ಬಿಜೆಪಿ ಪಾದಯಾತ್ರೆಗೆ ಕೌಂಟರ್: ರಾಜಕೀಯವಾಗಿಯೇ ತಿರುಗೇಟು ನೀಡಲು ಕಾಂಗ್ರೆಸ್ ಹೊಸ ತಂತ್ರ
ಮುಡಾ ಹಗರಣದಲ್ಲಿ ಸರಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತೊಡೆತಟ್ಟುತ್ತಿದೆ. ನೇರವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ ರೂಪಿಸುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಬಿಜೆಪಿಯ ತಂತ್ರಕ್ಕೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಬೇರೆಯದೇ ಅಸ್ತ್ರ ಬಳಸುತ್ತಿದೆ. ಅದೇನೆಂಬ ವಿವರ ಇಲ್ಲಿದೆ.
ಬೆಂಗಳೂರು, ಜುಲೈ 30: ಎರಡು ವಾರಗಳ ಕಾಲ ನಡೆದ ಅಧಿವೇಶನ ಸಂದರ್ಭದಲ್ಲಿ ಕೂಡ ವಾಲ್ಮೀಕಿ ಪ್ರಕರಣ ಮತ್ತು ಮುಡಾ ಹಗರಣವೇ ದೊಡ್ಡ ಸದ್ದು ಮಾಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದುವರೆದು ಬಿಜೆಪಿ ಶನಿವಾರದಿಂದ ಮೈಸೂರು ಚಲೋ ಪಾದಯಾತ್ರೆಗೆ ಮುಂದಾಗಿದ್ದು, ಕಾಂಗ್ರೆಸ್ ರಾಜಕೀಯವಾಗಿ ಉತ್ತರ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಮುಡಾ ವಿಚಾರ ಬಂದಾಗೆಲ್ಲ ದಾಖಲೆಗಳನ್ನು ಮುಂದಿಟ್ಟು, ತನ್ನಿಂದ ಯಾವುದೇ ತಪ್ಪಾಗಿಲ್ಲ ಎಂಬುದನ್ನು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಆದರೆ ದಾಖಲೆಗಳ ಹೊರತಾಗಿಯೂ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಕಾರಣಕ್ಕೋಸ್ಕರ ರಾಜಕೀಯವಾಗಿಯೇ ಕೌಂಟರ್ ಕೊಡಲು ಕಾಂಗ್ರೆಸ್ ಕೂಡ ಸಿದ್ಧತೆ ಆರಂಭಿಸಿದೆ
ಬಿಜೆಪಿ ಮುಡಾ ಮತ್ತು ವಾಲ್ಮೀಕಿ ಪ್ರಕರಣವನ್ನ ಮುನ್ನೆಲೆಗೆ ತರುತ್ತಿದ್ದಂತೆ ಇದೀಗ ಕಾಂಗ್ರೆಸ್ ಕೂಡ ಕೌಂಟರ್ ಕೊಡಲು ಸಿದ್ಧತೆ ಆರಂಭಿಸಿದೆ. ಹೀಗೆ ಬಿಟ್ಟರೆ ಪ್ರಕರಣ ಎಲ್ಲಿಂದ ಎಲ್ಲಿಗೋ ಹೋಗಿ ಸರ್ಕಾರದ ಬುಡಕ್ಕೆ ಬಂದರೂ ಆಶ್ಚರ್ಯ ಇಲ್ಲ ಎನ್ನುವ ಕಾರಣಕ್ಕೋಸ್ಕರ ರಾಜಕೀಯವಾಗಿಯೇ ಕೌಂಟರ್ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಎರಡು ರೀತಿಯ ಹೋರಾಟವನ್ನು ಬಿಜೆಪಿ ವಿರುದ್ಧ ಜನ ಅಭಿಪ್ರಾಯ ರೂಪಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಪಕ್ಷದ ವತಿಯಿಂದ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಬೃಹತ್ ಸಮಾವೇಶವನ್ನು ಮೈಸೂರಿನಲ್ಲಿ ಆಯೋಜನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇನ್ನೊಂದು ಕಡೆ ಅಹಿಂದ ಅಸ್ತ್ರವನ್ನ ಸಿಎಂ ಆಪ್ತರು ಬಳಸತೊಡಗಿದ್ದಾರೆ.
