ಕೇಂದ್ರದ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆಗೆ ಡಿಸಿಎಂ ಡಿಕೆ ಶಿವಕುಮಾರ್ ವಿರೋಧ
ಒಂದು ದೇಶ ಒಂದು ಚುನಾವಣೆ ಕುರಿತು ಸಾಂವಿಧಾನಿಕ ತಿದ್ದುಪಡಿ ಮಸೂದೆ ವಿಚಾರವಾಗಿ ಸಂಸದ ಪಿ.ಪಿ.ಚೌಧರಿ ಅಧ್ಯಕ್ಷತೆಯಲ್ಲಿ ಇಂದು ಜಂಟಿ ಸಂಸದೀಯ ಸಮಿತಿ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಬೆಂಗಳೂರು, ಮೇ 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಪ್ರಸ್ತಾವನೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅಧಿಕಾರ ಕೇಂದ್ರಿತ, ರಾಜಕೀಯ ಪ್ರೇರಿತ ಯೋಜನೆ. ರಾಜ್ಯಗಳನ್ನ ದುರ್ಬಲಗೊಳಿಸಲು ಇದನ್ನ ತರಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೂ ಧಕ್ಕೆ ತರುವ ಅಪಾಯವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ.
ಮುಖ್ಯಾಂಶಗಳು
- ಒಂದು ದೇಶ ಒಂದು ಚುನಾವಣೆ ಕುರಿತು ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ವಿರೋಧ
- ಇದು ರಾಜಕೀಯ ಪ್ರೇರಿತ ಯೋಜನೆ ಎಂದ ಡಿಕೆ ಶಿವಕುಮಾರ್
- ಪ್ರಾಕ್ಟಿಕಲಿ ಇಂಪಾಸಿಬಲ್ ಎಂದ ಡಿಕೆ ಶಿವಕುಮಾರ್
ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆ: ಡಿಕೆ ಶಿವಕುಮಾರ್
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಂಸದ ಪಿ.ಪಿ.ಚೌಧರಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್, ಈ ಪ್ರಸ್ತಾವನೆಯಿಂದ ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಲಿದೆ ಎಂದಿರುವ ಡಿಕೆ ಶಿವಕುಮಾರ್, ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಇದನ್ನು ಹೆಣೆಯಲಾಗುತ್ತಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಡಿಸಿಎಂ ಆಗಿ ಸಾರಾಸಗಟಾಗಿ ತಿರಸ್ಕರಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಿಟ್ಟರೆ ಸಿಎಂ ಆಗುವ ಅರ್ಹತೆ ಇರುವುದು ಮಲ್ಲಿಕಾರ್ಜುನ ಖರ್ಗೆಗೆ ಮಾತ್ರ: ಬಸವರಾಜ ರಾಯರೆಡ್ಡಿ
‘ಒಂದು ದೇಶ, ಒಂದು ಚುನಾವಣೆ’ ವಿರೋಧಿಸಿ ಕರ್ನಾಟಕ ವಿಧಾನಸಭೆ ಈಗಾಗಲೇ ನಿರ್ಣಯ ಅಂಗೀಕರಿಸಿದೆ ಎಂದಿರುವ ಡಿಕೆ ಶಿವಕುಮಾರ್, ಸಭೆಯಲ್ಲಿ ಆ ನಿರ್ಣಯವನ್ನೂ ಓದಿ ಹೇಳಿದರು. ಈ ಪ್ರಸ್ತಾವನೆ ಬಗ್ಗೆ ಕರ್ನಾಟಕ ಸರ್ಕಾರದ ಸಹಮತವಿಲ್ಲ ಎಂದು ಅವರು ಪುನರುಚ್ಚರಿಸಿದರು.
ಪ್ರಾಕ್ಟಿಕಲಿ ಇಂಪಾಸಿಬಲ್
ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಅವಧಿಗೆ ಚುನಾವಣೆ ನಡೆಯುತ್ತದೆ ಎನ್ನುವುದನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್, ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಚುನಾವಣೆ ಆಗಿತ್ತು. ತಮಿಳುನಾಡು, ಕೇರಳದಲ್ಲಿ ಮೊನ್ನೆಯಷ್ಟೇ ಆಯಿತು. ಪಂಜಾಬ್, ತೆಲಂಗಾಣದಲ್ಲಿ ಬೇರೆ ಕಾಲದಲ್ಲಿ ಆಗಿದೆ. ಇವೆಲ್ಲವನ್ನೂ ಸಮಯಕರಿಸುವುದು ಹೇಗೆ? ಒಂದೊಮ್ಮೆ ಅವಿಶ್ವಾಸ, ಬಹುಮತದ ಕೊರತೆಯಿಂದ ಸರ್ಕಾರ ಅರ್ಧಕ್ಕೆ ಉರುಳಿದರೆ ಪರಿಹಾರ ಏನು? ಇದು ಕಾರ್ಯಸಾಧು ಯೋಜನೆಯಲ್ಲ, ಪ್ರಾಕ್ಟಿಕಲಿ ಇಂಪಾಸಿಬಲ್ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದಿಂದಲೂ ವಿರೋಧ
ಇನ್ನು ಒಂದು ದೇಶ ಒಂದು ಚುನಾವಣೆ ಕುರಿತು ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಆಮ್ ಆದ್ಮಿ ಪಕ್ಷದಿಂದ ಕೂಡ ವಿರೋಧ ವ್ಯಕ್ತವಾಗಿದೆ. ಸಭೆಯಲ್ಲಿ ಭಾಗಿಯಾಗಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರಸ್ತಾವನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Sat, 16 May 26




