ಭೂಕಂಪ, ರಾಜಕೀಯ ವ್ಯಕ್ತಿಗಳಿಗೆ ಕಂಟಕ: ಯುಗಾದಿಯಂದು ಬೀಳಗಿಯ ಜಕನೇರನಕಟ್ಟೆ ಶಾಕಿಂಗ್ ಭವಿಷ್ಯ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ಜಕನೇರನಕಟ್ಟೆ ಎಂಬ ವಿಶೇಷ ಭವಿಷ್ಯ ನುಡಿಯಲಾಗುತ್ತದೆ. ಈ ಬಾರಿಯ ಭವಿಷ್ಯವೂ ಜನರಲ್ಲಿ ಆತಂಕ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಎದುರಾಗಲಿದೆ. ಭೂಕಂಪ ಸಂಭವಿಸಲಿದೆ ಎಂದು ಶಾಕಿಂಗ್ ಭವಿಷ್ಯ ನುಡಿಯಲಾಗಿದೆ.

ಬೀಳಗಿ, ಮಾರ್ಚ್ 30: ಇಂದು ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಹೊಸ ವರ್ಷದ ಹಿನ್ನೆಲೆ ಜನರು ದೇವಾಲಯಗಳತ್ತ ಮುಖ ಮಾಡಿದ್ದಾರೆ. ಹಬ್ಬದ ಕಾರಣ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗಿದೆ. ಅದೇ ರೀತಿಯಾಗಿ ಇತ್ತ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ವಿಶೇಷ ಭವಿಷ್ಯ (Bhavishya) ನುಡಿಯಲಾಗಿದೆ. ವಿಶ್ವದ ಉತ್ತರ ಹಾಗೂ ಮಧ್ಯಭಾಗದಲ್ಲಿ ಭೂಕಂಪವಾಗಲಿದೆ. ಮುಂಬರುವ ದಿನಮಾನದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಕಾದಿದೆ ಎಂದು ಎಂದು ಜಕನೇರನಕಟ್ಟೆ ಶಾಕಿಂಗ್ ಭವಿಷ್ಯ ನುಡಿಯಲಾಗಿದೆ.
ರೈತರಿಂದ ಜಕನೇರನಕಟ್ಟೆ ಭವಿಷ್ಯ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದಲ್ಲಿ ರೈತರಿಂದ ಜಕನೇರನಕಟ್ಟೆ ಭವಿಷ್ಯ ನುಡಿಯಲಾಗುತ್ತದೆ. ಈ ಜಕನೇರನಕಟ್ಟೆ ಭವಿಷ್ಯವನ್ನು ಜನರು ನಂಬುತ್ತಾರೆ. ಮಣ್ಣಿನಿಂದ ಒಂದು ಕಟ್ಟೆ ನಿರ್ಮಿಸಲಾಗುತ್ತದೆ. ಅದಕ್ಕೆ ಜಕನೇರನಕಟ್ಟೆ ಎಂದು ಕರೆಯುತ್ತಾರೆ. ಕಟ್ಟೆ ಮೇಲೆ ಬಸವಣ್ಣನ ಮಣ್ಣಿನ ಮೂರ್ತಿ ಮುಂದೆ ಬಿಂದಿಗೆಯಲ್ಲಿ ನೀರು ಸಂಗ್ರಹ ಮಾಡುತ್ತಾರೆ.
ಇದನ್ನೂ ಓದಿ: ಈ ಬಾರಿ ಮುಂಗಾರುಗಿಂತ ಹಿಂಗಾರು ಮಳೆ ಜೋರು: ರಾಜಕೀಯ ಬಗ್ಗೆಯೂ ಬೊಂಬೆ ಯುಗಾದಿ ಭವಿಷ್ಯ!
ಕಟ್ಟೆ ಮೇಲೆ ಎಕ್ಕೆ ಗಿಡದ ಎಲೆ ಮತ್ತು ಕಟ್ಟೆಯ ಕೆಳಗೆ ಎತ್ತಿನ ಬಂಡಿ ನೇಗಿಲು ಮಾಡಿ ಪೂಜೆ ಮಾಡಲಾಗುತ್ತದೆ. ಕಟ್ಟೆ ಮುಂದೆ ಮಣ್ಣಿನಿಂದ ಎತ್ತು, ಕೂರಿ, ಮಣ್ಣಿನಲ್ಲಿ ರೈತನ ಮೂರ್ತಿ ಮಾಡಿ ಬಿತ್ತನೆ ಮಾಡುವ ದೃಶ್ಯ ರಚನೆ ಮಾಡುತ್ತಾರೆ.

