295 ದಿನಗಳ ಹೋರಾಟದ ನಡುವೆ ಬಲ್ಡೋಟಾ ಪರ ಭೂಸಂತ್ರಸ್ತರ ರ್ಯಾಲಿ: “ಕಾರ್ಖಾನೆ ಮಾಡಿ, ಇಲ್ಲವೇ ಸರ್ಕಾರಿ ಕೆಲಸ ಕೊಡಿ”
ಕೊಪ್ಪಳದ ಬಸಾಪೂರ ಬಳಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ವಿಸ್ತರಣೆ ವಿಚಾರ ತೀವ್ರ ಸ್ವರೂಪ ಪಡೆದಿದೆ. ಪರಿಸರ ಮಾಲಿನ್ಯದ ಭೀತಿಯಿಂದ "ಜಿಲ್ಲಾ ಬಚಾವೋ ಆಂದೋಲನ ಸಮಿತಿ" 295 ದಿನಗಳಿಂದ ಹೋರಾಟ ನಡೆಸುತ್ತಿದೆ. ಇತ್ತ, 20 ವರ್ಷಗಳ ಹಿಂದೆ ಭೂಮಿ ನೀಡಿದ ರೈತರು ತಕ್ಷಣ ಕಾರ್ಖಾನೆ ಸ್ಥಾಪಿಸುವಂತೆ ಅಥವಾ ಉದ್ಯೋಗ ನೀಡುವಂತೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕಾರ್ಖಾನೆ ಸಿಬ್ಬಂದಿ ಸಹ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ.

ಕೊಪ್ಪಳ, ಆ.25: ಜಿಲ್ಲೆಯ ಬಸಾಪೂರ ಬಳಿ ವಿಸ್ತರಣೆಯಾಗುತ್ತಿರುವ ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ (Baldota Steel and Power Limited) ಕಾರ್ಖಾನೆಯ ವಿಚಾರವೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದು ಕಡೆ ಕಾರ್ಖಾನೆ ಸ್ಥಾಪನೆಯನ್ನು ವಿರೋಧಿಸಿ ‘ಜಿಲ್ಲಾ ಬಚಾವೋ ಆಂದೋಲನ ಸಮಿತಿ’ ಕಳೆದ 295 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾರ್ಖಾನೆಯ ಪರವಾಗಿ ಭೂಮಿ ನೀಡಿದ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ಕಾರ್ಖಾನೆಗೆ ಭೂಮಿ ನೀಡಿದ 300ಕ್ಕೂ ಹೆಚ್ಚು ರೈತರು, “ತಕ್ಷಣವೇ ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ನಮಗೆ ಸರ್ಕಾರಿ ಉದ್ಯೋಗ ನೀಡಿ” ಎಂದು ಆಗ್ರಹಿಸಿ ಕೊಪ್ಪಳ ತಾಲೂಕು ಕ್ರೀಡಾಂಗಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಪರಿಸರ ಮಾಲಿನ್ಯದ ಕಾರಣ ನೀಡಿ ಕಾರ್ಖಾನೆಯನ್ನು ವಿರೋಧಿಸುತ್ತಿದ್ದು, ಇತ್ತೀಚೆಗೆ ಕಾರ್ಖಾನೆಯ ಆವರಣದಲ್ಲಿದ್ದ ಕೆರೆಗೆ ಸಾರ್ವಜನಿಕ ಪ್ರವೇಶಕ್ಕಾಗಿ ಕಂಪೌಂಡ್ ಗೋಡೆಯನ್ನು ದ್ವಂಸಗೊಳಿಸಿ ಒಳಗಡೆ ನುಗ್ಗಿದ್ದರು. ಇದೀಗ ಭೂಮಿ ಕಳೆದುಕೊಂಡ ರೈತರು ಕಾರ್ಖಾನೆ ಪರವಾಗಿ ನಿಂತು ಹೋರಾಟ ಆರಂಭಿಸಿದ್ದಾರೆ.
ಹೋರಾಟದ ಇತಿಹಾಸದಲ್ಲೇ ಮೊದಲ ಬಾರಿಗೆ ಬಲ್ಡೋಟಾ ಕಂಪನಿಯ ಸಿಬ್ಬಂದಿ ಹಾಗೂ ಅಧಿಕಾರಿ ಪ್ರಭುದೇವಪ್ಪ ಅವರು ಬಹಿರಂಗವಾಗಿ ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಅಥವಾ ಮುಖ್ಯಮಂತ್ರಿಗಳು ಮೌಖಿಕವಾಗಿ ಅನುಮತಿ ನೀಡಿದರೂ ನಾಳೆಯಿಂದಲೇ ಕಾರ್ಖಾನೆ ನಿರ್ಮಾಣ ಕೆಲಸ ಪ್ರಾರಂಭಿಸಲು ಕಂಪನಿ ಉತ್ಸುಕವಾಗಿದೆ ಎಂದು ಅಧಿಕಾರಿ ಪ್ರಭುದೇವಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ: ದಿನಕ್ಕೆ 115 ಟನ್ ಗೂಡು ಮಾರಾಟ ಸಾಮರ್ಥ್ಯದ ಏಷ್ಯಾದ ಬೃಹತ್ ಮಾರುಕಟ್ಟೆ ಉದ್ಘಾಟನೆಗೆ ಸಜ್ಜು
ಕಾರ್ಖಾನೆ ಆವರಣದಲ್ಲಿರುವ ಸಾರ್ವಜನಿಕ ಕೆರೆಯನ್ನು ಮುಕ್ತಗೊಳಿಸುವ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟ ಉತ್ತರ ನೀಡದೆ ಅಧಿಕಾರಿ ಜಾರಿಕೊಂಡಿದ್ದು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ಭೂಮಿ ನೀಡಿ ದಶಕಗಳಿಂದ ಕಾಯುತ್ತಿರುವ ರೈತರ ಭವಿಷ್ಯದ ಪ್ರಶ್ನೆಯಾದರೆ, ಮತ್ತೊಂದೆಡೆ ಈಗಾಗಲೇ ಹಲವು ಕಾರ್ಖಾನೆಗಳ ಮಾಲಿನ್ಯದಿಂದ ನಲುಗಿರುವ ಕೊಪ್ಪಳದ ಜನತೆಗೆ ಮತ್ತೊಂದು ಬೃಹತ್ ಸ್ಟೀಲ್ ಕಾರ್ಖಾನೆ ಬಂದರೆ ಪರಿಸರ ಹಾಗೂ ಜನರ ಆರೋಗ್ಯದ ಗತಿಯೇನು ಎಂಬ ಆತಂಕ ಎದುರಾಗಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಕಂಪನಿ ಸಿಬ್ಬಂದಿ ದಿಢೀರನೆ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




