AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ ಸಿದ್ಧತೆ; ತಜ್ಞರ ಸಲಹೆಗೆ ಪರಿಸರ ಪ್ರೇಮಿಗಳ ಆಗ್ರಹ

ಕರ್ನಾಟಕದ 'ಸ್ವಿಜರ್ಲ್ಯಾಂಡ್' ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 400 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಿದೆ. 2019ರ ಭೂಕುಸಿತದ ನೆನಪಿನಲ್ಲಿ, ಪರಿಸರ ಪ್ರೇಮಿಗಳು ತಜ್ಞರ ಸಲಹೆ ಮತ್ತು ಭೂವೈಜ್ಞಾನಿಕ ಅಧ್ಯಯನವಿಲ್ಲದೆ ಕಾಮಗಾರಿ ಆರಂಭಿಸದಂತೆ ಆಗ್ರಹಿಸಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ಅಗಲೀಕರಣವು ಭೂಕುಸಿತದ ಅಪಾಯ ಹೆಚ್ಚಿಸುವ ಸಾಧ್ಯತೆಯಿದ್ದು, ಪರಿಸರಕ್ಕೆ ಹಾನಿಯಾಗದಂತೆ ಆಧುನಿಕ ತಂತ್ರಜ್ಞಾನ ಬಳಕೆಗೆ ಒತ್ತಾಯಿಸಿದ್ದಾರೆ.

ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ ಸಿದ್ಧತೆ; ತಜ್ಞರ ಸಲಹೆಗೆ ಪರಿಸರ ಪ್ರೇಮಿಗಳ ಆಗ್ರಹ
ಚಾರ್ಮಾಡಿ ಘಾಟ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Sep 07, 2026 | 10:16 PM

Share

ಮಂಗಳೂರು, ಸೆ.7: ಕರ್ನಾಟಕದ ಸ್ವಿಜರ್ಲ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚಾರ್ಮಾಡಿ ಘಾಟ್ ಇದೀಗ ಮತ್ತೆ ಸುದ್ದಿಯಲ್ಲಿದೆ. 2019ರಲ್ಲಿ ಸುರಿದ ಭಾರಿ ಮಳೆಗೆ ಅಕ್ಷರಶಃ ನಲುಗಿದ್ದ ಈ ಘಾಟ್ ರಸ್ತೆಯನ್ನು ಇದೀಗ ಮತ್ತಷ್ಟು ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ವರದಿ ಸಿದ್ಧವಾಗಿದ್ದು, ಕಾಮಗಾರಿ ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯಬೇಕು ಎಂಬ ಆಗ್ರಹ ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.

ಎತ್ತರದ ಗುಡ್ಡಗಳು, ಅಂಕುಡೊಂಕಿನ ರಸ್ತೆಗಳು, ಹಚ್ಚಹಸಿರಿನ ಗಿರಿಶ್ರೇಣಿಗಳು ಹಾಗೂ ಅಲ್ಲಲ್ಲಿ ಧುಮ್ಮಿಕ್ಕುವ ಜಲಪಾತಗಳ ನಡುವೆ ಸಾಗುವ ಚಾರ್ಮಾಡಿ ಘಾಟ್‌ ಕರ್ನಾಟಕದ ಪ್ರಮುಖ ಪ್ರವಾಸಿ ಹಾಗೂ ಸಂಪರ್ಕ ಮಾರ್ಗಗಳಲ್ಲೊಂದು. ವೆಲ್ಲಿಪುರಂನಿಂದ ಬಿ.ಸಿ.ರೋಡ್‌ವರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಚಾರ್ಮಾಡಿ ಘಾಟ್ ಪ್ರಮುಖ ಭಾಗವಾಗಿದೆ.

ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಸುಮಾರು 400 ಕೋಟಿ ರೂಪಾಯಿ ಅಂದಾಜು ವೆಚ್ಚದ ವರದಿ ಸಿದ್ಧಪಡಿಸಲಾಗಿದೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ಹಂತದಲ್ಲಿ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿಗೆ ಮುಂದಾಗುವ ಸಾಧ್ಯತೆ ಇದೆ.

2019ರ ಜಲಸ್ಫೋಟ ನೆನಪಿಸಿಕೊಂಡ ಪರಿಸರ ಪ್ರೇಮಿಗಳು

2019ರಲ್ಲಿ ಕೇವಲ ಮೂರು ಗಂಟೆಗಳ ಅಬ್ಬರದ ಮಳೆಗೆ ಚಾರ್ಮಾಡಿ ಘಾಟ್‌ನಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿತ್ತು. ರಸ್ತೆ ಹಾಗೂ ಗುಡ್ಡ ಪ್ರದೇಶಗಳು ಹಾನಿಗೊಳಗಾಗಿದ್ದವು. ಅಂದು ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಈ ಪ್ರದೇಶದ ಭೌಗೋಳಿಕ ಪರಿಸ್ಥಿತಿ ಹಾಗೂ ಗುಡ್ಡ ಕುಸಿತದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು.