ನೇಕಾರನ ಮಗ್ಗ, ವ್ಯಾಪಾರಿಯ ತಕ್ಕಡಿ, ಊರ ಅಗಸಿಬಾಗಿಲು ನಿರ್ಮಾಣ ಮಾಡುತ್ತಾರೆ. ರಾತ್ರಿ ಬೆಳಗಿನವರೆಗೆ ಯಾರೂ ಸ್ಥಳದಲ್ಲಿ ಇರುವುದಿಲ್ಲ. ಮುಂಜಾನೆ ರೈತರು ಸೇರಿದಂತೆ ಎಲ್ಲರೂ ಬಂದು ಜಮಾಯಿಸುತ್ತಾರೆ. ಕಟ್ಟೆ ಯಾವ ಭಾಗದಲ್ಲಿ ಬಿರುಕು ಬಿಡುತ್ತದೆ ಆ ಭಾಗದಲ್ಲಿ ಭೂಕಂಪವಾಗುತ್ತದೆ ಎಂಬ ನಂಬಿಕೆ ಇದೆ.

ಈ ಬಾರಿ ಉತ್ತರ ಮತ್ತು ಮಧ್ಯ ಭಾಗದಲ್ಲಿ ಜಕನೇರನಕಟ್ಟೆ ಬಿರುಕು ಬಿಟ್ಟಿದ್ದು, ಆದ್ದರಿಂದ ವಿಶ್ವದ ಉತ್ತರ ಹಾಗೂ ಮಧ್ಯಭಾಗದಲ್ಲಿ ಭೂಕಂಪವಾಗಲಿದೆ ಎಂಬ ನಂಬಿಕೆ ಮನೆಮಾಡಿದೆ. ದಕ್ಷಿಣ ಭಾಗದಲ್ಲಿ ಆಹಾರದ ಉಂಡೆಗಳು ಖಾಲಿಯಾಗಿವೆ. ಉತ್ತರ ಭಾಗದಲ್ಲಿನ ಆಹಾರದ ಧಾನ್ಯಗಳು ಖಾಲಿಯಾಗಿಲ್ಲ. ಉತ್ತರ ಭಾಗದಲ್ಲಿ ಜನಪೀಡೆಯಿದೆ ಎಂದರ್ಥ.
ಇದನ್ನೂ ಓದಿ: Ugadi 2025: ಯುಗಾದಿಯಂದು ಈ ಒಂದು ದೇವರನ್ನು ಪೂಜಿಸಿ; ವರ್ಷ ಪೂರ್ತಿ ಯಾವುದಕ್ಕೂ ಕೊರತೆಯಾಗದು!
ಬಸವಣ್ಣನ ಮುಂದಿನ ನೀರಿನ ಮಡಿಕೆಯಲ್ಲಿ ಅರ್ಧ ಮಡಿಕೆ ಖಾಲಿಯಾಗಿದೆ. ಇದರ ಅರ್ಥ ಮಳೆ ಸಮೃದ್ಧಿಯಾಗುತ್ತದೆ ಮತ್ತು ಖರ್ಚು ಕೂಡ ಜಾಸ್ತಿಯಾಗುತ್ತದೆ. ತಕ್ಕಡಿ ಬಿದ್ದು ಹೋಗಿದ್ದು ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂದರ್ಥ. ಅಗಸಿಬಾಗಿಲು ಬಿದ್ದು ಹೋಗಿದ್ದು, ಮುಂಬರುವ ದಿನಮಾನದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಕಾದಿದೆ ಎಂದರ್ಥ. ಕೂರಿಗೆ ಕುಂಟೆ ಸ್ತಬ್ದವಾಗಿದ್ದು, ಆಧುನಿಕ ಕೃಷಿಯಿಂದ ರೈತ ಸ್ತಬ್ದನಾಗಿದ್ದು, ಆರಾಮವಾಗಿದ್ದಾನೆ ಎಂದರ್ಥ. ನೇಕಾರನ ಮಗ್ಗ ಕೂಡ ಇದ್ದು, ನೇಕಾರರು ಸ್ಥಿರವಾಗಿದ್ದಾರೆ ಎಂಬ ನಂಬಿಕೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.