AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ: ಪಾಲಿಕೆಯ ಜಾಣ ನಡೆ, ಜನರಿಗೆ ನಿತ್ಯ ನರಕ ದರ್ಶನ

smart city project: ಸ್ಮಾರ್ಟ್ ಸಿಟಿ ಅಂದರೆ ಸಾಕು ಹುಬ್ಬಳ್ಳಿ ಜನ ನಿದ್ದೆಗಣ್ಣಿನಲ್ಲಿ ಸಹ ಬೆಚ್ಚಿಬಿಳತ್ತಾರೆ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ‌ ಅವೈಜ್ಞಾನಿಕ ಪ್ಲಾನ್​ಗಳು, ಇಂಜಿನಿಯರಗಳ ಅರ್ಥವಿಲ್ಲ ಕಾಮಗಾರಿಗಳು, ಕೈಕಟ್ಟಿ ಕುಳಿತಿರುವ ಮಹಾನಗರ ಪಾಲಿಕೆ ಜಾಣ ನಡೆ. ಜನರಿಗೆ ನಿತ್ಯ ನರಕ ದರ್ಶನ ಮಾಡಿಸುತ್ತಿದೆ.

ವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ: ಪಾಲಿಕೆಯ ಜಾಣ ನಡೆ, ಜನರಿಗೆ ನಿತ್ಯ ನರಕ ದರ್ಶನ
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ
Follow us
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Nov 12, 2023 | 3:19 PM

ಹುಬ್ಬಳ್ಳಿ, ನವೆಂಬರ್​​ 12: ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿಗೆ ವಿಶ್ವದರ್ಜೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ (smart city project) ಆರಂಭವಾಗಿದೆ. ಈ‌ ಸ್ಮಾರ್ಟ್ ಸಿಟಿ ಯೋಜನೆ ಜನರಿಗೆ ಅನುಕೂಲ ಆಗಿದ್ದಕ್ಕಿಂತ ಅನಾನುಕೂಲಗಳನ್ನು ಸೃಷ್ಟಿ ಮಾಡುತ್ತಿರುವುದೇ ಹೆಚ್ಚು. ಎಷ್ಟೋ ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಜನರಿಗೆ ಜೀವ ಹಿಂಡುತ್ತಿವೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದೆ.

ಸ್ಮಾರ್ಟ್ ಸಿಟಿ ಅಂದರೆ ಸಾಕು ಹುಬ್ಬಳ್ಳಿ ಜನ ನಿದ್ದೆಗಣ್ಣಿನಲ್ಲಿ ಸಹ ಬೆಚ್ಚಿಬಿಳತ್ತಾರೆ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ‌ ಅವೈಜ್ಞಾನಿಕ ಪ್ಲಾನ್​ಗಳು, ಇಂಜಿನಿಯರಗಳ ಅರ್ಥವಿಲ್ಲ ಕಾಮಗಾರಿಗಳು, ಕೈಕಟ್ಟಿ ಕುಳಿತಿರುವ ಮಹಾನಗರ ಪಾಲಿಕೆ ಜಾಣ ನಡೆ. ಜನರಿಗೆ ನಿತ್ಯ ನರಕ ದರ್ಶನ ಮಾಡಿಸುತ್ತಿದೆ.

ಸ್ಮಾರ್ಟ್ ಯೋಜನೆಯಡಿ ಅಭಿವೃದ್ಧಿಗೊಳುತ್ತಿರುವ ನಗರದ ರಸ್ತೆಗಳ ವಾಹನ ಸವಾರಿಗೆ ಮರಣ ಶಾಸನಗಳಾಗಿವೆ. ಈ ಕಾಮಗಾರಿಗಳ ನೆಪ ಹೇಳಿ ಈಗ ನಗರ ಸಾರಿಗೆ ಸಹ ಜನರಿಗೆ ಸಂಕಷ್ಟ ನೀಡುತ್ತಿದೆ. ಸ್ಮಾರ್ಟ್ ಕಾಮಗಾರಿಗಳು ನಡೆಯುತ್ತಿರುವ ಏರಿಯಾಗಳಲ್ಲಿ ಸುಮಾರು 6 ತಿಂಗಳಿಂದ ಸಿಟಿ‌ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಶಾಲೆಯ ಮಕ್ಕಳು, ಉದ್ಯೋಗಸ್ಥರು, ವಿಕಲಾಂಗ ಚೇತನರು ಪರದಾಡುವಂತಾಗಿದೆ.

ಇದನ್ನೂ ಓದಿ: ವಿದ್ಯಾಕಾಶಿ ಧಾರವಾಡದಲ್ಲಿ ಈಗ ಹಾಸ್ಟೆಲ್ ಸಮಸ್ಯೆ: ಬಾಡಿಗೆ ಕಟ್ಟಡಗಳ ಮೊರೆಹೋದ ಜಿಲ್ಲಾಡಳಿತ

ನಗರದ ಅಶೋಕನಗರ, ಅಧ್ಯಾಪಕರ ನಗರ, ಉಪ ಕಾರಾಗೃಹ , ನೃತಪತುಂಗ ಬೆಟ್ಟ, ಪತ್ರಕರ್ತ ನಗರ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಏಕಕಾಲದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವೈಟ್ ಟಾಂಪಿಂಗ್ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಹಕಾರದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ.

