ಸಿಕ್ಕ ಸಿಕ್ಕಲ್ಲಿಂದ ಐಪಿಎಲ್ ಟಿಕೆಟ್ ಖರೀದಿ ಮಾಡುವ ಮುನ್ನ ಎಚ್ಚರ! ಲಕ್ಷಾಂತರ ರೂ. ಕಳೆದುಕೊಳ್ಳುವಿರಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಮ್ಯಾಚ್ ಕ್ರೇಜ್ ಜನರಲ್ಲಿ ಹೆಚ್ಚಿದ್ದು, ಟಿಕೆಟ್ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಅರೆ ಕ್ಷಣದಲ್ಲಿ ಖಾಲಿಯಾಗುವ ಟಿಕೆಟ್ ಪಡೆಯಲು ಹಾತೊರೆಯುತ್ತಾರೆ. ಒಮ್ಮೆಯಾದರೂ ತಮ್ಮ ನೆಚ್ಚಿನ ಆಟಗಾರರನ್ನು, ಪಂದ್ಯವನ್ನು ಕಣ್ತುಂಬಿಕೊಳ್ಳಬೆಕೆಂಬ ಆಸೆಗೆ ಯಾವ ಯಾವುದೋ ಅನಧಿಕೃತ ಆನ್ಲೈನ್ ಪ್ಲಾಟ್ಫಾರ್ಮ್ಗಳಿಂದ ಅಥವಾ ಆನ್ಲೈನ್ನಲ್ಲಿ ಪರಿಚಯವಾಗುವವರಿಂದ ಟಿಕೆಟ್ ಖರೀದಿಸಿ ಮೋಸ ಹೋಗಬೇಡಿ. ಹೀಗೆಯೆ ಬೆಂಗಳೂರಿನ ವ್ಯಕ್ತಿಯೊಬ್ಬ ಮೋಸ ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು, ಏಪ್ರಿಲ್ 04: ನಗರದಲ್ಲಿ ಐಪಿಎಲ್ ಟಿಕೆಟ್ ಕ್ರೇಜ್ (IPL 2026) ಎಲ್ಲೆಡೆ ಹಬ್ಬಿದೆ. ತವರು ನೆಲದಲ್ಲಿ ತಮ್ಮ ಇಷ್ಟದ ಆಟಗಾರರ ಮ್ಯಾಚ್ ನೋಡಲು ಎಲ್ಲರಿಗೂ ಆಸೆಯಿದೆ. ಆದರೆ ಯಾವುದೋ ಅನಧಿಕೃತ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಟಿಕೆಟ್ ಖರೀದಿಗೆ ಮುಂದಾದರೆ ಮೋಸ ಹೋಗಬೇಕಾಗುತ್ತದೆ. ಇಂತದ್ದೇ ಮೋಸದ ಜಾಲಕ್ಕೆ ಸಿಲುಕಿ ಬೆಂಗಳೂರಿನ ಓರ್ವ ಟೆಕ್ಕಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಎಚ್ಚರಿಕೆಯ ಗಂಟೆಯಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿ
ಬಿ.ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ ಒಬ್ಬರು ಆನ್ಲೈನ್ ಮೋಸಕ್ಕೆ ಒಳಗಾಗಿ 1.46 ಲಕ್ಷ ರೂ. ಕಳೆದುಕೊಂಡಿದ್ದರ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿ ಟಿಕೆಟ್ ಮಾರಾಟಗಾರನಂತೆ ನಟಿಸಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ತನ್ನನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡ ಆರೋಪಿಯು, ಐಪಿಎಲ್ ಪಂದ್ಯಕ್ಕೆ ಟಿಕೆಟ್ಗಳ ಜೊತೆಗೆ ಊಟದ ಕೂಪನ್ಗಳು ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಕೆ ಮೂಡಿಸಿದ್ದ. ಆರಂಭದಲ್ಲಿ ಎರಡು ಟಿಕೆಟ್ಗಳಿಗೆ 3,700 ರೂ. ದರ ನಿಗದಿ ಮಾಡಿದ್ದರೂ, ನಂತರ ಭದ್ರತಾ ಠೇವಣಿ, ಹೆಚ್ಚುವರಿ ಐಡಿ ಕಾರ್ಡ್ ಹಾಗೂ ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಕೇಳಿದ್ದ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ, ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದ ಎಂದು ನೊಂದ ವ್ಯಕ್ತಿ ಹೇಳಿದ್ದಾರೆ.
ಇದನ್ನೂ ಓದಿ ಬಂದಿದ್ದು ಜಾರ್ಖಂಡ್ನಿಂದ, ಧರಿಸಿದ್ದು ಆರ್ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!
ಟಿಕೆಟ್ ಕೊಡಲಿಲ್ಲ, ದುಡ್ಡೂ ಹಿಂದಿರುಗಿಸಲಿಲ್ಲ
ಆರೋಪಿಯ ಮಾತನ್ನು ನಂಬಿದ ವ್ಯಕ್ತಿ ತನ್ನ ಖಾತೆಯ ಜೊತೆಗೆ ತಾಯಿಯ ಖಾತೆಯಿಂದಲೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದ್ದು, ಒಟ್ಟು 1.46 ಲಕ್ಷ ರೂ.ಪಾವತಿಸಿರುವುದಾಗಿ ಹೇಳಿದ್ದಾರೆ. ಹಣ ಪಡೆದ ಬಳಿಕ ಟಿಕೆಟ್ಗಳನ್ನು ನೀಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




