AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಗಾರರಿಂದ ತಪ್ಪಿಸಿಕೊಳ್ಳಲು ಬುರ್ಖಾ ಧರಿಸಿ ಓಡಾಡಿದ ಅಹ್ಮದ್: ವಿಡಿಯೋ ವೈರಲ್

ಬಾಗಲಕೋಟೆ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಾಲದ ಕಿರುಕುಳದ ಘಟನೆಗಳು ಹೆಚ್ಚುತ್ತಿವೆ. ಸಿಎಂ ಎಚ್ಚರಿಕೆ ಹೊರತಾಗಿಯೂ, ಸಾಲಗಾರರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಒಬ್ಬ ಮಹಿಳೆ ಸಾಲ ವಸೂಲಿಗಾರರ ಕಿರುಕುಳಕ್ಕೆ ಒಳಗಾಗಿದ್ದಾಳೆ, ಇನ್ನೊಬ್ಬ ವ್ಯಕ್ತಿ ಸಾಲದಿಂದ ತಪ್ಪಿಸಿಕೊಳ್ಳಲು ಬುರ್ಖಾ ಧರಿಸಿ ಓಡಾಡಿರುವಂತಹ ಘಟನೆ ನಡೆದಿದೆ.

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Jan 28, 2025 | 7:44 PM

Share

ಬಾಗಲಕೋಟೆ, ಜನವರಿ 28: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ (Micro finance) ಸಾಲ ವಸೂಲಿ ಕಿರುಕುಳ ಇಂದಿಗೂ ಮುಂದುವರೆಯುತ್ತಲೇ ಇದೆ‌. ಈ ಬಗ್ಗೆ ಸಿಎಂ ಸಾಲ ವಸೂಲಿ ಕಿರುಕುಳ ನೀಡಬಾರದೆಂದು ಸಭೆ ನಡೆಸಿದ್ದಾರೆ. ಖಡಕ್ ಎಚ್ಚರಿಕೆ ‌ಕೂಡ ನೀಡಿದ್ದಾರೆ. ಆದರೂ ಕಿರುಕುಳ ಮುಂದುವರೆದಿದೆ. ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಅಳಲು ತೋಡಿಕೊಂಡರೆ, ಇನ್ನೊಬ್ಬ ವ್ಯಕ್ತಿ ಸಾಲಗಾರರ ಕಾಟಕ್ಕೆ ಬುರ್ಖಾ ಹಾಕಿಕೊಂಡು ಏಟು ತಿಂದಿದ್ದಾನೆ.

ಪತ್ನಿಯ ಬುರ್ಖಾ ಧರಿಸಿದ ಪತಿ

ಬಾಗಲಕೋಟೆ ‌ನಗರದ ನವನಗರದ ಸೆಕ್ಟರ್ ನಂ 47ರಲ್ಲಿ ವಿಭಿನ್ನ ಘಟನೆಯೊಂದು ನಡೆದಿದೆ. ಇಲ್ಲಿ ಇಸ್ಪೀಟ್ ಆಡುವುದಕ್ಕೆ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಓರ್ವ ಬುರ್ಖಾ ಧರಿಸಿ ತಿರುಗಾಡುತ್ತಿದ್ದರು. ಹುಸೇನಸಾಬ್ ಮನಿನಾಗರ ಕೈ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಬುರ್ಖಾ ವೇಷ ತೊಟ್ಟಿದ್ದ ವ್ಯಕ್ತಿ. ಸಾಲ ವಸೂಲಿಗೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಹುಸೇನಸಾಬ್ ಮನಿನಾಗರ ಪತ್ನಿಯ ಬುರ್ಖಾ ಧರಿಸುತ್ತಿದ್ದರು.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಜೀವನ್ಮರಣ ಹೋರಾಟ

