AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಯುವತಿ ಪತ್ತೆ: ನಿಜವಾಯ್ತು ಮಲೆ‌ಕುಡಿಯ ಜನಾಂಗದ ದೈವವಾಣಿ

ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿ ಇಂದು (ಏಪ್ರಿಲ್ 05) ನಗುಮೊಗದಲ್ಲೇ ಕಾಡಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲಿಯೇ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ತಾನು ಹೇಗೆ ದಟ್ಟಾರಣ್ಯದಲ್ಲಿ ಬದುಕುಳಿದೆ ಎಂದು ವಿವರಿಸಿದ್ದಾರೆ. ಅಲ್ಲದೇ ಮಲೆ‌ಕುಡಿಯ ಜನಾಂಗದ ದೈವವಾಣಿ ನಿಜವಾದಂತಾಗಿದೆ.

ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಯುವತಿ ಪತ್ತೆ: ನಿಜವಾಯ್ತು ಮಲೆ‌ಕುಡಿಯ ಜನಾಂಗದ ದೈವವಾಣಿ
Saranya
Gopal AS
| Edited By: |

Updated on:Apr 05, 2026 | 9:19 PM

Share

ಕೊಡಗು, (ಏಪ್ರಿಲ್ 05): ಕೊಡಗಿನ ಅತಿ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಶರಣ್ಯ ಕಳೆದ ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್ ಮಾಡುವಾಗ ದಾರಿ ತಪ್ಪಿ ಅರಣ್ಯದಲ್ಲಿ ನಾಪತ್ತೆಯಾಗಿದ್ದರು. ಇವರಿಗಾಗಿ ಎಎನ್‌ಎಫ್ (ANF), ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂಸೇವಕರು ತಂಡೋಪತಂಡವಾಗಿ ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದರು. ದಟ್ಟ ಮಂಜು ಮತ್ತು ಮಳೆಯ ನಡುವೆಯೂ ಕಾರ್ಯಾಚರಣೆ ತಂಡಗಳು ಹಗಲಿರುಳು ಶ್ರಮಿಸಿದ್ದವು. ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಮತ್ತು ಅರಣ್ಯದ ಹಾದಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಡಿಯ ಜನಾಂಗದ ಯುವಕರು ಇಂದು ಅರಣ್ಯದ ಆಳ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ಯುವತಿ ಆರೋಗ್ಯವಾಗಿದ್ದು, ಸದ್ಯ ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಅರಣ್ಯದಿಂದ ಹೊರಕ್ಕೆ ಕರೆತಂದಿದ್ದಾರೆ. ಈ ಮೂಲಕ ಕೊಡಗಿನ ದಟ್ಟ ಅರಣ್ಯದಲ್ಲಿ ನಡೆದಿದ್ದ ಬೃಹತ್ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

ನಿಜವಾಯ್ತು ಮಲೆ‌ಕುಡಿಯ ಜನಾಂಗದ ದೈವವಾಣಿ

ಒಂದೆಡೆ ನಿರಂತರ ಕಾರ್ಯಚರಣೆ ನಡೆಸಿದರೂ ಶರಣ್ಯ ಸಿಳಿವು ಸಿಕ್ಕಿರಲಿಲ್ಲ. ಕೊನೆಗೆ ಮಲೆ‌ಕುಡಿಯ ಜನಾಂಗದ ಸಹ ದೈವದ ನಿನ್ನೆ(ಏಪ್ರಿಲ್ 04) ಮೊರೆ ಹೋಗಿದ್ದು, ಶರಣ್ಯ ಬಳಲಿ ಒಂದೆಡೆ ಆಶ್ರಯ ಪಡೆದಿದ್ದಾಳೆ. ಸುರಕ್ಷಿತವಾಗಿ ಸಿಗಲಿದ್ದಾಳೆ‌ ಮಲೆ ತಚ್ಚನ್ ದೈವ ನುಡಿದಿತ್ತು. ದೈವವಾಣಿಯಂತೆ ಶರಣ್ಯ 24 ಗಂಟೆಯಲ್ಲೇ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಇದರೊಂದಿಗೆ ಮಲೆ‌ಕುಡಿಯ ಜನಾಂಗದ ದೈವವಾಣಿ ನಿಜವಾಗಿದ್ದು, ದೈವದ ಮೇಲಿನ ಭಕ್ತ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಟ್ರೆಕ್ಕಿಂಗ್​ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

4 ದಿನಗಳ ಕಾಲ ಕಾಡಲ್ಲಿ ಬದುಕುಳಿದಿದ್ದೇಗೆ?

ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ’ ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.

ರಕ್ಷಣಾ ಕಾರ್ಯಾಚರಣೆಯ ಯಶಸ್ಸು

ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು,” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಸಂತಸಗೊಂಡಿದ್ದು, ಶಾರಣ್ಯ ಪತ್ತೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದ ಶರಣ್ಯ

ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು.

Published On - 9:16 pm, Sun, 5 April 26

Follow Us