ಎಲ್ಲಾ ರಸ್ತೆಗಳನ್ನು ಹಗೆದ ಕಾರಣ ಬಸ್ ಸಂಚಾರವನ್ನು ನಿಲ್ಲಿಸಲಾಗಿತ್ತು. ಸಾರ್ವಜನಿಕರು ಸಹ ಕಾಮಗಾರಿಗಳು ಎರಡು ಮೂರು ತಿಂಗಳಲ್ಲಿ ಮುಗಿಯುತ್ತೆ, ಮುಂದೆ ಸರಾಗವಾಗಿ ಸಂಚಾರ ಮಾಡಬಹುದು. ಒಳ್ಳೆಯ ರಸ್ತೆಗಳಾಗುತ್ತವೆ ಅಂತ ಆರಂಭದಲ್ಲಿ ಖುಷಿಪಟ್ಟಿದ್ದರು. ಆಗ ಖುಷಿಪಟ್ಟ ಜನ ಈಗ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕಾಮಗಾರಿಗಳು ಆರಂಭವಾಗಿ ವರ್ಷಗಳು ಕಳೆದರೂ ಇನ್ನೂ ಮುಗಿಯುತ್ತಿಲ್ಲ.

ಇತ್ತ ಬಸ್​ಗಳು ಸಹ ನಗರದೊಳಗಡೆ ಓಡಾಡುತ್ತಿಲ್ಲ. ಇದರಿಂದಾಗಿ ಶಾಲೆಯ ಮಕ್ಕಳು, ಉದ್ಯೋಗಸ್ಥರು, ವಿಕಲಾಂಗ ಚೇತನರು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಎರಡ್ಮೂರು ಕಿಲೋಮೀಟರ್ ನಡೆದು ಬಳಿಕ‌ ಮುಖ್ಯ ರಸ್ತೆಗಳಿ‌ಗೆ ಬಂದು ಬಸ್ ಹಿಡಿದು ತಮ್ಮ ನಿತ್ಯ‌ ಕಾರ್ಯಗಳಿಗೆ ಹೋಗಬೇಕಾಗಿದೆ. ರಸ್ತೆ ಕಾಮಗಾರಿಗಳೆಲ್ಲವೂ ಆಮೆಗತಿಯಲ್ಲಿ ನಡೆಯುತ್ತಿರುವ ಕಾರಣ, ಧೂಳು, ಮಣ್ಣು ಜನರ ಆರೋಗ್ಯ ಮೇಲೆ ಪರಿಣಾಮ ಬಿರುತ್ತಿದೆ.

ಇದನ್ನೂ ಓದಿ: ಭರದಿಂದ ಸಾಗಿದೆ ರೈಲ್ವೆ ಡಬ್ಲಿಂಗ್ ಕಾಮಗಾರಿ: ಈ ರೈಲುಗಳ ಮಾರ್ಗ ಬದಲಾವಣೆಯಾಗಿದೆ, ಗಮನಿಸಿ

ಮಳೆ ಬಂದಾಗಂತಲ್ಲೂ ರಸ್ತೆಯಲ್ಲಿ ವಾಹನ ಇರಲಿ ಜನರು ಸಹ ಓಡಾಡುವುದು ಕಷ್ಟ ಸಾಧ್ಯವಾಗಿದೆ. ಸ್ಮಾರ್ಟ್ ಸಿಟಿ ಕೆಲಸಗಳು ಜನರಿಗೆ ಇಷ್ಟು ಕಿರಿಕಿರಿ ಮಾಡುತ್ತಿದ್ದರೂ ಜನಪ್ರತಿದಿನಗಳು ಜಾಣ ನಿದ್ದೆಗೆ ಜಾರಿದ್ದಾರೆ.‌ ಇತ್ತ ಪಾಲಿಕೆ ಇದು ಸ್ಮಾರ್ಟ್ ಸಿಟಿ ಅಧಿಕಾರಿಗಳ ಕರ್ತವ್ಯ ಅಂತ ಜಾರಿಕೊಳ್ಳುತ್ತಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಜನರನ್ನು ಬಲಿಪಡೆಯೋದಂತೂ ಪಕ್ಕ. ಅಧಿಕಾರಿ ನಿರ್ಲಕ್ಷ್ಯ ಧೋರಣೆ ನೀತಿಯಿಂದ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕೊರತೆಯಿಂದ ನಿತ್ಯ ಧೂಳು, ಕಿರಿಕಿರಿಯಿಂದ ಜನ ನರಕಯಾತನೆ ಅನುಭವಿಸುವಂತಾಗಿರುವುದು ವಿಪರ್ಯಾಸದ ಸಂಗತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.