KSCA, DNA, RCB ಪದಾಧಿಕಾರಿಗಳ ಸಭೆ ಅಂತ್ಯ: ಶಾಸಕರಿಗೆ 1+1 ಜೊತೆಗೆ ಮತ್ತೊಂದು IPL ಟಿಕೆಟ್ ನೀಡಲು ತೀರ್ಮಾನ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 26) ಹಬ್ಬ ಶುರುವಾಗಿದೆ. ಇನ್ನೊಂದೆಡೆ ಕರ್ನಾಟಕದ ಶಾಸಕರು ಬಜೆಟ್ ಅಧಿವೇಶನದಲ್ಲಿ ಐಪಿಎಲ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್ ಟಿಕೆಟ್ ನೀಡುವ ಬಗ್ಗೆ ಧ್ವನಿ ಎತ್ತಿದ್ದು, ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಧ್ವನಿಗೂಡಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಮಧ್ಯೆ ಇದೀಗ KSCA, DNA, RCB ಪದಾಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಮಾರ್ಚ್ 30): IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಕರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA), DNA ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಓರ್ವ ಶಾಸಕನಿಗೆ ಮೂರು ಐಪಿಎಲ್ ಟಿಕೆಟ್ ನೀಡಲು ತೀರ್ಮಾನವಾಗಿದೆ. ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಉಚಿತ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್ಎಗೆ ಒಟ್ಟು 3 ಟಿಕೆಟ್ಗಳನ್ನು ನೀಡಲು ಒಪ್ಪಂದವಾಗಿದೆ.
ಪ್ರತಿ ಮ್ಯಾಚ್ಗೆ 3 ಟಿಕೆಟ್ ನೀಡಲು ತೀರ್ಮಾನ
IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಇಂದು (ಮಾರ್ಚ್ 30) ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, ಐಪಿಎಲ್ ಟಿಕೆಟ್ ಹಾಗೂ ಸ್ಟೇಡಿಯಂ ಬಗ್ಗೆ ಮಹತ್ವದ ಚರ್ಚೆಯಾಗಿದ್ದು, ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮುರು ಟಿಕೆಟ್ ಹಾಗೂ ಇಂಟರ್ ನ್ಯಾಷಲ್ ಮ್ಯಾಚ್ಗೆ ಎರಡು ಟಿಕೆಟ್ ನೀಡುವ ತೀರ್ಮಾನವಾಗಿದೆ. ಈ ಹಿಂದಿನ ಸಭೆಯಲ್ಲಿ ಎರಡು ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿತ್ತು. ಆದ್ರೆ, ಇದೀಗ ಎರಡರ ಜೊತೆಗೆ ಮತ್ತೊಂದು ಎಕ್ಸ್ಟ್ರಾ ಟಿಕಟ್ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ‘ಐಪಿಎಲ್ ಟಿಕೆಟ್ಗಳು ಖಂಡಿತಾ ನನಗೆ ಬೇಡ’: ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!
ಸಭೆ ಬಳಿಕ ಡಿಕೆಶಿ ಹೇಳಿದ್ದೇನು?
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ಸಂಬಂಧ ನಮ್ಮ ಸ್ಪೀಕರ್ ಬಳಿ ಮಾತಾಡಿದ್ದೆ. ಇಂದಿನ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿ ಐಪಿಎಲ್ ಮ್ಯಾಚ್ ಗೆ ಶಾಸಕರೊಬ್ಬರಿಗೆ 3 ಟಿಕೆಟ್ ಕೊಡಲು ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿ ಇದ್ದಾಗ ಎರಡು ಟಿಕೆಟ್ ಕೊಡುತ್ತಾರೆ. ಇನ್ನೂ ಹೆಚ್ಚು ಬೇಕಾದರೇ ಬೇರೆ ಮನವಿ ಮಾಡಬೇಕು. ಇಲ್ಲಂದ್ರೆ ಖರೀದಿ ಮಾಡಿ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಸ್ಟೇಡಿಯಂ ವಿಚಾರಕ್ಕೆ ಸಂಬಂಧಿಸಿ ಚರ್ಚೆ ಮಾಡಿದ್ದೇವೆ. ಹೆಚ್ಚುವರಿ ಸ್ಟೇಡಿಯಂ ವಿಚಾರಕ್ಕೆ ಚರ್ಚೆ ಆಗಿದೆ. ಅದಕ್ಕೆ ಕೆಎಸ್ಸಿಎ ಅವರು ಇವತ್ತು ಬಂದಿದ್ರು. ಕ್ರೀಡಾಂಗಣದಲ್ಲಿ ಆಸನ ಹೆಚ್ಚಿಸೋ ಚಿಂತನೆ ಇದ್ದು, ಕೆಎಸ್ ಸಿ ಎ ಅವರು ಯೋಚನೆ ಮಾಡಿದ್ದಾರೆ. ಅದಕ್ಕೆ ಸರ್ಕಾರಕ್ಕೆ ವರದಿ ನೀಡಿ ಎಂದಿದ್ದೇನೆ ಎಂದು ಹೇಳಿದರು.
ಡಿಕೆಶಿಗೆ ಆರ್ಸಿಬಿ ಜರ್ಸಿ ಗಿಫ್ಟ್
ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜೊತೆ ಆರ್ಸಿಬಿ ತಂಡದ ಸಿಇಒ ಸಹ ಡಿಕೆ ಶಿವಕುಮಾರ್ ಸಭೆಯಲ್ಲಿ ಹಾಜರಾಗಿದ್ದು, ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ, ಡಿಕೆ ಶಿವಕುಮಾರ್ಗೆ ಆರ್ಸಿಬಿ ಜರ್ಸಿ ಗಿಫ್ಟ್ ನೀಡಿದರು. ಇನ್ನು ಡಿಕೆ ಶಿವಕುಮಾರ್ ಜರ್ಸಿಯನ್ನು ಧರಿಸಿ ಫೋಟೋಗೆ ಪೋಸ್ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Mon, 30 March 26
