ಸಂಪುಟ ವಿಸ್ತರಣೆ ಸರ್ಕಸ್: ಹೈಕಮಾಂಡ್ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ, ತಮ್ಮದೇ ಪಟ್ಟಿ ಸಿದ್ಧಪಡಿಸಿಕೊಂಡಿರೋ ರಾಹುಲ್
ಸಂಪುಟ ವಿಸ್ತರಣೆ ಸರ್ಕಸ್ ತೀವ್ರಗೊಂಡಿದ್ದು, ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಜುಲೈ 16) ದೆಹಲಿಯಲ್ಲಿ ವರಿಷ್ಠರ ಜೊತೆಗೆ ಮಹತ್ವದ ಚರ್ಚೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಗಾಂಧಿ, ವೇಣುಗೋಪಾಲ್, ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ಬಗ್ಗೆ ಮಾತುಕತೆ ನಡೆಸಿದ್ದು, ಈ ವೇಳೆ ರಾಜ್ಯ ನಾಯಕರು ನೀಡಿದ ಪಟ್ಟಿಯನ್ನು ರಾಹುಲ್ ಗಾಂಧಿ ಒಪ್ಪಿಲ್ಲ. ಹಾಗಾದ್ರೆ, ಸಭೆಯಲ್ಲಿ ಏನೇನಾಯ್ತು? ರಾಜ್ಯ ನಾಯಕರಿಗೆ ರಾಹುಲ್ ಕೊಟ್ಟ ಸಲಹೆ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮುಖ್ಯಾಂಶಗಳು
- ಸಂಪುಟ ವಿಸ್ತರಣೆ ಸಂಬಂಧ ನವದೆಹಲಿಯಲ್ಲಿ ನಾಯಕರ ಮಹತ್ವದ ಸಭೆ
- ಹೈಕಮಾಂಡ್ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ
- ರಾಜ್ಯ ನಾಯಕರ ಮಾತಿಗೆ ಒಪ್ಪದೇ ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿರುವ ರಾಹುಲ್ ಗಾಂಧಿ
ನವದೆಹಲಿ, (ಜುಲೈ 16): ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಿ 1 ತಿಂಗಳಿಗೂ ಹೆಚ್ಚು ದಿನಗಳಾಗಿದೆ. ಕೇವಲ 13 ಮಂದಿ ಸಚಿವರನ್ನ ಇಟ್ಕೊಂಡು ಡಿಕೆಶಿ ಸರ್ಕಾರ ನಡೆಸ್ತಿದ್ದಾರೆ. ಪ್ರಬಲ ಖಾತೆಗಳಿಗೆ ಇನ್ನೂ ಸಚಿವರನ್ನೇ ನೇಮಕ ಮಾಡಿಲ್ಲ. ಹೀಗಾಗಿಯೇ ಸಿಎಂ ಡಿಕೆ ಶಿವಕಿಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿದ್ದು, ಇಂದು (ಜುಲೈ 16) ರಾಹುಲ್ ಗಾಂಧಿ ಜೊತೆ ಮಹತ್ವದ ಚರ್ಚೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ 10 ಜನಪತ್ ನಿವಾಸದಲ್ಲೂ ಸಭೆ ನಡೆದಿದ್ದು, ಸಂಪುಟ ವಿಸ್ತರಣೆ (cabinet expansion) ಸಂಬಂಧ ಮೀಟಿಂಗ್ ಆಯ್ತು. ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೇವಾಲ, ಕೆಸಿ.ವೇಣುಗೋಪಾಲ್, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಸೋನಿಯಾ ಗಾಂಧಿ ಸಮ್ಮುಖದಲ್ಲಿ ಚರ್ಚೆ ನಡೀತು. ಆದ್ರೆ ಅಂದುಕೊಂಡಂತೆ ಯಾವುದೂ ಫೈನಲ್ ಆಗಲಿಲ್ಲ. ಯಾಕೆಂದ್ರೆ ಅಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಪಸ್ಥಿತಿ ಇತ್ತು.
