ಯತ್ನಾಳ್ ಬೆನ್ನಿಗೆ ನಿಂತ ಪಂಚಮಸಾಲಿ ಸಮುದಾಯ: ಬೆಜೆಪಿ ಹೈಕಮಾಂಡ್ಗೆ ಏ.10 ಡೆಡ್ಲೈನ್!
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ. ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಿರುವುದು ಇದು ಮೂರನೇ ಬಾರಿ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮ ನಿರ್ಣಾಯಕ ಹಂತಕ್ಕೆ ತಲುಪಿತು ಎನ್ನುವಷ್ಟರಲ್ಲಿ ಪಂಚಮಸಾಲಿ ಸಮುದಾಯ ಸಿಡಿದೆದ್ದಿದ್ದು, ಬಿಜೆಪಿ ಹೈಕಮಾಂಡ್ಗೆ ಏಪ್ರಿಲ್ 10 ಗಡುವು ನೀಡಿದೆ.

ಬೆಳಗಾವಿ, (ಮಾರ್ಚ್ 27): ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಡಿ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil yatnal) ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಹೈಕಮಾಂಡ್ನ ಈ ನಿರ್ಧಾರಕ್ಕೆ ಕರ್ನಾಟಕ ಬಿಜೆಪಿಯ ಕೆಲ ನಾಯಕರು ಬೇಸರಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ್ ಪರ ಭರ್ಜರಿ ಚರ್ಚೆಗಳು ನಡೆದಿವೆ. ಮತ್ತೊಂದೆಡೆ ಯತ್ನಾಳ್ ಬೆನ್ನಿಗೆ ಪಂಚಮಸಾಲಿ ಸಮಯದಾಯ (panchamasali community) ನಿಂತಿದ್ದು, ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದೆ. ಅಲ್ಲದೇ ಉಚ್ಛಾಟನೆ ಆದೇಶ ವಾಪಸ್ ಪಡೆದುಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಹೈಕಮಾಂಡ್ಗೆ ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ(Basava Jaya Mruthyunjaya Swamiji) ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಏಪ್ರಿಲ್ 10ರೊಳಗೆ ಉಚ್ಛಾಟನೆ ಆದೇಶ ವಾಪಸ್ ಪಡೆಯಬೇಕು ಎಂದು ಹೈಕಮಾಂಡ್ಗೆ ಗಡವು ನೀಡದ್ದಾರೆ.
ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವ ಸಂಬಂಧ ಬೆಳಗಾವಿಯಲ್ಲಿಂದು ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ನಾಯಕರ ಸಭೆ ನಡೆದಿದ್ದು, ಯತ್ನಾಳ್ ಬೆನ್ನಿಗೆ ನಿಲ್ಲುವ ತೀರ್ಮಾನ ಕೈಗೊಂಡಿದೆ. ಅಲ್ಲದೇ ಏಪ್ರಿಲ್ 13ರಂದು ಬೆಳಗಾವಿಯಲ್ಲಿ ಬಹಳ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆ ಬೆನ್ನಲ್ಲೇ ರಾಜೀನಾಮೆ ಪರ್ವ, ಮತ್ತೊಂದಡೆ ಸಂಭ್ರಮ: ಸತ್ಯವಂತರಿಗೆ ಕಾಲವಲ್ಲ ಎಂದ ಬಸನಗೌಡ
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ , ಏಪ್ರಿಲ್ 10ರ ಒಳಗೆ ಆದೇಶ ವಾಪಸ್ ಪಡೆಯಬೇಕು. ಒಂದು ವೇಳೆ ಉಚ್ಚಾಟನೆ ಆದೇಶ ವಾಪಾಸ್ ಪಡೆಯದಿದ್ದರೆ ಏಪ್ರಿಲ್ 13ರಂದು ಬೆಳಗಾವಿಯಲ್ಲಿ ಬಹಳ ದೊಡ್ಡ ಪ್ರತಿಭಟನೆ ಮಾಡುತ್ತೇವೆ. ಎಲ್ಲ ಹಿಂದೂ ಪರ ಕಾರ್ಯಕರ್ತರು, ಸಮಾಜದ ಮುಖಂಡರು ಬರಬೇಕು. ಸಮಾಜದ ಶಾಸಕರು, ಸಂಸದರು ಕೂಡ ಸತ್ಯಾಂಶ ಹೇಳುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಸವರಾಜ್ ಬೊಮ್ಮಾಯಿ, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಅವರು ನೈತಿಕ ಬೆಂಬಲ ನೀಡಿದ್ದಾರೆ. ಸಮಾಜದ ಶಾಸಕರು ಒತ್ತಡ ಹಾಕದಿದ್ದರೆ ನಿಮ್ಮ ಮೇಲೆ ಸಮಾಜ ಬೇಸರವಾಗುತ್ತೆ. ಅನೇಕರು ಸಮಾಜದ ಹೆಸರು ಹೇಳಿ ಅಧಿಕಾರ ಬಂದ ಮೇಲೆ ಕೈಕೊಟ್ಟರು. ಯತ್ನಾಳ್ ಅವರು ಮೀಸಲಾತಿ ಹೋರಾಟ ಕೈ ಬಿಡಲಿಲ್ಲ. ಹೀಗಾಗಿ ಅವರ ಬೆನ್ನಿಗೆ ಸಮಾಜ ನಿಲ್ಲಬೇಕಿದೆ. ವರಿಷ್ಠರು ನಮ್ಮನ್ನ ಮಾತುಕತೆ ಕರೆದರೆ ನಾವು ಹೋಗಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.