‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಹಲವು ಅಡ್ಡಿ-ಆತಂಕ; ಆದರೂ ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
Rishab Shety: 'ಕಾಂತಾರ: ಚಾಪ್ಟರ್ 1' ಸಿನಿಮಾದ ಚಿತ್ರೀಕರಣದಲ್ಲಿ ಅನೇಕ ಅಡಚಣೆಗಳು ಎದುರಾಗಿದೆ. ಆದರೂ ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಬಸ್ ಅಪಘಾತ, ರಿಷಬ್ ಶೆಟ್ಟಿ ಅವರಿಗೆ ದೈವದ ಎಚ್ಚರಿಕೆ, ಕಲಾವಿದರ ನಿಧನದಂತಹ ದುರ್ಘಟನೆಗಳ ನಡುವೆಯೂ ಚಿತ್ರತಂಡ ಚಿತ್ರದ ಕೆಲಸವನ್ನು ಪೂರ್ಣಗೊಳಿಸಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ (Kantara: Chapter 1) ಇತ್ತೀಚೆಗೆ ಸಾಕಷ್ಟು ಅಡಚಣೆಗಳು ಎದುರಾದವು. ಇದನ್ನು ತಂಡ ಮೆಟ್ಟಿ ಮುಂದೆ ಸಾಗುತ್ತಿದೆ. ಈ ಮೊದಲು ಚಿತ್ರ ತಂಡದ ಬಸ್ ಉರುಳಿತ್ತು. ಆ ಬಳಿಕ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ದೈವದ ಎಚ್ಚರಿಕೆ ಕೂಡ ಸಿಕ್ಕಿತು. ಇವೆಲ್ಲದರ ಮಧ್ಯೆ ರಿಷಬ್ ಅವರು ಸಿನಿಮಾ ಕೆಲಸಗಳನ್ನು ಪೂರ್ತಿಗೊಳಿಸುವ ಭರದಲ್ಲಿ ಇದ್ದಾರೆ. ಸಿನಿಮಾ ಅಂದುಕೊಂಡ ದಿನಾಂಕ್ಕೆ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ.
‘ಕಾಂತಾರ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿತು. ಇದಾದ ಬಳಿಕ ‘ಕಾಂತಾರ 2’ ಸಿನಿಮಾ ಘೋಷಣೆ ಆಯಿತು. ಇದು ‘ಕಾಂತಾರ’ ಚಿತ್ರದ ಪೂರ್ವದ ಕಥೆ. ಈ ಪ್ರೀಕ್ವೆಲ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಬೇಕಿದೆ. ಆದರೆ, ಇತ್ತೀಚೆಗೆ ಉಂಟಾದ ಅಡ್ಡಿ-ಆತಂಕಗಳಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗುತ್ತಿಲ್ಲ.
‘ಕಾಂತಾರ’ ಚಿತ್ರದಲ್ಲಿ ನಟಿಸಿದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಅವರು ನೀರಿನಲ್ಲಿ ಮುಳುಗಿ ನಿಧನ ಹೊಂದಿದ್ದರು. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಈ ಘಟನೆ ನಡೆದಿತ್ತು. ಇದರಿಂದ ತಂಡದವರು ಸಾಕಷ್ಟು ಹಿನ್ನಡೆ ಅನುಭವಿಸಿದ್ದರು. ಸಾಕಷ್ಟು ಟೀಕೆಗಳನ್ನು ತಂಡದವರು ಕೇಳಬೇಕಾಯಿತು. ಈ ಘಟನೆ ನಡೆದ ಬಳಿಕ ಚಿತ್ರದ ಪ್ರಮುಖ ಕಲಾವಿದ ರಾಕೇಶ್ ಪೂಜಾರಿ ನಿಧನ ಹೊಂದಿದರು. ಈ ಘಟನೆಯಿಂದ ತಂಡಕ್ಕೆ ಮತ್ತಷ್ಟು ಹಿನ್ನಡೆ ಆಗಿದೆ.
ಇದನ್ನೂ ಓದಿ: ‘ಕಾಂತಾರ 2’ ಚಿತ್ರದಲ್ಲಿ ನಟಿಸಿದ ರಾಕೇಶ್ ನಿಧನ; ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದೇನು?
ಈ ಎರಡು ಘಟನೆಗಳಿಂದ ತಂಡ ಕಂಗೆಟ್ಟಿದೆ. ಶೂಟಿಂಗ್ಗೆ ಅಡಚಣೆ ಉಂಟಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಬಹುದು ಎಂದು ಕೆಲವು ಕಡೆ ವದಂತಿ ಹಬ್ಬಿತ್ತು. ಆದರೆ, ಆ ರೀತಿ ಇಲ್ಲ. ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಹುತೇಕ ಶೂಟ್ ಪೂರ್ಣಗೊಂಡಿದೆ. ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಭರದಿಂದ ಸಾಗುತ್ತಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಂಡ ರಿವೀಲ್ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Fri, 23 May 25