ಅವರ ಚಲನವಲನ ಬಗ್ಗೆ ಸಂಶಯ ಬಂದು ಚೆಕ್‌ ಮಾಡಿದಾಗ ಬಣ್ಣ ಬಯಲಾಗಿತ್ತು. ಅಲ್ಲದೆ ಅವರು ಸಾಲ ವಸೂಲಿಗೆ ಬಂದವರಿಗೆ ಚಾಕು ತೋರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಹುಸೇನಾಬ್​ಗೆ ಥಳಿಸಲಾಗಿದೆ. ಈ ಬಗ್ಗೆ ನವನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

ಮಹಿಳೆಗೆ ಫೈನಾನ್ಸ್ ಸಿಬ್ಬಂದಿ ಕಿರುಕುಳ: ಎಫ್​ಐಆರ್​ ದಾಖಲು

ಇನ್ನು ಯಾರೂ ಕಿರುಕುಳ ನೀಡಬಾರದು, ಕಿರುಕುಳ ನೀಡಿದರೆ ದೂರು ನೀಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಇಷ್ಟಾದರೂ ವಸೂಲಾತಿ ಕಿರುಕುಳ ನಿಂತಿಲ್ಲ. ಜಿಲ್ಲೆಯ ಜಮಖಂಡಿ ನಗರದ ಶಿವಾಜಿ ವೃತ್ತದ‌ ನಿವಾಸಿ ಅನ್ನಪೂರ್ಣ ಸಬ್ಕಾಳೆ ಮಹಿಳೆಗೆ ಇದೇ ರವಿವಾರ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಮಹಿಳೆ ಅಳಲು ತೊಡಿಕೊಂಡಿದ್ದಾರೆ.

ಹೊಲಿಗೆ ಕೆಲಸ ಮಾಡುತ್ತಾ ಉಪಜೀವನ ಸಾಗಿಸುತ್ತಿರುವ ಅನ್ನಪೂರ್ಣ, ನಾನು ಬಿ‌ಎಎಸ್​ಎಸ್‌ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದೇನೆ. ರವಿವಾರ ಸಾಲ ವಸೂಲಿಗೆ ಮನೆಗೆ ಬಂದಿದ್ದರು. ಎರಡು ದಿನ ಬಿಟ್ಟು ತುಂಬುತ್ತೇವೆ ಅಂದರೂ ಕೇಳಲಿಲ್ಲ. ಸಾಲ ತೆಗೆದುಕೊಳ್ಳುವಾಗ ತಿಳಿಯಲಿಲ್ಲವೇ ನಿಮಗೆ. ಇವಾಗ ಸಾಲ ತುಂಬುವುದಕ್ಕೆ ಹೀಗೆಲ್ಲ‌ ಮಾಡುತ್ತಿದ್ದೀರಿ. ಹೊಟ್ಟೆಗೆ ಏನು ತಿಂತೀರಿ ಎಂದು ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿ ಮ್ಯಾನೇಜರ್​​ ಎಂದು ಮಹಿಳೆಗೆ ವಂಚನೆ: ಆರೋಪಿ ಅಂದರ್​​

ಇನ್ನು ಮಹಿಳೆಗೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದರ ಬಗ್ಗೆ ಟಿವಿ9 ವರದಿ ಪ್ರಸಾರ ಆಗುತ್ತಿದ್ದಂತೆ ಜಮಖಂಡಿ ನಗರ ಠಾಣೆ ಪೊಲೀಸರು ಮಹಿಳೆ ಮನೆಗೆ ಭೇಟಿ‌ ನೀಡಿದ್ದರು. ನಂತರ‌ ಮಹಿಳೆ ಠಾಣೆಗೆ ತೆರಳಿ ಫೈನಾನ್ಸ್ ವಿರುದ್ಧ ದೂರು ದಾಖಲಿಸಿದ್ದು ಎಫ್​ಐಆರ್​ ದಾಖಲಾಗಿದೆ. ಜಿಲ್ಲೆಯಲ್ಲೂ ನಿತ್ಯ ಸಾಲ ವಸೂಲಿ ಕಿರುಕುಳ‌ ಮುಂದುವರೆದಿದೆ. ಸಾಲ ವಸೂಲಿಗೆ ಕಿರುಕುಳ ನೀಡುವುದನ್ನು ತಡೆಯಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Tue, 28 January 25