ಬಿಜೆಪಿ ವಿರುದ್ಧ ಪಾದಯಾತ್ರೆ
ಕೆಎನ್ ರಾಜಣ್ಣ ಹಾಗೂ ಸಿದ್ದರಾಮಯ್ಯ ಬೆನ್ನಿಗೆ ನಿಂತಿರೋ ಶೋಷಿತ ಸಮುದಾಯಗಳ ಒಕ್ಕೂಟ ಬಿಜೆಪಿ ವಿರುದ್ಧ ಪರ್ಯಾಯ ಪಾದಯಾತ್ರೆಗೆ ಚಿಂತನೆ ನಡೆಸಿದೆ. ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದು ಅಹಿಂದ ನಾಯಕನೊಬ್ಬನ ವಿರುದ್ಧ ಬಿಜೆಪಿ ಅನಗತ್ಯ ರಾಜಕೀಯ ದಾಳಿ ನಡೆಸಿದೆ ಎಂದು ಆರೋಪಿಸಲು ನಿರ್ಧರಿಸಿದ್ದಾರೆ. ಬಿಜೆಪಿಯ ಪಾದಯಾತ್ರೆಗೆ ನಾಗರೀಕ ಸಮಾಜಗಳಿಂದ, ಬೇರೆ ಬೇರೆ ಸೇವಾ ಸಂಸ್ಥೆಗಳಿಂದ ಸಮುದಾಯಗಳ ಒಕ್ಕೂಟದಿಂದಲೂ ಕೂಡ ಪಾದಯಾತ್ರೆ ಮಾಡುವ ಚಿಂತನೆ ಬಗ್ಗೆ ಚರ್ಚೆ ನಡೆದಿದೆ.
ಇದನ್ನೂ ಓದಿ: ಮೈಸೂರು ಪಾದಯಾತ್ರೆಗೂ ಮುನ್ನ ಬಿಜೆಪಿಯಿಂದ ರಾಜ್ಯಾದ್ಯಂತ ಬೆಳೆ ಹಾನಿ ಪರಿಶೀಲನೆ
ಸಿದ್ದರಾಮಯ್ಯನವರನ್ನು ದಾಖಲೆಗಳ ವಿಚಾರದಲ್ಲಿ ಕಾರ್ನರ್ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಂತ ರಾಜಕೀಯವಾಗಿಯೂ ಕೂಡ ಸಿದ್ದರಾಮಯ್ಯ ಅತ್ಯಂತ ಪ್ರಬಲರು. ಸಿದ್ದರಾಮಯ್ಯರನ್ನು ಯಾವುದೋ ಸಣ್ಣ ಪುಟ್ಟ ಭ್ರಷ್ಟಾಚಾರದ ವಿಚಾರದಲ್ಲಿ ಸಿಲುಕಿಸಿ ರಾಜೀನಾಮೆ ಪಡೆಯುವುದು ಬಿಜೆಪಿಗೆ ಅಷ್ಟು ಸುಲಭದ ತುತ್ತಲ್ಲ. ಆದರೆ ಮುಡಾ ಮತ್ತು ವಾಲ್ಮೀಕಿ ಎರಡೂ ಪ್ರಕರಣಗಳು ಏಕಕಾಲಕ್ಕೆ ಸಿಎಂ ಸಿದ್ದರಾಮಯ್ಯ ಸಣ್ಣ ಮಟ್ಟಿಗೆ ಮುಜುಗರ ಅನುಭವಿಸುವಂತೆ ಮಾಡಿದೆ. ಈ ಕಾರಣಕ್ಕೋಸ್ಕರ ಸಿದ್ದರಾಮಯ್ಯ ಆಪ್ತರು ಅಹಿಂದ ಅಸ್ತ್ರವನ್ನ ಗುರಾಣಿಯಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ಸ್ವತಃ ಸಿಎಂ ಹೇಳಿದ ಪ್ರಕಾರ ಅಹಿಂದ ನಾಯಕ ಎಂಬ ಕಾರಣಕೋಸ್ಕರ ಬಿಜೆಪಿ ಸಹಿಸುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದು ಇದೀಗ ಜಾತಿಯ ಕಿಡಿ ಹೊತ್ತುಕೊಳ್ಳುವಂತೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