ಕೈಯಿಂದ ಬಲವಾಗಿ ಹೊಡೆದೆ, ಕಾಲಿನಿಂದ ತಲೆಗೆ ಒದ್ದೆ: ಎಲ್ಲವನ್ನೂ ಒಪ್ಪಿಕೊಂಡ ದರ್ಶನ್

ಪೊಲೀಸರ ವಿಚಾರಣೆ ವೇಳೆ ದರ್ಶನ್​ ಒಪ್ಪಿಕೊಂಡ ಶಾಕಿಂಗ್​ ವಿಚಾರಗಳು ಇವು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಇಂಚಿಂಚೂ ಮಾಹಿತಿ ದಾಖಲಾಗಿದೆ. ದರ್ಶನ್​ ಸ್ವಇಚ್ಛಾ ಹೇಳಿಕೆ ಲಭ್ಯವಾಗಿದೆ. ರೇಣುಕಾ ಸ್ವಾಮಿಗೆ ತಾನು ಹೊಡೆದಿದ್ದು ನಿಜ ಎಂದು ದರ್ಶನ್​ ಹೇಳಿಕೆ ನೀಡಿದ್ದಾರೆ. ಟಿವಿ9ಗೆ ಲಭ್ಯವಾದ ಚಾರ್ಜ್​ಶೀಟ್​ ಪ್ರತಿಯಲ್ಲಿ ಈ ಎಲ್ಲ ಅಂಶಗಳು ಬಯಲಾಗಿವೆ.

ಕೈಯಿಂದ ಬಲವಾಗಿ ಹೊಡೆದೆ, ಕಾಲಿನಿಂದ ತಲೆಗೆ ಒದ್ದೆ: ಎಲ್ಲವನ್ನೂ ಒಪ್ಪಿಕೊಂಡ ದರ್ಶನ್
ರೇಣುಕಾ ಸ್ವಾಮಿ, ದರ್ಶನ್​
Follow us
| Updated By: ಮದನ್​ ಕುಮಾರ್​

Updated on: Sep 09, 2024 | 4:41 PM

ನಟಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲವಾಗಿ ಸಂದೇಶ ಕಳಿಸಿದ್ದ. ಅದೇ ಕಾರಣಕ್ಕಾಗಿ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಹೊಡೆಯಲಾಯಿತು. ಈ ವಿಚಾರವನ್ನು ಸ್ವತಃ ದರ್ಶನ್​ ಒಪ್ಪಿಕೊಂಡಿದ್ದಾರೆ. ಬೆಂಗಳೂರು ಪೊಲೀಸರು ವಿಚಾರಣೆ ಮಾಡಿದಾಗ ದರ್ಶನ್​ ನೀಡಿದ ಸ್ವಇಚ್ಛಾ ಹೇಳಿಕೆಯಲ್ಲಿ ಈ ವಿಚಾರಗಳು ದಾಖಲಾಗಿವೆ. ರೇಣುಕಾ ಸ್ವಾಮಿಯ ಕೊಲೆ ನಡೆದ ದಿನ ಏನಾಯ್ತು ಎಂಬ ಬಗ್ಗೆ ದರ್ಶನ್​ ನೀಡಿದ ಹೇಳಿಕೆ ಮುಂದುವರಿದ ಭಾಗ ಇಲ್ಲಿದೆ..

‘ನಾನು ಕೈಯಿಂದ ಬಲವಾಗಿ ಹೊಡೆದೆ, ಕಾಲಿನಿಂದ ತಲೆಭಾಗಕ್ಕೆ ಒದ್ದೆ. ಆಗ ಪವಿತ್ರಾ ಗೌಡನನ್ನು ಕರೆದು ಚಪ್ಪಲಿಯಿಂದ ಹೊಡೆಯುವಂತೆ ಹೇಳಿದೆ. ಆಮೇಲೆ ಪವಿತ್ರಾಳ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಆತನಿಗೆ ಸೂಚಿಸಿದೆ. ಆನಂತರ ರೇಣುಕಾಸ್ವಾಮಿಯು ಪವಿತ್ರಾ ಗೌಡ ಕಾಲಿಗೆ ಬಿದ್ದ. ನಾನು ಆಕೆಯನ್ನು ಕಾರಿನ ಬಳಿ ಬಿಡುವಂತೆ ಪ್ರದೋಶ್​ಗೆ ಹೇಳಿದೆ. ಪವಿತ್ರಾಳನ್ನ ಮನೆಗೆ ಡ್ರಾಪ್​ ಮಾಡಿಸುವಂತೆ ವಿನಯ್​ಗೆ ಹೇಳಿದೆ.’

