ಸೂಪರ್​ ಹೀರೋ ಆಗ್ತಾರೆ ಶಿವಣ್ಣ; ಹೊಸ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್​ ನಿರ್ದೇಶನ

Shivarajkumar: ಸಚಿನ್​ ರವಿ ನಿರ್ದೇಶನದ ಹೊಸ ಚಿತ್ರದಲ್ಲಿ ಶಿವರಾಜ್​ಕುಮಾರ್​ ಅವರು ಸೂಪರ್​ ಹೀರೋ ಗೆಟಪ್​ ಧರಿಸಲಿದ್ದಾರೆ. ಸೆಪ್ಟೆಂಬರ್​ನಿಂದ ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ.

ಸೂಪರ್​ ಹೀರೋ ಆಗ್ತಾರೆ ಶಿವಣ್ಣ; ಹೊಸ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್​ ನಿರ್ದೇಶನ
ಸಚಿನ್​ ರವಿ, ಶಿವರಾಜ್​ಕುಮಾರ್​
Follow us
| Updated By: ಮದನ್​ ಕುಮಾರ್​

Updated on:May 19, 2022 | 8:12 AM

ಚಂದನವನದಲ್ಲಿ (Sandalwood) ಅತಿ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ ಶಿವರಾಜ್​ಕುಮಾರ್ (Shivarajkumar)​. ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ಬ್ಯುಸಿ ನಟರಲ್ಲಿ ಅವರು ಕೂಡ ಪ್ರಮುಖರು. ಹಲವು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅವರು ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಅಭಿಮಾನಿಗಳು ‘ಬೈರಾಗಿ’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈಗಾಗಲೇ ಟೀಸರ್​ ಮತ್ತು ಹಾಡಿನ ಮೂಲಕ ಈ ಸಿನಿಮಾ ಕಾತರ ಮೂಡಿಸಿದೆ. ಅಷ್ಟರಲ್ಲಾಗಲೇ ಇನ್ನೊಂದು ವಿಶೇಷ ಸುದ್ದಿ ಹೊರಬಿದ್ದಿದೆ. ಶಿವರಾಜ್​ಕುಮಾರ್​ ಅವರು ನಟಿಸಲಿರುವ ಮುಂದಿನ ಸಿನಿಮಾದಲ್ಲಿ ಸೂಪರ್​ ಹೀರೋ ಕಥೆ ಇರಲಿದೆ! ಅದಕ್ಕೆ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್​ ರವಿ (Sachin Ravi) ನಿರ್ದೇಶನ ಮಾಡಲಿದ್ದಾರೆ. ಸೂಪರ್​ ಹೀರೋ ಗೆಟಪ್​ನಲ್ಲಿ ಶಿವರಾಜ್​ಕುಮಾರ್​ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇಷ್ಟು ವರ್ಷಗಳ ಸಿನಿಪಯಣದಲ್ಲಿ ಶಿವಣ್ಣ ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರನ್ನು ಸೂಪರ್​ ಹೀರೋ ಆಗಿ ನೋಡಲು ಫ್ಯಾನ್ಸ್​ ಉತ್ಸುಕರಾಗಿದ್ದಾರೆ. ಈ ಚಿತ್ರದಲ್ಲಿ ‘ಹ್ಯಾಟ್ರಿಕ್​ ಹೀರೋ’ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ? ತೆರೆ ಹಿಂದೆ ಕೆಲಸ ಮಾಡಲಿರುವ ತಂತ್ರಜ್ಞರು ಯಾರು? ಈ ಎಲ್ಲ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.

ರಕ್ಷಿತ್​ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ 2019ರ ಡಿಸೆಂಬರ್​ನಲ್ಲಿ ತೆರೆಕಂಡಿತು. ಆ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಸಚಿನ್ ರವಿ​ ಗುರುತಿಸಿಕೊಂಡರು. ಅವರ ಮುಂದಿನ ಸಿನಿಮಾ ಯಾವುದು? ಆ ಚಿತ್ರ ಯಾವ ಪ್ರಕಾರದಲ್ಲಿ ಇರಲಿದೆ ಎಂಬ ಬಗ್ಗೆ ಸಿನಿಪ್ರಿಯರಿಗೆ ಕುತೂಹಲ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಸಚಿನ್​ ರವಿ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಶಿವರಾಜ್​ಕುಮಾರ್​ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮರತ್ವ ಪಡೆದ ಅಶ್ವತ್ಥಾಮನ ಸುತ್ತವೇ ಇಡೀ ಸಿನಿಮಾದ ಕಥೆ ಸಾಗಲಿದೆ. ಇದು ಸಾಹಸ ಪ್ರಧಾನ ಸ್ಪೈ ಥ್ರಿಲ್ಲರ್​ ಸಿನಿಮಾ ಆಗಿರಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?

