ಬೆಂಗಳೂರು: “ಕೇಂದ್ರೀಕೃತ ಯುಪಿಐ ಜನಸಾಮಾನ್ಯರ ಕೈಗಳನ್ನು ಆರ್ಥಿಕವಾಗಿ ಬಲಗೊಳಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಹೊಸ ಉದ್ದಿಮೆಗಳು ಹುಟ್ಟಲು ಕಾರಣವಾಗಿದೆ” ಎಂದು ಬೆಂಗಳೂರು ಟೆಕ್ ಸಮ್ಮಿಟ್ನ ಫಿನ್ಟೆಕ್- ದ ನೆಕ್ಸ್ಟ್ ಯುಪಿಐ- ಹಣಕಾಸು ವಹಿವಾಟಿಗೆ ಮುಕ್ತ ವೇದಿಕೆ ಗೋಷ್ಠಿಯಲ್ಲಿ Bengaluru Tech Summit 2020 ವಿವಿಧ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಸವಾಲಾಗಿರುವ ಹಣಕಾಸಿನ ನಿರ್ವಹಣೆಗೆ ಕೇಂದ್ರೀಕೃತ ಪಾವತಿ ವ್ಯವಸ್ಥೆ ಸೂಕ್ತ ಪರಿಹಾರ. 25 ಟ್ರಿಲಿಯನ್ ವಾರ್ಷಿಕ ವಹಿವಾಟನ್ನು ದೇಶದ ಎಂಎಸ್ಎಂಇಗಳು ದಾಖಲಿಸಿವೆ. ಕೇವಲ ಶೇ.16 ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಮಾತ್ರ ಈಗಲೂ ಸಾಂಪ್ರದಾಯಿಕ ವಹಿವಾಟಿನಲ್ಲಿ ಆಸಕ್ತಿ ಹೊಂದಿವೆ. ಯುಪಿಐ ತಂತ್ರಜ್ಞಾನಾಧಾರಿತ ವ್ಯವಸ್ಥೆಗೆ ಸಾಮಾನ್ಯರೂ ವ್ಯವಹರಿಸಬಲ್ಲ ಪ್ರೊಟೋಕಾಲ್ ಅವಶ್ಯಕತೆಯಿದೆ.
ಭಾರತದ ಒಂದೊಂದು ರಾಜ್ಯವೂ ಒಂದೊಂದು ದೇಶದಷ್ಟೇ ವೈವಿಧ್ಯಮಯವಾಗಿದೆ. ಪ್ರತೀ 10 ಕಿಮೀಗೆ ಹವಾಮಾನ, ಜನರ ಮನಸ್ಥಿತಿ, ಸಂಪ್ರದಾಯಗಳು ಬದಲಾಗುತ್ತವೆ. ಯುಪಿಐ ಮೂಲಕ ಪ್ರತಿಯೊಂದು ಗ್ರಾಮವೂ ದೇಶದ ಆರ್ಥಿಕತೆಗೆ ಕೊಡುಗೆ ನೀಡಬಹುದು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆ ತರಬಹುದು ಎಂದು ತಜ್ಞರಾದ ಪ್ರಮೋದ್ ವರ್ಮಾ, ಅರುಂಧತಿ ಭಟ್ಟಾಚಾರ್ಯ, ಸ್ಮಿತಾ ಭಗತ್, ರಾಹುಲ್ ಮಲ್ಲಿಕ್ ವಿವರಿಸಿದರು.
ನವೋದ್ಯಮ ಮತ್ತು ಬ್ಯಾಂಕ್ಗಳ ನಡುವೆ ಹಣಕಾಸಿನ ವಹಿವಾಟು ಸರಾಗವಾಗಿ ನಡೆಯಲು ತಂತ್ರಜ್ಞಾನದ ಮೇಲೆ ನಂಬಿಕೆ ಇರಿಸಬೇಕು. ವಹಿವಾಟಿನಲ್ಲಿ ಉಂಟಾಗುವ ತೊಡಕು, ಖರ್ಚು ವೆಚ್ಚ, ಸಮಯದ ಕೊರತೆಗೆ ಕೇಂದ್ರೀಕೃತ ವಹಿವಾಟು ಪದ್ಧತಿ ಒಂದೇ ಚಿಟಿಕೆಯಲ್ಲಿ ಪರಿಹಾರ ಒದಗಿಸುತ್ತದೆ. ಸಾಮಾನ್ಯ ಪ್ರೋಟೋಕಾಲ್ ಬಳಕೆಯ ನಂತರ ಯುಪಿಐ ಇನ್ನಷ್ಟು ಜನಪ್ರಿಯಗೊಳ್ಳಲಿದೆ ಎಂದು ತಜ್ಞರು ವಿವರಿಸಿದರು.