AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಗೀತಾ ಸಂಸದೆ ಆಗುವುದನ್ನು ನೋಡಬಯಸುತ್ತೇನೆ: ಶಿವರಾಜ್ ಕುಮಾರ್

Shiva Rajkumar: ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನಡೆದ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಎಂಪಿ ಆಗುವುದನ್ನು ನೋಡುವ ಆಸೆಯಿದೆ ಎಂದಿದ್ದಾರೆ.

ಪತ್ನಿ ಗೀತಾ ಸಂಸದೆ ಆಗುವುದನ್ನು ನೋಡಬಯಸುತ್ತೇನೆ: ಶಿವರಾಜ್ ಕುಮಾರ್
ಮಂಜುನಾಥ ಸಿ.
|

Updated on: Mar 02, 2024 | 8:56 PM

Share

ನಟ ಶಿವರಾಜ್ ಕುಮಾರ್ (Shiva Rajkumar) ಸಕ್ರಿಯ ರಾಜಕಾರಣದಿಂದ ದೂರ ಆದರೆ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಜೆಡಿಎಸ್​ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೀತಾ ಅವರ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ಮಾಡಿದ್ದರು. ಆದರೆ ಗೀತಾ ಶಿವರಾಜ್ ಕುಮಾರ್ ಸೋತಿದ್ದರು. ಈಗ ಮತ್ತೊಂದು ಲೋಕಸಭೆ ಚುನಾವಣೆ ಹತ್ತಿರವಾಗಿದ್ದು ಈ ಬಾರಿಯೂ ಗೀತಾ, ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅದಕ್ಕೆ ತಕ್ಕಂತೆ ಶಿವರಾಜ್ ಕುಮಾರ್ ಸಹ, ‘ನನ್ನ ಪತ್ನಿ ಸಂಸದೆ ಆಗುವುದನ್ನು ನೋಡುವ ಆಸೆಯಿದೆ’ ಎಂದಿದ್ದಾರೆ.

ಇಂದು (ಮಾರ್ಚ್ 1) ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿದ ಶಿವರಾಜ್ ಕುಮಾರ್, ‘ನಾನು ರಾಜಕೀಯಕ್ಕೆ ಬರುವುದಿಲ್ಲ, ನನಗೆ ಅದರಲ್ಲಿ ಆಸಕ್ತಿ ಇಲ್ಲ’ ಎಂದರು. ಮುಂದುವರೆದು, ‘ಗೀತಾ ಎಂಪಿ ಆಗುವುದನ್ನು ನೋಡುವ ಆಸೆಯಿದೆ’ ಎಂದಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ

‘ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ರಾಜಕೀಯದಲ್ಲಿದ್ದುಕೊಂಡು ಜನರ ಸೇವೆ ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲ, ಯಾರಾದರು ಜನ ಕಷ್ಟ ಅಂತ ಬಂದರೆ ಹಣ ಕೊಟ್ಟು ಕಳಿಸುತ್ತೀನಿ. ಆದರೆ ಗೀತಾ ರಾಜಕೀಯದ ಕುಟುಂಬದಿಂದಲೇ ಬಂದವರು. ರಾಜಕೀಯ ಎಂಬುದು ಅವರಿಗೆ ರಕ್ತದಲ್ಲಿಯೇ ಇದೆ. ಅವರು ಎಂಪಿ ಆಗಿ ಆಯ್ಕೆ ಆದರೆ ಬಹಳ ಸಂತೋಷ. ಇದರಿಂದ ಅನೇಕರಿಗೆ ಸ್ಫೂರ್ತಿ ಸಿಗುತ್ತದೆ. ನಮಗೆ ಸೆಲೆಬ್ರಿಟಿ ಅಂತ ಮತ ಕೊಡುವುದು ಬೇಡ. ಗೀತಾ ಜನರ ಜೊತೆ ಬೆರೆತಾದ ಸೆಲಬ್ರೆಟಿ ಎಂದು ಬೆರೆಯೊಲ್ಲ. ಕಳೆದ ಚುನಾವಣೆಯಲ್ಲಿ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆವು. ಈ ಬಾರಿ ಏನಾಗುತ್ತದೆ ಎಂದು ಕಾದು ನೋಡಬೇಕು ’ ಎಂದಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ‘ನನಗೆ ಪಕ್ಷ, ಪತಿ ಹಾಗೂ ಸಹೋದರ ಈ ಮೂವರು ಹೈ ಕಮಾಂಡ್​ಗಳಿಂದ ಒಪ್ಪಿಗೆ ಸಿಕ್ಕರೆ ಚುನಾವಣೆಗೆ ಸ್ಪರ್ಧಿಸುವೆ. ಸದ್ಯ ನಾನು ಮೈಸೂರಿನ ಶಕ್ತಿಧಾಮ ನೋಡಿಕೊಂಡು ಹೋಗುತ್ತಿದ್ದೇನೆ. ನನಗೆ ಸಾಮಾಜಿಕ ಕಾರ್ಯಗಳನ್ನು ಮಾಡುವುದು ಬಹಳ ಇಷ್ಟ. ಈ ಬಾರಿ ಇಲ್ಲಿ (ಶಿವಮೊಗ್ಗ) ಸ್ಪರ್ಧೆ ಮಾಡಲು ಉತ್ತಮ ವಾತಾವರಣ ಇದೆ. ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಕಡೆ ಹೋಗಿ ಪ್ರಚಾರ ನಡೆಸಿದ್ದೆ. ಕಳೆದ ಲೋಕಸಭೆ ಚುನಾವಣೆ ಸೋತ ನಂತರ ಶಿವಮೊಗ್ಗ ಜಿಲ್ಲೆಗೆ ಅನೇಕ ಬಾರಿ ಬಂದು ಹೋಗಿದ್ದೇನೆ. ಅಲ್ಲದೆ ಚುನಾವಣಾ ಪ್ರಚಾರದಲ್ಲೂ ಸಹ ಭಾಗಿಯಾಗಿದ್ದೇನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