ಇದೀಗ ಮತ್ತೆ ರಸ್ತೆ ಅಗಲೀಕರಣಕ್ಕೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಡಿಪಿಆರ್ ಸಿದ್ಧಪಡಿಸುವ ಮುನ್ನವೇ ಭೂವೈಜ್ಞಾನಿಕ ಹಾಗೂ ಪರಿಸರ ತಜ್ಞರ ಸಲಹೆ ಪಡೆಯಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

24 ಕಿ.ಮೀ. ವ್ಯಾಪ್ತಿಯಲ್ಲಿ ಚಾರ್ಮಾಡಿ ಘಾಟ್

ಚಾರ್ಮಾಡಿ ಘಾಟ್ ಪ್ರದೇಶವು ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹರಡಿದೆ. ಚಿಕ್ಕಮಗಳೂರು ವಿಭಾಗದಲ್ಲಿ ಸುಮಾರು 13 ಕಿಲೋಮೀಟರ್, ದಕ್ಷಿಣ ಕನ್ನಡ ವಿಭಾಗದಲ್ಲಿ ಸುಮಾರು 11.2 ಕಿಲೋಮೀಟರ್ ರಸ್ತೆ ಘಾಟ್ ಪ್ರದೇಶಕ್ಕೆ ಸೇರಿದೆ.

ದಕ್ಷಿಣ ಕನ್ನಡ ಭಾಗದ ಹೆರ್‌ಪಿನ್ ಕರ್ವ್‌ಗಳ ಅಭಿವೃದ್ಧಿಗೂ ಈಗಾಗಲೇ ಸುಮಾರು 343 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮೋದನೆ ದೊರೆತಿದೆ. ಗುಡ್ಡ ಹಾಗೂ ಪ್ರಪಾತದ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ವರದಿಯೂ ಕೇಂದ್ರಕ್ಕೆ ತಲುಪಿದೆ.

ರಸ್ತೆ ವಿಸ್ತರಣೆ ಜೊತೆಗೆ ಗುಡ್ಡ ಕುಸಿತದ ಆತಂಕ

ಚಾರ್ಮಾಡಿ ಘಾಟ್‌ನಂತಹ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ಅಗಲೀಕರಣ ಸುಲಭದ ಕೆಲಸವಲ್ಲ. ರಸ್ತೆ ವಿಸ್ತರಣೆಗೆ ಗುಡ್ಡಗಳನ್ನು ಕತ್ತರಿಸುವ ಸಂದರ್ಭದಲ್ಲಿ ಮೇಲ್ಭಾಗದಲ್ಲಿರುವ ಬೃಹತ್ ಬಂಡೆಗಳು ಹಾಗೂ ಮಣ್ಣಿನ ಪದರಗಳ ಸ್ಥಿರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿ ಗುಡ್ಡ ಕುಸಿತದ ಅಪಾಯ ಹೆಚ್ಚಾಗಬಹುದು ಎಂಬ ಆತಂಕ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳದ್ದು. ಹೀಗಾಗಿ ಕೇವಲ ರಸ್ತೆ ಅಗಲೀಕರಣದ ದೃಷ್ಟಿಯಿಂದ ಕಾಮಗಾರಿ ಕೈಗೊಳ್ಳದೆ, ಜಿಯೋಲಾಜಿಕಲ್ ಅಧ್ಯಯನ, ತಜ್ಞರ ಸಲಹೆ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ಮಳಲಿ ಲಕ್ಷ್ಮೀದೇವಮ್ಮ ದೇವಾಲಯದಲ್ಲಿ ಅರ್ಚಕರ ಜಟಾಪಟಿ: ಮುಜರಾಯಿ ನಿಯಮದಿಂದ ಗೊಂದಲ

ಕೇಂದ್ರದ ನಿರ್ಧಾರದತ್ತ ಚಿತ್ತ

ವೆಲ್ಲಿಪುರಂನಿಂದ ಬಿ.ಸಿ.ರೋಡ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಚಾರ್ಮಾಡಿ ಘಾಟ್ ಭಾಗ ಪ್ರಮುಖವಾಗಿ ಬಾಕಿ ಉಳಿದಿದೆ. ಇದೀಗ ಜಿಯೋಲಾಜಿಕಲ್ ಸರ್ವೆ ವರದಿ ಸಿದ್ಧವಾಗಿ ಕೇಂದ್ರಕ್ಕೆ ತಲುಪಿದೆ. ಮುಂದಿನ ಹಂತದಲ್ಲಿ ಕೇಂದ್ರ ಸರ್ಕಾರ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿಗೆ ಹಸಿರು ನಿಶಾನೆ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಆದರೆ ಕಾಮಗಾರಿ ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆದು, ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಗುಡ್ಡ ಕುಸಿತದ ಅಪಾಯವನ್ನು ತಗ್ಗಿಸುವ ರೀತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಸ್ತೆ ವಿಸ್ತರಣೆ ಮಾಡಬೇಕು ಎಂಬ ಕೂಗು ಬಲವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Mon, 7 September 26

Follow Us