Vikrant Rona: ‘ವಿಕ್ರಾಂತ್ ರೋಣ’ ಪ್ರೀ-ರಿಲೀಸ್ ಇವೆಂಟ್ಗೆ ಉಪೇಂದ್ರ ಅತಿಥಿ; ಸಮಯ, ಸ್ಥಳದ ಬಗ್ಗೆ ಇಲ್ಲಿದೆ ಮಾಹಿತಿ
Vikrant Rona pre-release event: ಹೈದರಾಬಾದ್ ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದು ಕಿಚ್ಚ ಸುದೀಪ್ ಅವರು ಬೆಂಗಳೂರಿನ ಇವೆಂಟ್ನಲ್ಲಿ ಭಾಗಿ ಆಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉಪೇಂದ್ರ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಬಿಡುಗಡೆಗೂ ಮುನ್ನವೇ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಧೂಳೆಬ್ಬಿಸುತ್ತಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ. ದೇಶಾದ್ಯಂತ ‘ವಿಕ್ರಾಂತ್ ರೋಣ’ ಪ್ರಚಾರವನ್ನು ಭರ್ಜರಿಯಾಗಿ ಮಾಡಲಾಗುತ್ತಿದೆ. ಹಲವು ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿರುವುದರಿಂದ ಕಿಚ್ಚ ಸುದೀಪ್ (Kichcha Sudeep) ಅವರು ಅನೇಕ ನಗರಗಳಿಗೆ ತೆರಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸೋಮವಾರ ಸಂಜೆ (ಜುಲೈ 25) ಮುಂಬೈನಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಮಂಗಳವಾರ (ಜುಲೈ 26) ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಹೈದರಾಬಾದ್ನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ಬೆಂಗಳೂರಿನಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರು ಅತಿಥಿಗಳಾಗಿ ಬಂದು ಚಿತ್ರತಂಡಕ್ಕೆ ಶುಭ ಕೋರುತ್ತಿರುವುದು ವಿಶೇಷ.
ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ‘ಲುಲು ಗ್ಲೋಬಲ್ ಮಾಲ್’ನಲ್ಲಿ ಇಂದು ಸಂಜೆ 6.30ಕ್ಕೆ ‘ವಿಕ್ರಾಂತ್ ರೋಣ’ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಹೈದರಾಬಾದ್ ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದು ಸುದೀಪ್ ಅವರು ಬೆಂಗಳೂರಿನ ಇವೆಂಟ್ನಲ್ಲಿ ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ಉಪೇಂದ್ರ ಏನು ಮಾತನಾಡಲಿದ್ದಾರೆ ಎಂಬ ಕೌತುಕ ಮೂಡಿದೆ.
ಸುದೀಪ್ ಮತ್ತು ಉಪೇಂದ್ರ ನಡುವೆ ಉತ್ತಮ ಸ್ನೇಹ ಇದೆ. ‘ಮುಕುಂದ ಮುರಾರಿ’ ಚಿತ್ರದಲ್ಲಿ ಅವರಿಬ್ಬರು ನಟಿಸಿದ್ದರು. ಈಗ ‘ಕಬ್ಜ’ ಚಿತ್ರದಲ್ಲೂ ಈ ಸ್ಟಾರ್ ಕಲಾವಿದರು ಒಂದಾಗುತ್ತಿದ್ದಾರೆ. ಉಪ್ಪಿ ಆಗಮನದಿಂದ ‘ವಿಕ್ರಾಂತ್ ರೋಣ’ ಪ್ರೀ-ರಿಲೀಸ್ ಇವೆಂಟ್ ಕಳೆಗಟ್ಟಲಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಮುಖ್ಯ ಅತಿಥಿ ಆಗಿದ್ದರು.
BENGALURU PRE-RELEASE EVENT ವಿಕ್ರಾಂತ್ ರೋಣ ಜೊತೆಗೆ ರಿಯಲ್ಸ್ಟಾರ್ ಉಪೇಂದ್ರ | OPEN FOR ALL ⁰#VRonJuly28 @KicchaSudeep @anupsbhandari @JackManjunath @Asli_Jacqueline @nimmaupendra @LuLu_Mall#VRin3D #VikrantRona pic.twitter.com/8ojyBgf6kk
— VikrantRona (@VikrantRona) July 26, 2022
ನಿರ್ಮಾಪಕ ಜಾಕ್ ಮಂಜು ಅವರು ‘ವಿಕ್ರಾಂತ್ ರೋಣ’ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಬೃಹತ್ ಸೆಟ್ಗಳನ್ನು ಹಾಕಿ ಶೂಟಿಂಗ್ ಮಾಡಲಾಗಿದೆ. 3ಡಿ ವರ್ಷನ್ನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿರುವುದು ಹೈಪ್ ಹೆಚ್ಚಲು ಕಾರಣ ಆಗಿದೆ. ಅನೂಪ್ ಭಂಡಾರಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸುದೀಪ್ ಜೊತೆ ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿರುವ ಹಾಡುಗಳು ಧೂಳೆಬ್ಬಿಸುತ್ತಿವೆ.
ಎಲ್ಲ ಚಿತ್ರಮಂದಿರಗಳ ಎದುರು ಸುದೀಪ್ ಅವರ ಕಟೌಟ್ ರಾರಾಜಿಸುತ್ತಿವೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಈ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಲಾಗುತ್ತಿದೆ. ಚೆನ್ನೈನ ‘ಸತ್ಯಂ ಸಿನಿಮಾಸ್’ ಎದುರು ಕಿಚ್ಚನ ಬೃಹತ್ ಕಟೌಟ್ ನಿಲ್ಲಿಸಲಾಗಿದೆ.
Published On - 1:17 pm, Tue, 26 July 22








