ಮೆಟ್ರೋ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸಾವು ಕೇಸ್: ಮೂವರ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರಿನ ಯಲಹಂಕದಲ್ಲಿ ಮೆಟ್ರೋ ನಿರ್ಮಾಣದ ವೇಳೆ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಸಾವನ್ನಪ್ಪಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಮೃತ ಆಟೋ ಚಾಲಕನ ಮಾವ ನೀಡಿದ ದೂರು ಆಧರಿಸಿ ಮೂವರ ವಿರುದ್ಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ಬಗ್ಗೆ ಬಿಎಂಆರ್ಸಿಎಲ್ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದೆ.

ಬೆಂಗಳೂರು, ಏಪ್ರಿಲ್ 17: ನಗರದ ಯಲಹಂಕದ ಕೋಗಿಲು ಕ್ರಾಸ್ ಬಳಿ ಮೆಟ್ರೋಗೆ (Metro) ಬಳಸುವ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಖಾಸೀಂ ಸಾಬ್ ಸಾವನ್ನಪ್ಪಿರುದ್ದರು. ಫೈನಾನ್ಸ್ನಲ್ಲಿ ಸಾಲ ಮಾಡಿ ಆಟೋ ಖರೀದಿಸಿ ಕೇಲವ 20 ದಿನದಲ್ಲೇ ದುರ್ಘಟನೆ ಸಂಭವಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮೃತನ ಮಾವ ಸೈಯದ್ ಖಾದರ್ ದೂರು ಆಧರಿಸಿ ಲಾರಿ ಚಾಲಕ, ಎನ್ಸಿಸಿ ಕಂಪನಿ ಮ್ಯಾನೇಜರ್ ಮತ್ತು ಗುತ್ತಿಗೆದಾರನ ವಿರುದ್ಧ ಬಿಎನ್ಎಸ್ 281, 106 ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ 12.10 ರ ಸುಮಾರಿಗೆ ಆಟೋ ಚಾಲಕ ಖಾಸೀಂ ಸಾಬ್, ಕೋಗಿಲು ಕ್ರಾಸ್ ಸಿಗ್ನಲ್ಗೆ ಬಂದಿದ್ದರು. ಈ ವೇಳೆ ಮೆಟ್ರೋ ಪಿಲ್ಲರ್ಗೆ ಅಳವಡಿಸುವ ವಯಾಡೆಕ್ಟ್ ಹೊತ್ತಿದ್ದ ಲಾರಿ ಕ್ರಾಸ್ನಲ್ಲಿ ಟರ್ನ್ ಪಡೆದುಕೊಳ್ಳುತ್ತಿತ್ತು. ಆಗ ಖಾಸಿಂ ಸಾಬ್ ಆಟೋ ಸೇರಿದಂತೆ ಅಲ್ಲಿ ಸಾಗುತ್ತಿದ್ದ ವಾಹನಗಳೆಲ್ಲಾ ನಿಂತುಕೊಂಡಿದ್ದವು. ಅದೇ ಹೊತ್ತಲ್ಲೇ 18 ಚಕ್ರದ ಲಾರಿ ನೋಡ ನೋಡ್ತಿದ್ದಂತೆ ಪಲ್ಟಿ ಹೊಡೆದಿತ್ತು. 80 ಅಡಿ ಉದ್ದದ ವಯಾಡೆಕ್ಟ್ ಆಟೋ ಮೇಲೆ ಉರುಳಿ ಬಿದ್ದಿತ್ತು. ಹತ್ತಾರು ಟನ್ ತೂಕದ ವಯಾಡೆಕ್ಟ್ ಬಿದ್ದಿದ್ರಿಂದ ಹೊಸ ಆಟೋ ಅಪ್ಪಚ್ಚಿಯಾದರೆ ಚಾಲಕ ಕೂಡ ಪ್ರಾಣ ಬಿಟ್ಟಿದ್ದ.
