ಮೂವರು ಬೇಟೆಗಾರರ ಎನ್ಕೌಂಟರ್ ಬಳಿಕವೂ ನಿಲ್ಲದ ಕಳ್ಳಬೇಟೆ: ಹನೂರು ಅರಣ್ಯದಲ್ಲಿ ಕಡವೆ ಬೇಟೆ
ಹನೂರು ಅರಣ್ಯದಲ್ಲಿ ಶೂಟೌಟ್ ನಂತರವೂ ಕಳ್ಳಬೇಟೆ ನಿಂತಿಲ್ಲ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಈಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಉಡುತೊರೆಹಳ್ಳ ಡ್ಯಾಂ ಬಳಿ ಕಡವೆಯನ್ನು ಬೇಟೆಯಾಡಿ ಮೂರು ಭಾಗಗಳಾಗಿ ಕತ್ತರಿಸಿ ಮಾಂಸವನ್ನು ಚೀಲಗಳಲ್ಲಿ ತುಂಬಿದ್ದ ನಾಲ್ವರು, ಅರಣ್ಯ ಸಿಬ್ಬಂದಿ ಕಂಡು ಪರಾರಿಯಾಗಿದ್ದಾರೆ. ಸದ್ಯ ಕೇಸ್ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಯತ್ತಿದೆ.

ಮುಖ್ಯಾಂಶಗಳು
- ಹನೂರು ಅರಣ್ಯದಲ್ಲಿ ಮತ್ತೆ ಕಡವೆ ಬೇಟೆ
- ಅರಣ್ಯ ಸಿಬ್ಬಂದಿ ಕಂಡು ಬೇಟೆಗಾರರು ಪರಾರಿ
- ಆರೋಪಿಗಳಿಗಾಗಿ ಅರಣ್ಯ ಇಲಾಖೆ ಶೋಧ
ಚಾಮರಾಜನಗರ, ಸೆಪ್ಟೆಂಬರ್ 3: ಹನೂರು ಅರಣ್ಯದಲ್ಲಿ ಮೂವರು ಬೇಟೆಗಾರರು ಗುಂಡಿನ ದಾಳಿಯಲ್ಲಿ ಮೃತಪಟ್ಟ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟಾದರೂ ಅರಣ್ಯದಲ್ಲಿ ಕಳ್ಳಬೇಟೆ ಮುಂದುವರಿದಿದೆ ಎನ್ನಲಾಗಿದೆ. ಈ ಆರೋಪಕ್ಕೆ ಇದೀಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಕಡವೆಯನ್ನು ಬೇಟೆಯಾಡಿ ಮೂರು ಭಾಗಗಳಾಗಿ ಕತ್ತರಿಸಿ, ಮಾಂಸವನ್ನು ಚೀಲಗಳಲ್ಲಿ ತುಂಬಿದ್ದ ವೇಳೆ ಅರಣ್ಯ ಸಿಬ್ಬಂದಿ ಬಂದಿದ್ದರಿಂದ ಬೇಟೆಗಾರರು ಪರಾರಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯ ಉಡುತೊರೆಹಳ್ಳ ಜಲಾಶಯದ ಬಳಿ ಸೆಪ್ಟೆಂಬರ್ 1ರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾಡಬಂದೂಕಿನಿಂದ ಕಡವೆಯನ್ನು ಬೇಟೆಯಾಡಿದ ನಾಲ್ವರು ಆರೋಪಿಗಳು, ಬಳಿಕ ಅದರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಮಾಂಸವನ್ನು ಚೀಲಗಳಲ್ಲಿ ತುಂಬಿಕೊಂಡಿದ್ದರು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಅರಣ್ಯ ಸಿಬ್ಬಂದಿ ಕಂಡು ಮಾಂಸದ ಚೀಲ ಬಿಸಾಡಿ ಪರಾರಿ
ಉಡುತೊರೆಹಳ್ಳ ಡ್ಯಾಂ ಬಳಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಬೇಟೆಗಾರರ ಚಲನವಲನ ಗಮನಕ್ಕೆ ಬಂದಿದೆ. ಸಿಬ್ಬಂದಿ ಬರುತ್ತಿರುವುದನ್ನು ಕಂಡ ಆರೋಪಿಗಳು ಕಡವೆ ಮಾಂಸ ತುಂಬಿದ್ದ ಚೀಲಗಳನ್ನು ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ.
ಕೇಸ್ ದಾಖಲು, ಆರೋಪಿಗಳ ಪತ್ತೆಗಾಗಿ ಶೋಧ
ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ ಕಡವೆಯ ದೇಹದ ಭಾಗಗಳು ಹಾಗೂ ಮಾಂಸ ತುಂಬಿದ್ದ ಚೀಲಗಳನ್ನು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹನೂರು ಬಫರ್ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕಾಡುಪ್ರಾಣಿಗಳ ಬೇಟೆ ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ, ಬೇಟೆಗಾರರು ಮತ್ತೆ ಸಕ್ರಿಯರಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಹನೂರು ಶೂಟೌಟ್ ಬಳಿಕ ಮತ್ತೆ ಕಳ್ಳಬೇಟೆ ಆರೋಪ
ಹನೂರು ಅರಣ್ಯ ವ್ಯಾಪ್ತಿಯಲ್ಲಿ ಆಗಸ್ಟ್ 14ರಂದು ನಡೆದ ಗುಂಡಿನ ದಾಳಿ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಮೃತಪಟ್ಟಿದ್ದರು. ಅವರು ಕಾಡುಪ್ರಾಣಿಯನ್ನು ಬೇಟೆಯಾಡಲು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದ್ದರು ಎಂಬುದು ಅರಣ್ಯ ಇಲಾಖೆಯ ಆರೋಪವಾಗಿತ್ತು. ಆದರೆ ಗುಂಡಿನ ದಾಳಿ ಪ್ರಕರಣದ ಕುರಿತು ಬಳಿಕ ಹಲವು ಪ್ರಶ್ನೆಗಳು ಮತ್ತು ಅನುಮಾನಗಳು ವ್ಯಕ್ತವಾಗಿದ್ದವು. ಪ್ರಕರಣ ರಾಜಕೀಯವಾಗಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿಧಾನಸಭೆಯಲ್ಲೂ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ: ಹನೂರು ಎನ್ ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಜಾಲ: ಚಾಮರಾಜನಗರದಿಂದ ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಸ್ಮಗ್ಲಿಂಗ್
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಹನೂರು ಅರಣ್ಯದಲ್ಲಿ ಮತ್ತೆ ಕಡವೆ ಬೇಟೆಯಾಡಿರುವ ಘಟನೆ ಬೆಳಕಿಗೆ ಬಂದಿರುವುದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಣೆಯ ವಿಚಾರದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಸಿಬ್ಬಂದಿ ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



