‘ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಕಷ್ಟ’: ಜೈಲಿನಲ್ಲಿ ಭೇಟಿ ಬಳಿಕ ರಚಿತಾ ರಾಮ್ ಪ್ರತಿಕ್ರಿಯೆ

ರಚಿತಾ ರಾಮ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ದರ್ಶನ್​ ನಟನೆಯ ‘ಬುಲ್​ಬುಲ್​’ ಸಿನಿಮಾ ಮೂಲಕ. ಅದು ದರ್ಶನ್​ ಹೋಮ್​ ಬ್ಯಾನರ್​ ಸಿನಿಮಾ. ತಮಗೆ ಅವಕಾಶ ಕೊಟ್ಟ ದರ್ಶನ್​ ಈಗ ಈ ಸ್ಥಿತಿಯಲ್ಲಿ ಇರುವುದನ್ನು ನೋಡಿ ರಚಿತಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇಂದು (ಆಗಸ್ಟ್​ 22) ದರ್ಶನ್​ ಅವರನ್ನು ರಚಿತಾ ಮಾತನಾಡಿಸಿದ್ದಾರೆ.

‘ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಕಷ್ಟ’: ಜೈಲಿನಲ್ಲಿ ಭೇಟಿ ಬಳಿಕ ರಚಿತಾ ರಾಮ್ ಪ್ರತಿಕ್ರಿಯೆ
ದರ್ಶನ್​, ರಚಿತಾ ರಾಮ್​
Follow us
|

Updated on: Aug 22, 2024 | 5:17 PM

ನಟ ದರ್ಶನ್​ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಈಗ ಅವರನ್ನು ನೋಡಲು ರಚಿತಾ ರಾಮ್​ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ಅವರನ್ನು ರಚಿತಾ ರಾಮ್​ ಭೇಟಿ ಮಾಡಿದ್ದಾರೆ. ಭೇಟಿಯ ನಂತರ ಮಾಧ್ಯಮಗಳ ಜೊತೆ ರಚಿತಾ ಮಾತನಾಡಿದ್ದಾರೆ. ಈ ಮೊದಲು ಸೋಶಿಯಲ್​ ಮೀಡಿಯಾದಲ್ಲಿ ರಚಿತಾ ಅವರು ಈ ಪ್ರಕರಣದ ಬಗ್ಗೆ ಪೋಸ್ಟ್​ ಮಾಡಿದ್ದರು. ಈಗ ನೇರವಾಗಿ ತಮ್ಮ ಮಾತುಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದವರು ಪ್ರಮುಖ ಆರೋಪಿಗಳಾಗಿದ್ದಾರೆ. ಜೈಲಿನಲ್ಲಿರುವ ಅವರನ್ನು ಅನೇಕರು ಭೇಟಿ ಮಾಡಿದ್ದಾರೆ.

‘ದರ್ಶನ್​ ಅವರನ್ನು ಈ ಸ್ಥಿತಿಯಲ್ಲಿ ನೋಡೋಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಅವರು ಕುಟುಂಬದವರು ಎಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ಅವರ ಫ್ಯಾನ್​. ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ, ಪ್ಲೀಸ್​ ಬೇಗ ಬನ್ನಿ ಅಂತ ಹೇಳಿಬಂದಿದ್ದೇನೆ’ ಎಂದಿದ್ದಾರೆ ರಚಿತಾ ರಾಮ್​

‘ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರುತ್ತೇನೆ ಅಂತ ದರ್ಶನ್​ ನನಗೆ ಹೇಳಿದ್ದಾರೆ. ಅವರು ತುಂಬಾ ಆರೋಗ್ಯವಾಗಿದ್ದಾರೆ’ ಎಂದು ರಚಿತಾ ರಾಮ್​ ಅವರು ಹೇಳಿದ್ದಾರೆ. ‘ಬುಲ್​ಬುಲ್​’, ‘ಅಂಬರೀಷ’, ‘ಜಗ್ಗುದಾದ’, ‘ಕ್ರಾಂತಿ’ ಸಿನಿಮಾಗಳಲ್ಲಿ ದರ್ಶನ್​ ಜೊತೆ ರಚಿತಾ ರಾಮ್​ ನಟಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ರಚಿತಾ ರಾಮ್​ ನಟನೆಯ ‘ಬ್ಯಾಡ್​ ಮ್ಯಾನರ್ಸ್​’ ಹಾಗೂ ಈ ವರ್ಷ ತೆರೆಕಂಡ ‘ಮ್ಯಾಟ್ನಿ’ ಸಿನಿಮಾಗಳ ಪ್ರಚಾರಕ್ಕೆ ದರ್ಶನ್​ ಸಹಾಯ ಮಾಡಿದ್ದರು.

ಇದನ್ನೂ ಓದಿ: ಕೊಲೆ ಕೇಸ್​ನಲ್ಲಿ ದರ್ಶನ್​ಗೆ ಹೆಚ್ಚಿದ ಸಂಕಷ್ಟ; A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ಸಿದ್ಧತೆ

ಶೀಘ್ರದಲ್ಲೇ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್​ ಎ1 ಆಗುವ ಸಾಧ್ಯತೆ ಇದೆ. ಹಲವಾರು ಬಗೆಯ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಹತ್ಯೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಪ್ರಕರಣದ ತನಿಖೆ ಈಗ ಕೊನೇ ಹಂತಕ್ಕೆ ಬಂದಿದೆ. ಈಗಾಗಲೇ ಸಾಧು ಕೋಕಿಲ, ತರುಣ್​ ಸುಧೀರ್​, ವಿನೋದ್​ ಪ್ರಭಾಕರ್​, ವಿನೋದ್​ ರಾಜ್​ ಮುಂತಾದವರು ಜೈಲಿಗೆ ತೆರಳಿ ದರ್ಶನ್​ ಅವರನ್ನು ಭೇಟಿಯಾಗಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.