ಬಿಎಮ್ಆರ್ಸಿಎಲ್ ಟ್ವೀಟ್
ನಿನ್ನೆ ನಡೆದ ಬಿಎಮ್ಆರ್ಸಿಎಲ್ ಘಟನೆಯ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ pic.twitter.com/InKnPLcL9q
— ನಮ್ಮ ಮೆಟ್ರೋ (@OfficialBMRCL) April 16, 2025
ಆಟೋ ಚಾಲಕನ ಸಾವಿಗೆ ಬಿಎಂಆರ್ಸಿಎಲ್ನ ನಿರ್ಲಕ್ಷ್ಯವೇ ಕಾರಣ. ಇಂಥಾ ಬೃಹತ್ ವಸ್ತುಗಳನ್ನ ಸಾಗಿಸುವಾಗ ಹಿಂದೆ ಮುಂದೆ ಗಾರ್ಡ್ಗಳು ಇರಬೇಕು. ಆದರೆ ನಿನ್ನೆ ಲಾರಿ ಚಾಲಕನನ್ನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹೊಸದಾಗಿ ಖರೀದಿಸಿದ್ದ ಆಟೋ ನುಜ್ಜುಗುಜ್ಜು, ಮಾಲೀಕನೂ ಸಾವು: ಮೆಟ್ರೋ ವಯಾಡೆಕ್ಟ್ ಉರುಳಿ ಬಿದ್ದು ಘೋರ ದುರಂತ
ಇನ್ನು ಘಟನೆ ಬಗ್ಗೆ ಬಿಎಂಆರ್ಸಿಎಲ್ ಟ್ವೀಟ್ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಯಲಹಂಕ ಕೋಗಿಲು ಜಂಕ್ಷನ್ನಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ಆಟೋ ಚಾಲಕರೊಬ್ಬರು ಸಾವನ್ನಪ್ಪಿದ ದುರಂತದ ಬಗ್ಗೆ ವರದಿ ಮಾಡಲು ಬಿಎಂಆರ್ಸಿಎಲ್ ವಿಷಾದಿಸುತ್ತದೆ. ವಾಡಿಯಾರ್ಪುರ ಕಾಸ್ಟಿಂಗ್ ಯಾರ್ಡ್ನಿಂದ ಗರ್ಡರ್ ಅನ್ನು ಸಾಗಿಸುತ್ತಿದ್ದ ಲಾಂಗ್ ಕ್ಯಾರಿಯರ್ ಟ್ರಕ್ ಗರ್ಡರ್ ಸರಂಜಾಮು ಟ್ರಕ್ ತಿರುವು ಪಡೆಯುವಾಗ ಗರ್ಡರ್ ಆಟೋ ಮೇಲೆ ಬಿದ್ದು ಚಾಲಕ ಸಾವನ್ನಪ್ಪಿದ್ದಾರೆ.
ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಆಟೋ ಚಾಲಕನ ಶವವನ್ನು ಕ್ರೇನ್ ಬಳಸಿ ಹೊರತೆಗೆದು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದರೂ ಚಿಕಿತ್ಸೆ ಫಲಿಸದೆ, ವೈದ್ಯಕೀಯ ಅಧಿಕಾರಿಗಳು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅಪಘಾತದ ಬಗ್ಗೆ ಪೊಲೀಸ್ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಅಕಾಲಿಕ ಪ್ರಾಣಹಾನಿ ಬಗ್ಗೆ ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಮೃತರ ಕುಟುಂಬಕ್ಕೆ ನಮ್ಮ ತೀವ್ರ ಸಂತಾಪ ಸೂಚಿಸುತ್ತೇವೆ.
ಇದನ್ನೂ ಓದಿ: ಮೆಟ್ರೋ ವಯಾಡಕ್ಟ್ ಲಾರಿಯಿಂದ ಉರುಳಿ ಬಿದ್ದು ಆಟೋರಿಕ್ಷಾ ಚಾಲಕ ಸಾವು, ಸ್ಥಳದಲ್ಲಿದ್ದವರು ಹೇಳೋದೇನು?
ಪ್ರೋಟೋಕಾಲ್ ಪ್ರಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡುತ್ತದೆ. ಕಾರ್ಯಾಚರಣೆಯಲ್ಲಾಗಲಿ ಅಥವಾ ನಿರ್ಮಾಣದಲ್ಲಾಗಲಿ, ಸಾರ್ವಜನಿಕರ ಸುರಕ್ಷತೆಗೆ ಬಿಎಂಆರ್ಸಿಎಲ್ ಪ್ರಮುಖ ಆದ್ಯತೆಯಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:08 pm, Thu, 17 April 25