ರಾಜ್ಯಸಭೆಗೆ ಕಣಕ್ಕಿಳಿದ ಪ್ರೊ. ಎಂ. ನಾಗರಾಜ; ಮಾಜಿ ಪ್ರಧಾನಿ ದೇವೇಗೌಡರ ಸ್ಥಾನಕ್ಕೆ ಬಿಜೆಪಿ ಇವರನ್ನೇ ಆರಿಸಿದ್ದೇಕೆ?
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಹಿರಿಯ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಇವರನ್ನು ಆಯ್ಕೆ ಮಾಡಲಾಗಿದ್ದು, ಇದರೊಂದಿಗೆ ವಿಧಾನಪರಿಷತ್ ಚುನಾವಣೆಗೆ ಲಿಂಗರಾಜ ಪಾಟೀಲ ಮತ್ತು ರಘು ಕೌಟಿಲ್ಯ ಅವರ ಹೆಸರುಗಳನ್ನು ಬಿಜೆಪಿ ಪ್ರಕಟಿಸಿದೆ.

ಬೆಂಗಳೂರು, ಜೂನ್ 08: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ಭಾನುವಾರ ರಾತ್ರಿ ತನ್ನ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಘೋಷಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಕುರಿತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಪ್ರೊ. ನಾಗರಾಜ ಅವರಿಗೆ ಮನ್ನಣೆ ನೀಡಿದೆ.ಇದರೊಂದಿಗೆ, ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳಾಗಿ ಲಿಂಗರಾಜ ಪಾಟೀಲ ಮತ್ತು ರಘು ಕೌಟಿಲ್ಯ ಅವರ ಹೆಸರುಗಳನ್ನು ಕೂಡ ಬಿಜೆಪಿ ಪ್ರಕಟಿಸಿದೆ
ಮುಖ್ಯಾಂಶಗಳು
- ಪ್ರೊ. ಎಂ. ನಾಗರಾಜ ಅವರನ್ನು ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ.
- ಮಾಜಿ ಪ್ರಧಾನಿ ದೇವೇಗೌಡರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಇವರ ಆಯ್ಕೆಯಾಗಿದೆ.
- ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ಬಿಜೆಪಿ ಒಬಿಸಿ ಕಾರ್ಡ್ ಬಳಸಿದೆ.
ಯಾರು ಈ ಪ್ರೊ. ಎಂ. ನಾಗರಾಜ?
ಪ್ರೊ. ಎಂ. ನಾಗರಾಜ ಅವರು ಮೂಲತಃ ಹುಬ್ಬಳ್ಳಿಯವರಾಗಿದ್ದು, ಶಿಕ್ಷಣ ತಜ್ಞ ಹಾಗೂ ಹಿರಿಯ ಒಬಿಸಿ (OBC) ನಾಯಕರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಕ್ರಿಯ ಕಾರ್ಯಕರ್ತರಾಗಿದ್ದ ಇವರು, ಬಿಜೆಪಿಯ ತಳಮಟ್ಟದ ನಿಷ್ಠಾವಂತ ನಾಯಕ. ಈ ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದವರು.
ಇದನ್ನೂ ಓದಿ ಹೆಚ್ಡಿ ದೇವೇಗೌಡಗೆ ತಪ್ಪಿದ ಎನ್ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ
ಆಯ್ಕೆಗೆ ಕಾರಣಗಳೇನು?
- ಒಬಿಸಿ ಮತಬ್ಯಾಂಕ್ ತಂತ್ರ:ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ, ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ (OBC) ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ಈ ತಂತ್ರ ರೂಪಿಸಿದೆ.
- ದೇವೆಗೌಡರ ಯುಗದ ಅಂತ್ಯದ ಮುನ್ಸೂಚನೆ: ಹಾಲಿ ಸಂಸದರಾಗಿದ್ದ 93 ವರ್ಷದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮತ್ತೊಮ್ಮೆ ಅವಕಾಶ ನೀಡದೆ, ಅವರ ಸ್ಥಾನಕ್ಕೆ ಪ್ರೊ. ನಾಗರಾಜ ಅವರನ್ನು ತರುವ ಮೂಲಕ ಮೈತ್ರಿಕೂಟದಲ್ಲಿ ಬಿಜೆಪಿ ಹೊಸ ಸಂದೇಶ ರವಾನಿಸಿದೆ. ಜೆಡಿಎಸ್ಗೆ ಸ್ವಂತ ಬಲದಿಂದ ಗೆಲ್ಲಲು ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಈ ನಿರ್ಧಾರ ಅನಿವಾರ್ಯವಾಯಿತು.
- ನಿಷ್ಠೆಗೆ ಸಂದ ಗೌರವ: ಯಾವುದೇ ವಿವಾದಗಳಿಲ್ಲದೆ ದಶಕಗಳಿಂದ ಆರ್ಎಸ್ಎಸ್ ಮತ್ತು ಪಕ್ಷಕ್ಕಾಗಿ ದುಡಿದ ಸಂಘಟನಾತ್ಮಕ ನಿಷ್ಠಾವಂತರಿಗೆ ಹೈಕಮಾಂಡ್ ಮನ್ನಣೆ ನೀಡಿದೆ.
ಜೂನ್ 25 ರಂದು ದೇವೇಗೌಡರು ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಜೂನ್ 18 ರಂದು ಚುನಾವಣೆ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




