AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ರೂ. ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು!

ಮಂಗಳೂರು ಪೊಲೀಸರು ನೇಪಾಳದಿಂದ ಭಾರತವನ್ನು ಗುರಿಯಾಗಿಸಿಕೊಂಡಿದ್ದ ನೂರಾರು ಕೋಟಿ ರೂ.ಗಳ ಸೈಬರ್ ವಂಚನೆಯ ಬೃಹತ್ ಜಾಲವನ್ನು ಭೇದಿಸಿದ್ದಾರೆ. ಚೀನೀ ಹ್ಯಾಂಡ್ಲರ್‌ಗಳಿಂದ ನಿಯಂತ್ರಿಸಲ್ಪಡುತ್ತಿದ್ದ ಈ ಜಾಲವು ಒಂದೇ ಖಾತೆಯಿಂದ 167 ಕೋಟಿ ರೂ. ಹಣ ವರ್ಗಾವಣೆ ನಡೆಸಿತ್ತು. ನೇಪಾಳ ಪೊಲೀಸರ ಸಹಕಾರದೊಂದಿಗೆ 11 ಭಾರತೀಯ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಆನ್‌ಲೈನ್ ವಂಚನೆ ಜಾಲವನ್ನು ಭೇದಿಸಿದೆ.

ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ರೂ. ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು!
ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು!
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Feb 06, 2026 | 10:29 AM

Share

ಮಂಗಳೂರು, ಫೆಬ್ರುವರಿ 06: ನೇಪಾಳದಲ್ಲಿ ಕುಳಿತು ಭಾರತವನ್ನೇ ಗುರಿಯಾಗಿಸಿಕೊಂಡು ನೂರಾರು ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ಅತಿದೊಡ್ಡ ಸೈಬರ್ ಫ್ರಾಡ್ ನೆಟ್ವರ್ಕ್ ಅನ್ನು (Cyber Fraud Network) ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನೇಪಾಳ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ, ಅಲ್ಲಿಯೇ ತಂಗಿ ವಂಚನೆ ನಡೆಸುತ್ತಿದ್ದ 11 ಮಂದಿ ಭಾರತೀಯ ಮೂಲದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಂಚನೆಯ ಜಾಲವನ್ನು ನಿಯಂತ್ರಿಸುತ್ತಿದ್ದ ಚೀನಾದ ಹ್ಯಾಂಡ್ಲರ್​ಗಳು

ಮಂಗಳೂರಿನ ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯ ಜಾಡು ಹಿಡಿದು ಆರೋಪಿಗಳವರೆಗೆ ಪೊಲೀಸರು ತಲುಪಿದ್ದರು. ಬಂಧಿತ ತಂಡದಲ್ಲಿ ಭಾರತೀಯರ ಜೊತೆಗೆ ಚೀನಾ ಮೂಲದ ವಂಚಕರು ಸೇರಿದ್ದು, ಇಡೀ ಜಾಲವನ್ನು ಚೀನಾದ ಹ್ಯಾಂಡ್ಲರ್‌ಗಳು ನಿಯಂತ್ರಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳಿಂದ ಲ್ಯಾಪ್‌ಟಾಪ್‌ಗಳು, 21 ಮೊಬೈಲ್ ಫೋನ್‌ಗಳು, 20 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳು ಹಾಗೂ 20 ಬ್ಯಾಂಕ್ ಡೆಬಿಟ್–ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಒಂದೇ ಖಾತೆಯಿಂದ 167 ಕೋಟಿ ರೂ ಹಣ ವರ್ಗಾವಣೆ

ತನಿಖೆಯಲ್ಲಿ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ NCRP ಪೋರ್ಟಲ್‌ನಲ್ಲಿ 4580ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಒಂದು ಖಾತೆಯಲ್ಲೇ 167 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ತನಿಖೆ ವೇಳೆ ವಂಚಕರು ಬಳಸಿದ್ದ ಉಳಿದ 10 ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗಿದ್ದು, ಈ ಖಾತೆಗಳ ಮೂಲಕ ಸುಮಾರು 30.70 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ

ಹೇಗೆ ನಡೀತಿತ್ತು ವಂಚನೆ?

ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟರನ್ನು ನೇಮಿಸಿಕೊಂಡು, ದಿನಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗುತ್ತಿತ್ತು. ವಂಚನೆಯ ಹಣವನ್ನು ಯುಎಸ್ ಡಾಲರ್‌ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಜಾಲಕ್ಕೆ ಕಾಂಬೋಡಿಯಾದಲ್ಲಿರುವ ವಂಚನಾ ಬಿಪಿಓ ಸಹ ಬೆಂಬಲ ನೀಡುತ್ತಿದ್ದುದೂ ಪತ್ತೆಯಾಗಿದೆ.

ಬಂಧಿತ ಆರೋಪಿಗಳಿವರು!

ಗುಜರಾತಿ​​ನ ಬಾವಾ ನಗರ್ ಜಿಲ್ಲೆ ನಿವಾಸಿ ಮಕವನ್ ವಿಕ್ರಂ(25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್​​​ನ ಸಿಂಗಬುಮ್ ಜಿಲ್ಲೆಯ ಪುಪ್ಲ ಶಿವಕುಮಾರ್ ರಾವ್(32), ಉತ್ತರಪ್ರದೇಶದ ಮಾವೋ ಜಿಲ್ಲೆ ನಿವಾಸಿ ಗೌರವ್ ಪಾಂಡೆ(24), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆ ಹರ್ಷ್ ಮಿಸ್ರಾ(22), ಜಾರ್ಖಂಡ್​​ ಮೂಲದ ರಾಜೇಶ್ ಮಂಡನ್(30), ಲಖನೌ ಮೂಲದ ಮೊಹಮ್ಮದ್ ಆಕೀಬ್ ಅಲಿ(27), ಬಿಹಾರದ ನಲಂದಾ ಜಿಲ್ಲೆಯ ರಾಜೀವ್ ರಂಜನ್ ಕುಮಾರ್(30), ಜಾರ್ಖಂಡ್​​ ನಿವಾಸಿ ಮಿಥುನ್ ಕುಮಾರ್ ಮಂಗರಾಜ್(38), ರಾಜಸ್ಥಾನದ ಜೈಪುರದ ಓಂ ಪ್ರಕಾಶ್ ಯಾಧವ್ (37), ಝಾನ್ಸಿ ಮೂಲದ ನೌಶಾದ್ ಅಲಿ(34) ಸೇರಿ ಒಟ್ಟು 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Pruthviraj
Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More