ಮಂಗಳೂರಿನಲ್ಲಿ ಚೈನ್ ಲಿಂಕ್ ದಂಧೆ; ವಿದ್ಯಾರ್ಥಿಗಳೇ ಟಾರ್ಗೆಟ್! ಜಾಬ್ ಜಾಲಕ್ಕೆ ಬಿದ್ದವರು ಕಳೆದುಕೊಂಡ ಹಣವೆಷ್ಟು ಗೊತ್ತಾ?
ಮಂಗಳೂರಿನಲ್ಲಿ ‘ವೆಕ್ಸಾನ್’ ಕಂಪನಿ ಉದ್ಯೋಗದ ಆಮಿಷವೊಡ್ಡಿ ನೂರಾರು ವಿದ್ಯಾರ್ಥಿಗಳಿಗೆ ವಂಚಿಸಿದೆ. ವೆಬ್ ಡಿಸೈನರ್, ಡೆವಲಪರ್ ಹುದ್ದೆಗಳ ನೆಪದಲ್ಲಿ, ತರಬೇತಿ ಹಾಗೂ ಹೂಡಿಕೆಗಾಗಿ ತಲಾ 2,500 ರಿಂದ 51,000 ರೂ.ವರೆಗೆ ವಸೂಲಿ ಮಾಡಿದೆ. ಹಣ ಕಳೆದುಕೊಂಡ ವಿದ್ಯಾರ್ಥಿಗಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಇನ್ನಷ್ಟು ಮಂದಿ ವಂಚನೆಗೆ ಒಳಗಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮಂಗಳೂರು, ಫೆಬ್ರವರಿ 27: ನಗರದಲ್ಲಿ (Mangalore) ಉದ್ಯೋಗಾವಕಾಶದ ಆಮಿಷವೊಡ್ಡಿ ನೂರಾರು ವಿದ್ಯಾರ್ಥಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ‘ವೆಕ್ಸಾನ್’ ಎಂಬ ಕಂಪನಿ, BMP ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೆಬ್ ಡಿಸೈನರ್ ಹಾಗೂ ವೆಬ್ ಡೆವಲಪರ್ ಹುದ್ದೆಗಳಿಗಾಗಿ ಜಾಹೀರಾತು ನೀಡುತ್ತಿದ್ದುದಾಗಿ ತಿಳಿದುಬಂದಿದೆ. ಕಂಪನಿಯ ಮೋಸದ ಜಾಲಕ್ಕೆ ಬಿದ್ದ ವಿದ್ಯಾರ್ಥಿಗಳು ಸಾವಿರಾರು ರೂ. ಕಳೆದುಕೊಂಡಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವೇಳೆ ಟಿವಿ9 ಕ್ಯಾಮರಾ ಕಂಡ ಕಂಪನಿಯ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ.
ಹಣ ಡಬಲ್ ಆಗುತ್ತೆ ಎಂದು ಆಮಿಷವೊಡ್ಡಿ ಮೋಸ!
ಮಂಗಳೂರು ನಗರದ ಅಳಕೆ–ಕುದ್ರೋಳಿ ಭಾಗದ ಬಿರ್ವಾ ಕಾಂಪ್ಲೆಕ್ಸ್ ಮೂರನೇ ಮಹಡಿಯಲ್ಲಿ ಕಂಪನಿಯ ಕಾರ್ಯಾಚರಣೆ ನಡೆಯುತ್ತಿತ್ತು ಎನ್ನಲಾಗಿದೆ. ಮೊದಲು ಮೂರು ದಿನಗಳ ತರಬೇತಿ ನೀಡುವುದಾಗಿ ಹೇಳಿ ಅಭ್ಯರ್ಥಿಗಳಿಂದ ತಲಾ 2,500 ರೂಪಾಯಿ ವಸೂಲಿ ಮಾಡಲಾಗಿತ್ತು. ತರಬೇತಿ ವೇಳೆ ಕೆಲವೇ ತಿಂಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು ಎಂದು ನಂಬಿಕೆ ಮೂಡಿಸಿ, ನಂತರ 11 ಸಾವಿರದಿಂದ 51 ಸಾವಿರ ರೂಪಾಯಿ ತನಕ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರೆಂದು ಆರೋಪಿಸಲಾಗಿದೆ.
ಮನೆಯಲ್ಲಿ ಸುಳ್ಳು ಹೇಳಿ ಎಂದು ಒತ್ತಾಯ
ಹಣವಿಲ್ಲದಿದ್ದರೆ ಮನೆಯಿಂದ ಸುಳ್ಳು ಹೇಳಿ ತರಲು, ಚಿನ್ನ ಅಡವಿಡಲು ಸಹ ಸಲಹೆ ನೀಡಲಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಮೊಬೈಲ್ ಚಾರ್ಜರ್, ಇಯರ್ಫೋನ್, ಸೀರೆ, ಕಾಸ್ಮೆಟಿಕ್ ವಸ್ತುಗಳನ್ನು ನೀಡಿ, ಮತ್ತಷ್ಟು ಜನರನ್ನು ಸೇರಿಸಿದರೆ ಕಮಿಷನ್ ಸಿಗುತ್ತದೆ ಎಂದು ಆಮಿಷ ಒಡ್ಡಲಾಗುತ್ತಿತ್ತಂತೆ. ಅದಲ್ಲದಂತೆ ಒಬ್ಬ ವಿದ್ಯಾರ್ಥಿ ಇನ್ನೋ ಮೂವರನ್ನು ಕರೆತಂದರೆ 11 ಸಾವಿರ ಕಮಿಷನ್ ನೀಡುವುದಾಗಿಯೂ ನಂಬಿಸಲಾಗಿತ್ತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಇದನ್ನೂ ಓದಿ ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೆ ಮದುವೆಯಾದ ಪತ್ನಿ; 23 ದಿನಗಳ ಬಳಿಕ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ!
ಹಣ ನೀಡಿದ ಬಳಿಕ ಉದ್ಯೋಗವೂ ಸಿಗದೆ, ಹೂಡಿಕೆ ಮಾಡಿದ ಮೊತ್ತವೂ ವಾಪಸು ಸಿಗದೆ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ, ಮಂಗಳೂರಿನ ಸ್ವಸ್ತಿಕ್ ಸ್ಕೂಲ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಯತ್ನಕ್ಕೂ ಮುಂದಾಗಿದ್ದು, ನಂತರ ಕಂಪನಿ ಹಣವನ್ನು ಹಿಂತಿರುಗಿಸಿದರೆಂದು ತಿಳಿದುಬಂದಿದೆ.
ವಂಚನೆಗೆ ಒಳಗಾದ ವಿದ್ಯಾರ್ಥಿಗಳು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮ್ಮಂತೆ ಇನ್ನಾರೂ ಮೋಸ ಹೋಗಬಾರದು, ಸಂಬಂಧಿತ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.