ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಮನೆ ಪಡೆದವರಿಗೆ ಬಿಗ್ ಶಾಕ್: ಹಂಚಿಕೆ ರದ್ದುಗೊಳಿಸಲು ಸರ್ಕಾರ ಆದೇಶ!
ರಾಜೀವ್ ಗಾಂಧಿ ವಸತಿ ನಿಗಮದ 'ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ' ಅಡಿಯಲ್ಲಿ ಬೆಂಗಳೂರಿನಲ್ಲಿ ಮನೆ ಪಡೆದು ದೀರ್ಘಕಾಲದಿಂದ ಬಾಕಿ ಹಣ ಪಾವತಿಸದ 5,000 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ನೋಟಿಸ್ಗೆ ಸ್ಪಂದಿಸದವರ ಮನೆ ಹಂಚಿಕೆಯನ್ನು ರದ್ದುಗೊಳಿಸಿ, ಆ ಮನೆಗಳನ್ನು ಇತರೆ ಅರ್ಹ ಬಡ ಫಲಾನುಭವಿಗಳಿಗೆ ನೀಡಲು ಆದೇಶಿಸಿದೆ. ಬಾಕಿ ಹಣ ವಸೂಲಾಗದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು, ಏ.29: ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಮನೆ ಪಡೆದು, ದೀರ್ಘಕಾಲದಿಂದ ಬಾಕಿ ಹಣ ಪಾವತಿಸದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದೆ. ನೋಟಿಸ್ ನೀಡಿದರೂ ಸ್ಪಂದಿಸದವರ ಮನೆ ಹಂಚಿಕೆಯನ್ನು ರದ್ದುಗೊಳಿಸಿ, ಆ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ವಸತಿ ಇಲಾಖೆ ಆದೇಶ ಹೊರಡಿಸಿದೆ.
‘ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ’ ಅಡಿ ಬೆಂಗಳೂರು ನಗರ ಜಿಲ್ಲೆಯ 20 ವಿವಿಧ ಕಡೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಬಡವರಿಗೆ ಮನೆ ಹಂಚಿಕೆ ಮಾಡಲಾಗಿತ್ತು. ಫಲಾನುಭವಿಗಳು ಪ್ರಾರಂಭಿಕ ಠೇವಣಿಯಾಗಿ 1 ಲಕ್ಷ ರೂಪಾಯಿ ಪಾವತಿಸಿ ಮನೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ನಿಗಮವು ಪ್ರತಿ ಮನೆಯ ಬೆಲೆಯನ್ನು 12.5 ಲಕ್ಷ ರೂಪಾಯಿ ಎಂದು ನಿಗದಿಪಡಿಸಿತ್ತು.
ಸುಮಾರು 5 ಸಾವಿರ ಫಲಾನುಭವಿಗಳಿಂದ ಒಟ್ಟು 5 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಿದೆ. ಹಣ ಪಾವತಿಸುವಂತೆ ವಸತಿ ನಿಗಮವು ಮೂರು ಹಂತಗಳಲ್ಲಿ ನೋಟಿಸ್ ಜಾರಿ ಮಾಡಿದರೂ ಫಲಾನುಭವಿಗಳು ಬಾಕಿ ಹಣ ಪಾವತಿಸಿಲ್ಲ. ಖಾಸಗಿ ಬ್ಯಾಂಕ್ಗಳಿಂದ ಸಾಲ ಸಿಗದ ಕಾರಣ ಅನೇಕ ಫಲಾನುಭವಿಗಳು ಹಣ ಕಟ್ಟಲು ವಿಫಲರಾಗಿದ್ದಾರೆ ಎನ್ನಲಾಗಿದೆ. ಸರ್ಕಾರವೇ ಸಾಲ ಮೇಳಗಳನ್ನು ಆಯೋಜಿಸಿದ್ದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಇದನ್ನೂ ಓದಿ: ಕೊಪ್ಪಳ: 21 ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ಕೈಗೆ ಸಿಕ್ಕಿಬಿದ್ದ ಎಸ್ಡಿಎ ರಂಜಿತ್
ಬಾಕಿ ಹಣ ವಸೂಲಾಗದ ಹಿನ್ನೆಲೆಯಲ್ಲಿ ಮನೆ ಹಂಚಿಕೆ ರದ್ದುಗೊಳಿಸುವ ನಿಗಮದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಈಗಿರುವ ಹಂಚಿಕೆ ರದ್ದುಪಡಿಸಿ, ಮನೆಗಾಗಿ ಕಾಯುತ್ತಿರುವ ಇತರೆ ಅರ್ಹ ಬಡ ಫಲಾನುಭವಿಗಳಿಗೆ ಈ ಮನೆಗಳನ್ನು ನೀಡಲು ಸೂಚಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Wed, 29 April 26



