ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿ: ಮೂವರು ದಾರುಣ ಸಾವು
ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಬಳಿ ನಿಂತಿದ್ದ ಟಾಟಾ ಏಸ್ಗೆ ಬೈಕ್ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪಳಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಮೃತರು ನರಗುಂದ ಮೂಲದವರು ಎನ್ನಲಾಗಿದೆ. ಇತ್ತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ದಾರುಣ ಅಂತ್ಯ ಕಂಡಿದ್ದಾನೆ.

ಕೊಪ್ಪಳ/ಬೆಂಗಳೂರು, ಆಗಸ್ಟ್ 26: ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿಯಾದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ನರಗುಂದ ಮೂಲದವರು ಎನ್ನಲಾಗಿದ್ದು, ಕೊಪ್ಪಳಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಿಟ್ & ರನ್ಗೆ ಬೈಕ್ ಸವಾರ ಬಲಿ
ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರನೋರ್ವ ಬಲಿಯಾಗಿದ್ದಾನೆ. ಬಿಹಾರ ಮೂಲದ ಬಾಬುಜೀ ಮಿಯಾ(45) ಮೃತ ದುರ್ದೈವಿಯಾಗಿದ್ದು, ಉತ್ತರಹಳ್ಳಿಯಿಂದ ಸರ್ಜಾಪುರ ಕಡೆ ಹೋಗ್ತಿದ್ದಾಗ ಬೈಕ್ಗೆ ಟ್ರಕ್ ಡಿಕ್ಕಿಯಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದ ಆತನ ಮೇಲೆ ಟ್ರಕ್ ಹರಿದಿದೆ ಎನ್ನಲಾಗಿದೆ. ಅಪಘಾತದ ಬಳಿಕ ಸ್ಥಳದಿಂದ ಟ್ರಕ್ ಸಹಿತ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ಕೇಸ್: 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಯಾರ್ಯಾರ ಖಾತೆಗೆ ಎಷ್ಟೆಷ್ಟು?
ರೈಲು ಡಿಕ್ಕಿಯಾಗಿ ಕುರಿಗಾಹಿ ಸಾವು
ಹಳಿ ಮೇಲಿದ್ದ ಮೇಕೆಗಳನ್ನು ರಕ್ಷಿಸಲು ಹೋದ ಕುರಿಗಾಹಿಯೋರ್ವ ರೈಲು ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಬಳಿ ನಡೆದಿದೆ. ವೀರಾಪುರ ನಿವಾಸಿ ಅಶೋಕ್ (60) ಮೃತ ದುರ್ದೈವಿಯಾಗಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