ಇದನ್ನೂ ಓದಿ
Image
‘ಯಶ್ ಮೇಲೆ ಯಾವಾಗಲೂ ನನಗೆ ಹೆಚ್ಚು ಪ್ರೀತಿ’; ‘ಕೆಜಿಎಫ್ 2’ ನೋಡಿದ ಶಿವಣ್ಣ ಹೇಳಿದ್ದಿಷ್ಟು
Image
ಕನ್ನಡದ ‘ಟಾಕೀಸ್​’ ಲಾಂಚ್​ ಮಾಡಿದ ಶಿವಣ್ಣ; ಇದರಲ್ಲಿ ಇದ್ದಾರೆ ಸಾವಿರಕ್ಕೂ ಹೆಚ್ಚು ಕಲಾವಿದರು
Image
ರಸ್ತೆಬದಿ ನಿಂತವರ ಜತೆ ಮನೆಯವರಂತೆ ಮಾತಾಡಿದ ಶಿವರಾಜ್​ಕುಮಾರ್​; ಸರಳತೆಗೆ ಮತ್ತೊಂದು ಹೆಸರು ಶಿವಣ್ಣ
Image
‘ಒಬ್ಬೊಬ್ಬರೇ ಇಂಡಸ್ಟ್ರಿಯನ್ನು ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತದೆ’; ಶಿವರಾಜ್​ಕುಮಾರ್​

ನಿರ್ದೇಶಕ ಸಚಿನ್ ರವಿ​ ಅವರು ಈ ಸಿನಿಮಾದ ಮೂಲಕ ನಿರ್ಮಾಪಕ ಕೂಡ ಆಗುತ್ತಿದ್ದಾರೆ. ಕಾರ್ಪೊರೇಟ್​ ಕಂಪನಿಯೊಂದರ ಜೊತೆಗೂಡಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೂಪರ್​ ಹೀರೋ ಕಾನ್ಸೆಪ್ಟ್​ ಸಿನಿಮಾ ಎಂದರೆ ಅದ್ದೂರಿಯಾದ ಮೇಕಿಂಗ್​ ಇರಲೇಬೇಕು. ಅದಕ್ಕೆ ತಕ್ಕಂತೆ ಅತ್ಯಾಧ್ಯುನಿಕ ವಿಎಫ್​ಎಕ್ಸ್​ ಕೂಡ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್​ನಿಂದ ಈ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಲಿದೆ.

ಇದನ್ನೂ ಓದಿ: ‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್​ ಅತಿರೇಕಕ್ಕೆ ಶಿವರಾಜ್​ಕುಮಾರ್​ ಗರಂ

ಚಿತ್ರರಂಗದಲ್ಲಿ ಶಿವರಾಜ್​ಕುಮಾರ್ ಅವರ ಅನುಭವ ದೊಡ್ಡದು. 80ರ ದಶಕದಿಂದ ಇಲ್ಲಿಯವರೆಗೆ ಅವರು ಸಕ್ರಿಯರಾಗಿದ್ದಾರೆ. ಮೊದಲ ಸಿನಿಮಾ ‘ಆನಂದ್​’ 1986ರಲ್ಲಿ ತೆರೆಕಂಡಿತು. ಈವರೆಗೂ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಹೊಸ ಹೊಸ ಪಾತ್ರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತ, ನಿರ್ದೇಶಕರ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಲು ಯುವ ನಿರ್ದೇಶಕರು ಆಸೆ ಪಡುತ್ತಾರೆ. ಅದೇ ರೀತಿ ಸಚಿನ್​ ರವಿ ಅವರು ಶಿವಣ್ಣನಿಗೆ ಆ್ಯಕ್ಷನ್​-ಕಟ್​ ಹೇಳುವ ಚಾನ್ಸ್​ ಪಡೆದುಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಸಿನಿಮಾ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Thu, 19 May 22