ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಖಾಲಿ ಆಗಿರುವ ಸಚಿವ ಸ್ಥಾನ ಯಾರ ಪಾಲು? ಕಾಂಗ್ರೆಸ್ ಲೆಕ್ಕಾಚಾರಗಳೇನು?
ಬಿ. ನಾಗೇಂದ್ರ ರಾಜೀನಾಮೆಯಿಂದ ಖಾಲಿಯಾದ ಸಚಿವ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಎಸ್ಟಿ ಕೋಟಾ, ಮಹಿಳಾ ಪ್ರಾತಿನಿಧ್ಯ ಹಾಗೂ ಸಿದ್ದರಾಮಯ್ಯ ಬೆಂಬಲಿಗರನ್ನು ಸರಿದೂಗಿಸಲು ಹೈಕಮಾಂಡ್ ವಿಭಿನ್ನ ಲೆಕ್ಕಾಚಾರಗಳನ್ನು ನಡೆಸುತ್ತಿದೆ. ಹೀಗಿದ್ದರೂ ಫೈನಲ್ ಆಗಿ ಮಂತ್ರಿಗಿರಿ ಯಾರ ಪಾಲಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 30: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ 25 ದಿನಗಳಲ್ಲೇ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮಂತ್ರಿಗಿರಿಗೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರು ಹುದ್ದೆ ತೊರೆದ ಬೆನ್ನಲ್ಲೇ ಆ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ. ಈ ಅವಕಾಶವನ್ನ ಬಳಸಿಕೊಂಡು ಕಾಂಗ್ರೆಸಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುನಿಸು ತಣಿಸುತ್ತಾರಾ? ಅಥವಾ ಡಿಕೆಶಿ ಸಚಿವ ಸಂಪುಟದಲ್ಲಿ ಓರ್ವ ಮಹಿಳಾ ಸಚಿವರೂ ಇಲ್ಲ ಎಂಬ ದೂರಿನ ಕಾರಣ ಆ ಬಗ್ಗೆ ಗಮನ ಹರಿಸುತ್ತಾರಾ? ಹೀಗೆ ಹಲವು ಪ್ರಶ್ನೆ ಮತ್ತು ಲೆಕ್ಕಾಚಾರಗಳು ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿವೆ.
ಹೈಕಮಾಂಡ್ ಮುಂದಿದೆ ಹಲವು ಲೆಕ್ಕಾಚಾರ
ನಾಗೇಂದ್ರ ಎಸ್ಟಿ ಸಮುದಾಯಕ್ಕೆ ಸೇರಿದವರಾಗಿರುವ ಕಾರಣ ತೆರವಾಗಿರುವ ಸ್ಥಾನವನ್ನು ಅದೇ ಸಮುದಾಯಕ್ಕೆ ನೀಡಬೇಕು ಎಂಬ ಒತ್ತಾಯ ಸಮುದಾಯದ ಹಿರಿಯ ನಾಯಕರಿಂದ ಕೇಳಿಬರುತ್ತಿದೆ. ಇನ್ನೊಂದೆಡೆ ಮಹಿಳಾ ಕೋಟಾದಲ್ಲೂ ಒಂದು ಸ್ಥಾನ ಖಾಲಿಯಿದೆ. ಹೀಗಾಗಿ ಎಸ್ಟಿ ಸಮುದಾಯದ ಜೊತೆಗೆ ಮಹಿಳಾ ಪ್ರಾತಿನಿಧ್ಯವನ್ನೂ ಸರಿದೂಗಿಸುವ ರೀತಿಯಲ್ಲಿ ನೇಮಕ ಮಾಡುವ ಚರ್ಚೆಯೂ ಕಾಂಗ್ರೆಸ್ನಲ್ಲಿ ಶುರುವಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಬಿಗಿಪಟ್ಟು ಮುಂದುವರಿಸಿದ್ದಾರೆ. ಹೀಗಾಗಿ ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಸವರಾಜ ಶಿವಣ್ಣನವರ್ರನ್ನು ಸೇರ್ಪಡೆ ಮಾಡಿಕೊಂಡ್ರೆ ಸಿದ್ದರಾಮಯ್ಯರ ಅಸಮಾಧಾನವನ್ನ ಸ್ವಲ್ಪ ಮಟ್ಟಿಗೆ ತಣಿಸಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಆದ್ರೆ ಮಹಿಳಾ ಕೋಟಾ, ಎಸ್ಟಿ ಕೋಟಾ ಮತ್ತು ಬಳ್ಳಾರಿ ಪ್ರಾತಿನಿಧ್ಯ ಈ ಮೂರನ್ನೂ ಒಂದೇ ಬಾರಿ ಸರಿದೂಗಿಸೋಕೆ ಸಾಧ್ಯವಾಗುತ್ತಾ ಅನ್ನೋದು ಮತ್ತೊಂದು ಪ್ರಶ್ನೆ.
ಇದನ್ನೂ ಓದಿ: ಬಾಲ್ಯದ ಗೆಳೆಯನಿಗೆ ಡಿಕೆಶಿ ‘ಉಡುಗೊರೆ’: ರಾಜಕೀಯಕ್ಕೆ ರವಿಚಂದ್ರನ್?
ಹೀಗಾಗಿಯೇ ಕಾಂಗ್ರೆಸ್ ವಲಯದಲ್ಲಿ ಮಗದೊಂದು ಹೆಸರು ಚರ್ಚೆಗೆ ಬಂದಿದ್ದು, ಮಹಿಳಾ ಕೋಟಾದಡಿ ಅನ್ನಪೂರ್ಣಾ ತುಕಾರಾಂಗೆ ಅವಕಾಶ ನೀಡಿದ್ರೆ ಹೇಗೆಂಬ ಮಾತುಗಳು ಕೇಳಿಬಂದಿವೆಯಂತೆ. ಅನ್ನಪೂರ್ಣಾ ತುಕಾರಾಂಗೆ ಅವಕಾಶ ನೀಡಿದ್ರೆ ಮಹಿಳಾ ಪ್ರಾತಿನಿಧ್ಯವೂ ಭರ್ತಿಯಾಗುತ್ತೆ, ಎಸ್ಟಿ ಸಮುದಾಯಕ್ಕೂ ಅವಕಾಶ ಸಿಕ್ಕಂತಾಗುತ್ತೆ. ಬಳ್ಳಾರಿ ಪ್ರಾತಿನಿಧ್ಯದ ಪ್ರಶ್ನೆಗೂ ಉತ್ತರ ಸಿಗುತ್ತೆ. ಹೀಗಾಗಿ ನಾಗೇಂದ್ರ ರಾಜೀನಾಮೆಯ ನಂತರ ಕಾಂಗ್ರೆಸ್ ಮುಂದೆ ಹಲವು ಆಯ್ಕೆಗಳು ತೆರೆದುಕೊಂಡಿವೆ. ಮತ್ತೊಂದೆಡೆ ಮುನಿಸು ಮುಂದುವರಿಸಿರುವ ಎಂ.ಕೃಷ್ಣಪ್ಪ ಅವರ ಹೆಸರೂ ಮುಂಚೂಣಿಯಲ್ಲಿದ್ದು, ಫೈನಲ್ ಆಗಿ ಮಂತ್ರಿಗಿರಿ ಯಾರ ಪಾಲಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Sun, 30 August 26