ಹೈಕಮಾಂಡ್ಗೆ ಒಪ್ಪಿಗೆಯಾಗದ ರಾಜ್ಯ ನಾಯಕರ ಪಟ್ಟಿ
ಮೂಲಗಳ ಮಾಹಿತಿ ಪ್ರಕಾರ ರಾಜ್ಯ ನಾಯಕರ ಪಟ್ಟಿ ಹೈಕಮಾಂಡ್ಗೆ ಒಪ್ಪಿಗೆ ಆಗಿಲ್ಲ. ಹೊಸ ಮುಖಗಳಿಗೆ ಮನ್ನಣೆ ನೀಡಲು ಹೈಕಮಾಂಡ್ ಒಲವು ಇದೆ. ಆದ್ರೆ ಹಿರಿಯರಿಗೆ ಮಣೆ ಹಾಕುವಂತೆ ರಾಜ್ಯ ನಾಯಕರು ಒತ್ತಡ ಹಾಕಿದ್ದಾರೆ. ಹಿರಿಯ ನಾಯಕರ ಜತೆ ಕೆಲ ನೂತನ ಶಾಸಕರಿಗೆ ಅವಕಾಶ ಕೊಡಿ ಎಂದು ರಾಜ್ಯ ನಾಯಕರು ಒತ್ತಡ ಹಾಕಿದ್ದಾರೆ. ಆದ್ರೆ ರಾಜ್ಯ ನಾಯಕರ ಮಾತಿಗೆ ರಾಹುಲ್ ಗಾಂಧಿ ಒಪ್ಪಿಲ್ಲ.
ಇದನ್ನೂ ನೋಡಿ: ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ ಹರಿಪ್ರಸಾದ್
ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿರುವ ರಾಹುಲ್ ಗಾಂಧಿ
ಇನ್ನು ರಾಹುಲ್ ಗಾಂಧಿ ಅವರು ತಮ್ಮದೇ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಪರ್ಯಾಯ ಏಜೆನ್ಸಿ ಮೂಲಕ ಮಾಹಿತಿ ಪಡೆದಿರೋ ರಾಹುಲ್, ಆ ಮಾಹಿತಿಯನ್ನೇ ಆಧರಿಸಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಹೊಸ ಮುಖಗಳಿಗೆ ಮಣೆ ಹಾಕೋಕೆ ರಾಜ್ಯ ನಾಯಕರು ಹಿಂದೇಟು ಹಾಕಿದ್ದಾರೆ. ಹೀಗಾಗಿ ರಾಹುಲ್ ಜೊತೆಗಿನ ಸಭೆ ಕೇವಲ 10 ನಿಮಿಷಕ್ಕೆ ಅಂತ್ಯ ಆಗಿದೆ. ಡಿಕೆ, ಸಿದ್ದು, ಬಿ.ಕೆ.ಹರಿಪ್ರಸಾದ್ ಜೊತೆ ಪ್ರತ್ಯೇಕ ಚರ್ಚೆ ಮಾಡಿರೋ ರಾಹುಲ್ ಗಾಂಧಿ, ಮುಂದಿನ ವಾರ ಮತ್ತೆ ಮಾತುಕತೆ ಮಾಡೋಣ ಅಂದಿದ್ದಾರೆ.
ಇನ್ನೊಂದೆಡೆ ಮಂತ್ರಿ ಸ್ಥಾನ ಪಡೆದುಕೊಳ್ಳಲು ಅನೇಕ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಇಪ್ಪತ್ತು ಸ್ಥಾನಗಳ ಪೈಕಿ ಐವತ್ತು ಮಂದಿ ಲಾಬಿ ನಡೆಸುತ್ತಿದ್ದಾರೆ. ಆದರೆ ಎಷ್ಟು ಜನರಿಗೆ ಈ ಬಾರಿ ಅವಕಾಶ ಸಿಗುತ್ತದೆ? ಯಾರಿಗೆಲ್ಲಾ ಮಂತ್ರಿ ಸ್ಥಾನ? ಸಿಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಇವತ್ತು ರಾತ್ರಿಯೊಳಗೆ ಹೈಕಮಾಂಡ್ನಿಂದ ಶುಭ ಸುದ್ದಿ ಬರಬಹುದು ಅಂತಾ ಎಲ್ಲರೂ ನಿರೀಕ್ಷೆ ಇಟ್ಕೊಂಡಿದ್ರು. ಆದ್ರೆ ಮತ್ತೆ ವಿಳಂಬ ಆಗ್ತಿದೆ. ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ, ಶುಭ ಘಳಿಗೆ, ಶುಭ ಸಮಯ, ಶುಭ ಸಂದರ್ಭ ಕೂಡಿ ಬರುತ್ತಿಲ್ಲ. ಅದ್ಯಾವ ರಾಹು ಕೇತು ವಕ್ಕರಿಸಿಕೊಂಡಿದ್ಯೋ? ಏನೋ? ಸಂಪುಟ ವಿಸ್ತರಣೆಗೆ ಹಿಡಿದ ಗ್ರಹಣ ಮಾತ್ರ ಬಿಡುತ್ತಿಲ್ಲ.




