ಶಿವಣ್ಣನ ಆರೋಗ್ಯದ ಬಗ್ಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ಗೆ ಕಾಳಜಿ
ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ಬಾಲಕೃಷ್ಣ, ಯಶ್, ಸುದೀಪ್ ಮುಂತಾದವರು ಅವರ ಆರೋಗ್ಯ ವಿಚಾರಿಸಿ ಬೆಂಬಲಿಸಿದ್ದಾರೆ. ಪೂರ್ಣ ಚೇತರಿಕೆಗಾಗಿ ಶಿರಸಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಂತರ ಕನಕಪುರದ ಫಾರ್ಮ್ ಹೌಸ್ ಗೆ ತೆರಳಿ ಸಂಪೂರ್ಣ ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣಕ್ಕೆ ಮರಳಲಿದ್ದಾರೆ.

ಶಿವರಾಜ್ಕುಮಾರ್ ಅವರಿಗೆ ಚಿತ್ರರಂಗದವರ ಜೊತೆ ಒಳ್ಳೆಯ ಒಡನಾಟ ಇದೆ. ಕನ್ನಡ ಮಾತ್ರವಲ್ಲದೆ, ಪರಭಾಷಿಗರಿಗೂ ಶಿವರಾಜ್ಕುಮಾರ್ ಅವರು ಅಚ್ಚುಮೆಚ್ಚು. ಅವರಿಗೆ ಕ್ಯಾನ್ಸರ್ ಇರೋ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತ್ತು. ಪರಭಾಷಾ ಕಲಾವಿದರು ಕೂಡ ಶಿವರಾಜ್ಕುಮಾರ್ ಬೇಗ ಚೇತರಿಸಿಕೊಳ್ಳಲಿ ಎಂದು ಕೋರಿದ್ದರು. ಕರ್ನಾಟಕದವರು ಹಾಗೂ ಬೇರೆ ರಾಜ್ಯದ ಅಭಿಮಾನಿಗಳ ಪ್ರಾರ್ಥನೆಯಿಂದ ಶಿವಣ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಈಗ ಶಿವರಾಜ್ಕುಮಾರ್ ಅವರ ಆರೋಗ್ಯದ ಬಗ್ಗೆ ಅಮಿತಾಭ್ ಬಚ್ಚನ್ ಕಾಳಜಿ ತೋರಿಸುತ್ತಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ಶಿವರಾಜ್ಕುಮಾರ್ ಎಂದರೆ ಅಚ್ಚುಮೆಚ್ಚು. ರಾಜ್ಕುಮಾರ್ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಅಮಿತಾಭ್ಗೆ ವಿಶೇಷ ಪ್ರೀತಿ ಇದೆ. ಶಿವರಾಜ್ಕುಮಾರ್ ಹಾಗೂ ಅಮಿತಾಭ್ ಒಂದೇ ಜ್ಯುವೆಲರಿ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಇದರ ಪ್ರಚಾರಕ್ಕಾಗಿ ಇವರು ಸಾಕಷ್ಟು ಬಾರಿ ಒಟ್ಟಿಗೆ ಸೇರಿದ್ದು ಇದೆ. ಅಮಿತಾಭ್ ಬಚ್ಚನ್ ಅವರು ಮೆಸೇಜ್ ಮೂಲಕ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ.
ಇದನ್ನೂ ಓದಿ: 29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್ಕುಮಾರ್; ಇಲ್ಲಿವೆ ಫೋಟೋಸ್
ಜೊತೆಗೆ ಟಾಲಿವುಡ್ ನಟ, ಶಾಸಕ ಬಾಲಕೃಷ್ಣ ಸಹ ಶಿವಣ್ಣ ಆಪ್ತರಿಗೆ ಕರೆ ಮಾಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಯಶ್, ಸುದೀಪ್ ಮೊದಲಾದವರು ಶಿವರಾಜ್ಕುಮಾರ್ ಅವರ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ. ಅವರು ಕ್ಯಾನ್ಸರ್ ಮುಕ್ತವಾಗಿ ಮರಳಿದ್ದು ಎಲ್ಲರಿಗೂ ಖುಷಿಕೊಟ್ಟಿದೆ.
ಮುಂದೇನು?
ಸದ್ಯ ಶಿವರಾಜ್ಕುಮಾರ್ ವಿಶ್ರಾಂತಿ ಪಡೆಯಲು ಉತ್ತರ ಕನ್ನಡದ ಶಿರಸಿಗೆ ತೆರಳಿದ್ದಾರೆ. ಅಲ್ಲಿ ಅವರ ಸಂಬಂಧಿ ಹಾಗೂ ಶಾಸಕ ಭೀಮಣ್ಣ ಅವರ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಅಲ್ಲೇ ಕೆಲವು ದಿನ ಇದ್ದು ವಿಶ್ರಾಂತಿ ಪಡೆದು ನಂತರ ಬೆಂಗಳೂರಿಗೆ ಬರಲಿದ್ದಾರೆ. ಅವರು ಇಲ್ಲಿಗೆ ಬಂದ ತಕ್ಷಣ ಕನಕಪುರದಲ್ಲಿರುವ ಫಾರ್ಮ್ ಹೌಸ್ಗೆ ಶಿವರಾಜ್ಕುಮಾರ್ ಶಿಫ್ಟ್ ಆಗಲಿದ್ದಾರೆ. ಅಲ್ಲಿ ಸುಮಾರು ದಿನಗಳ ಕಾಲ ಇದ್ದು ಸಂಪೂರ್ಣ ವಿಶ್ರಾಂತಿ ಬಳಿಕ ಶೂಟಿಂಗ್ಗೆ ಹೋಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.