗಾಗಿ ದೊಡ್ಡ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

ಅಭಿಮಾನಿಗಳಿಗೆ ಇದು ಕೊನೆಯ ಅವಕಾಶ:

ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನವೇ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ, ವಿವಿಧ ತಾಂತ್ರಿಕ ಹಾಗೂ ಕಾನೂನು ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಪ್ರಸ್ತುತ ವಿಜಯ್ ಅವರು ಪೂರ್ಣಪ್ರಮಾಣದ ರಾಜಕೀಯ ಪ್ರವೇಶ ಮಾಡಿದ್ದು, ಸಿನಿಮಾ ರಂಗದಿಂದ ಸಂಪೂರ್ಣವಾಗಿ ಹೊರನಡೆದು ಸಾರ್ವಜನಿಕ ಸೇವೆ ಹಾಗೂ ಆಡಳಿತಾತ್ಮಕ ಕೆಲಸಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಬೆಳ್ಳಿಪರದೆ ಮೇಲೆ ವಿಜಯ್ ಅವರ ನಟನೆಯನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳಿಗೆ ಇದು ಕೊನೆಯ ಅವಕಾಶವಾಗಿದೆ.

ಇನ್ನೈದು ವರ್ಷ ನಟನೆಯಿಂದ ದೂರ:

ಕನಿಷ್ಠ ಮುಂಬರುವ 5 ವರ್ಷಗಳ ಕಾಲ ವಿಜಯ್ ನಟನೆಯತ್ತ ಗಮನಹರಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ರಾಜಕೀಯ ಕಾರ್ಯಗಳಿಗಾಗಿ ನಟನೆಯನ್ನು ಸಂಪೂರ್ಣವಾಗಿ ತೊರೆಯಲು ಅವರು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾ ಸಂಬಂಧಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾದರೂ, ಮತ್ತೆ ಬಣ್ಣ ಹಚ್ಚಿ ನಟಿಸುವುದು ಅಸಂಭವ. ಭವಿಷ್ಯದಲ್ಲಿ ಅವರು ಮತ್ತೆ ಚಿತ್ರರಂಗಕ್ಕೆ ಮರಳುತ್ತಾರೋ ಇಲ್ಲವೋ ಎಂಬುದು ಇನ್ನೂ ಅಸ್ಪಷ್ಟ. ಆದ್ದರಿಂದ, ಅಭಿಮಾನಿಗಳಿಗೆ ಈ ಸಿನಿಮಾ ಅತ್ಯಂತ ಭಾವುಕ ಕ್ಷಣವಾಗಿದೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಚಿತ್ರದಲ್ಲಿ ಬದಲಾವಣೆ: ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಹೆಸರು ಹೇಗಿದೆ?

ಹೊಸ ಅನುಭವ ನೀಡಲು ಬದಲಾವಣೆ:

ಚಿತ್ರದ ಗಳಿಕೆ, ಪ್ರೇಕ್ಷಕರ ಸಂಖ್ಯೆ ಅಥವಾ ಗಲ್ಲಾಪೆಟ್ಟಿಗೆಯ ಅಂಕಿ-ಅಂಶಗಳನ್ನು ಹೊರತುಪಡಿಸಿ, ವಿಜಯ್ ಅವರ ಹವಾ ಹಾಗೂ ಅವರ ಅತ್ಯುತ್ತಮ ಅಭಿನಯವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಇದುವೇ ಕಡೆ ಅವಕಾಶ. ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಒಂದು ವಿಶಿಷ್ಟ ಅನುಭವ ನೀಡುವ ಸಲುವಾಗಿ, ಮೂಲ ಕಥೆಗೆ ಮತ್ತು ರಿಮೇಕ್ ಆವೃತ್ತಿಗೆ ಚಿತ್ರತಂಡ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ ಎಂದು ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us