‘ಅಷ್ಟರಲ್ಲಿ ನನ್ನ ಕಾರಿನ ಡ್ರೈವರ್ ಲಕ್ಷ್ಮಣ ಸಹ ಅಲ್ಲಿಗೆ ಬಂದಿದ್ದು, ಆತ ಕೂಡ ರೇಣುಕಾಸ್ವಾಮಿಗೆ ಕೈಯಿಂದ ಕತ್ತು, ಬೆನ್ನಿಗೆ ಹೊಡೆದಿದ್ದ. ನಂದೀಶ್​ ಆತನನ್ನು ಎತ್ತಿ ಜೋರಾಗಿ ನನ್ನ ಮುಂದೆ ಕುಕ್ಕುತ್ತಾನೆ. ಯಾರಿಗೆ ಕೆಟ್ಟ ಮೆಸೇಜ್​ ಕಳುಹಿಸಿದ್ದಾನೆಂದು ಪವನ್​ ಕೇಳಿದ. ಪವನ್ ಆತನ ಮೊಬೈಲ್ ತೆಗೆದು ಕೆಲವರಿಗೆ ಕಳುಹಿಸಿದ್ದ ಮೆಸೇಜ್ ಓದಿದ. ಆತನ ಮೊಬೈಲ್​ನಲ್ಲಿದ್ದ ಫೋಟೋಗಳನ್ನು ಎಲ್ಲರಿಗೂ ತೋರಿಸಿದನು. ಅನೇಕ ನಟಿಯರಿಗೂ ಫೋಟೋ ಕಳಿಸಿ ಮೆಸೇಜ್ ಮಾಡಿದ್ದನ್ನ ತೋರಿಸಿದ.’

‘ಆಗ ನಾನು ರೇಣುಕಾಸ್ವಾಮಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ. ಇದಾದ ನಂತರ ನಾನು, ವಿನಯ್​ ಸ್ಥಳದಿಂದ ಹೊರಟು ಹೋದೆವು. ನಾನು ಹೋಗ್ತಿದ್ದಾಗ ಜಯಣ್ಣ ಸಿಕ್ಕಿದ್ರು. ಅವರನ್ನ ಮಾತನಾಡಿಸಿ ತೆರಳಿದೆ. ಅಲ್ಲಿಂದ ನೇರವಾಗಿ ಐಡಿಯಲ್ ಹೋಮ್ಸ್‌ನ ನನ್ನ ಮನೆಗೆ ಹೋದೆವು. ಸುಮಾರು 7:30ರ ವೇಳೆ ಪ್ರದೋಶ್​ ವಾಪಸ್ ಮನೆಯ ಹತ್ತಿರ ಬಂದಿದ್ದ. ಪ್ರದೋಶ್ ಬಂದು ರೇಣುಕಾಸ್ವಾಮಿ ಸತ್ತಿರುವ ವಿಚಾರವನ್ನು ತಿಳಿಸಿದ. ಆಗ ನಾನೇ ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದೆ.’

ಇದನ್ನೂ ಓದಿ: 20 ಸಾವಿರ ಸಂಬಳಕ್ಕೆ ಇವಳನ್ನು ಮೇಂಟೇನ್ ಮಾಡೋಕಾಗತ್ತಾ? ರೇಣುಕಾ ಸ್ವಾಮಿಗೆ ಪ್ರಶ್ನಿಸಿದ್ದ ದರ್ಶನ್

‘ನಂತರ ನಾಗರಾಜ್, ಲಕ್ಷ್ಮಣ ಸಹ ರೇಣುಕಾಸ್ವಾಮಿ ಸತ್ತ ಬಗ್ಗೆ ತಿಳಿಸಿದ್ರು. ಪ್ರದೋಶ್​ ಹ್ಯಾಂಡಲ್ ಮಾಡುತ್ತೇನೆಂದು ಹೇಳಿ 30 ಲಕ್ಷ ರೂ. ಕೇಳಿದ. ನಾನು ಮನೆಯಲಿಟ್ಟಿದ್ದ 30 ಲಕ್ಷ ರೂ. ಹಣವನ್ನು ಪ್ರದೋಶ್​ಗೆ ಕೊಟ್ಟೆ. ಆಗ ವಿನಯ್ ಘಟನೆಯ ವಿಚಾರಕ್ಕೆ ಸಂಬಂಧಿಸಿದಂತೆ 10 ಲಕ್ಷ ರೂಪಾಯಿ ಕೇಳಿದ. ವಿನಯ್​ಗೂ ನಾನು ಹಣವನ್ನು ಕೊಟ್ಟಿದ್ದೇನೆ’ ಎಂದು ದರ್ಶನ್​ ಹೇಳಿಕೆ ನೀಡಿರುವುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ದರ್ಶನ್​ ಎ2 ಆರೋಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.