ಸಮವಸ್ತ್ರದಲ್ಲೇ ಸ್ವಾಮೀಜಿ ಕಾಲಿಗೆ ನಮಸ್ಕಾರ: 6 ಪೊಲೀಸರಿಗೆ ವರ್ಗಾವಣೆ ಭಾಗ್ಯ
ಪೊಲೀಸ್ ಸಮವಸ್ತ್ರದಲ್ಲೇ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬಾಗಲಕೋಟೆ ಎಸ್ಪಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬಾದಾಮಿಯ ಬನಶಂಕರಿ ದೇವಸ್ಥಾನದ ಬಳಿ ಘಟನೆ ನಡೆದಿತ್ತು. ಜಾಲತಾಣದಲ್ಲಿ ವಿಡಿಯೋ ವೈರಲ್ ಬೆನ್ನಲ್ಲೇ ಟೀಕೆ ವ್ಯಕ್ತವಾಗಿತ್ತು.

ಬಾಗಲಕೋಟೆ, ಮಾರ್ಚ್ 14: ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ಪೊಲೀಸರು (police) ನಮಸ್ಕಾರ ಮಾಡಿ, ಹಣ ಪಡೆದಿದ್ದ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಬಾರಿ ಟೀಕೆ ವ್ಯಕ್ತವಾಗಿತ್ತು. ಹೀಗಿರುವಾಗಲೇ ವರ್ಗಾವಣೆ ಅಸ್ತ್ರ ಪ್ರಯೋಗ ಮಾಡಲಾಗಿದೆ. ಆರು ಜನ ಕಾನ್ಸ್ಟೇಬಲ್ಗಳನ್ನು ವರ್ಗಾವಣೆ (transfer) ಮಾಡಿ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಬಾದಾಮಿಯಿಂದ ವಿವಿಧ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಎಎಸ್ಐ ಜಿಬಿ ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಡಿಜೆ ಶಿವಪುರ ಎಎಸ್ಐ ಬಾಗಲಕೋಟೆ ಗ್ರಾಮೀಣ ಠಾಣೆ, ನಾಗರಾಜ ಅಂಕೋಲೆ ಬೀಳಗಿ ಠಾಣೆ, ಜಿಬಿ ಅಂಗಡಿ ಇಳಕಲ್ ನಗರ ಠಾಣೆ, ರಮೇಶ್ ಈಳಗೇರ ಬಾಗಲಕೋಟೆ ಗ್ರಾಮೀಣ ಠಾಣೆ, ರಮೇಶ್ ಹುಲ್ಲೂರು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದ್ದು, ವರ್ಗಾವಣೆಯಾದ ಸಿಬ್ಬಂದಿ ಸದ್ಯ ವಾಸವಿರುವ ವಸತಿಗೃಹ ಕೂಡ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ
ವಿಡಿಯೋ ವೈರಲ್ ಬಳಿಕ ಟಿವಿ9 ಜೊತೆಗೆ ಮಾತನಾಡಿದ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ, ನನಗೆ ಪೊಲೀಸರು, ರಾಜಕಾರಣಿಗಳು, ನಟರು, ಬಡವರು, ಶ್ರೀಮಂತರು ಎಲ್ಲರೂ ಒಂದೆ ಸಮಾನ. ಎಲ್ಲರೂ ಬಂದು ಆಶೀರ್ವಾದ ಪಡೆಯುತ್ತಾರೆ. ದುಡ್ಡು ಕೊಟ್ಟು ಆಶೀರ್ವಾದ ಮಾಡುವುದು ನಮ್ಮ ಮಠದ ಪರಂಪರೆ. ಪೊಲೀಸರು ಭಕ್ತರಾಗಿ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಅವರಿಗೆ ನಾವು ಲಂಚ ಕೊಟ್ಟಿಲ್ಲ. ನಾವು ದಿವಸದ ದಾಸೋಹಕ್ಕೆ ಎಷ್ಟು ಹಣ ಬೇಕು ಅಷ್ಟು ಇಟ್ಕೊಂಡು. ಉಳಿದ ಹಣವನ್ನು ನಾವು ಭಕ್ತರಿಗೆ ಕೊಡುತ್ತೇವೆ. ಇದು ಭಕ್ತರನ್ನು ಬೆಳೆಸುವ ಮಠವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಬೆಂಕಿ ಬಬಲಾದಿ ಮಠದ ಕಾಲಜ್ಞಾನ ವಾಣಿಗೆ ಅಪಸ್ವರ: ಏನದು?
ಡಾ. ರಾಜಕುಮಾರ ಅವರಿಗೆ ನಮ್ಮ ಹಿಂದಿನ ಸ್ವಾಮೀಜಿ ಸಿದ್ದಪ್ಪಾಜಿ ಸ್ವಾಮೀಜಿ ಹಣ ಕೊಟ್ಟು ಆಶೀರ್ವಾದ ಮಾಡಿದ್ದರು. ಇದೇ ಸಿದ್ಧನಕೊಳ್ಳ ಕ್ಷೇತ್ರದಲ್ಲಿ ಡಾ. ರಾಜಕುಮಾರ ಅವರ ಸಂಪತ್ತಿಗೆ ಸವಾಲ್ ಚಿತ್ರೀಕರಣ ಮಾಡಲಾಗಿತ್ತು. ಸದ್ಯ ಇದನ್ನು ದೊಡ್ಡ ಸಮಸ್ಯೆ ಮಾಡಿ ವೈರಲ್ ಮಾಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ನಾವು ಅವರಿಗೆ ಲಂಚ ಕೊಟ್ಟಿಲ್ಲ. ಮೊದಲಿಂದಲೂ ಅವರು ನಮ್ಮ ಮಠಕ್ಕೆ ನಡಕೊಂಡು ಬಂದಿದ್ದಾರೆ. ಅವರು ಒಬ್ಬರಿಗೆ ನಾವು ದುಡ್ಡು ಕೊಟ್ಟಿಲ್ಲ. ಈ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲರಿಗೂ ದುಡ್ಡು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡುವುದು ಸರಿಯಲ್ಲ. ಪೊಲೀಸ್ ಇಲಾಖೆಯವರು ಅವರ ಮೇಲೆ ಯಾವುದೇ ರೀತಿ ಕ್ರಮ ಜರುಗಿಸಬಾರದು. ಅವರ ಕುಟುಂಬಕ್ಕೆ ಅನ್ಯಾಯ ಆಗದ ಹಾಗೆ ನೋಡಿಕೊಳ್ಳಬೇಕೆಂದು ಸ್ವಾಮೀಜಿ ಮನವಿ ಮಾಡಿದ್ದರು.
ನಿಜವಾಗಿದ್ದ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಭವಿಷ್ಯ
ಇನ್ನು ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಆಗುತ್ತೀರಿ ಎಂದು ಐದನೂರು ರೂ ಕೊಟ್ಟು ಸ್ವಾಮೀಜಿ ಆಶೀರ್ವಾದ ಮಾಡಿದ್ದರು. ನಂತರ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಯಡಿಯೂರಪ್ಪ, ವಿ ಸೋಮಣ್ಣ, ಚಿತ್ರನಟರಿಗೂ ಹಣ ನೀಡಿ ಸ್ವಾಮೀಜಿ ಆಶೀರ್ವಾದ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.