3 ಪೋಸ್ಟ್‌ಗೆ 7 ಮಂದಿ ಭರ್ತಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೇಮಕಾತಿಯಲ್ಲಿ ಗೋಲ್‌ಮಾಲ್, ಆಡಿಟ್‌ನಲ್ಲಿ ಬಯಲು

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮಗಳ ಸರಣಿ ಒಂದರ ಮೇಲೊಂದರಂತೆ ಬಯಲಾಗುತ್ತಿದ್ದು, ಪ್ರಾಧಿಕಾರ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ನಿವೇಶನ ಹಂಚಿಕೆ ಹಗರಣದ ಕಾವು ಆರುವ ಮುನ್ನವೇ, ಸರ್ಕಾರದ ಅನುಮೋದನೆ ಪಡೆಯದೆ ಹಾಗೂ ಯಾವುದೇ ಅಧಿಕೃತ ಟೆಂಡರ್ ಪ್ರಕ್ರಿಯೆ ನಡೆಸದೆ ಬೇಕಾಬಿಟ್ಟಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವ ಗಂಭೀರ ಗೋಲ್‌ಮಾಲ್ ಪ್ರಕರಣ ಇದೀಗ ಲೆಕ್ಕಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿದೆ.

3 ಪೋಸ್ಟ್‌ಗೆ 7 ಮಂದಿ ಭರ್ತಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೇಮಕಾತಿಯಲ್ಲಿ ಗೋಲ್‌ಮಾಲ್, ಆಡಿಟ್‌ನಲ್ಲಿ ಬಯಲು
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ
Image Credit source: tv9 kannada
Edited By:

Updated on: Sep 03, 2026 | 8:15 PM

ಕೊಪ್ಪಳ, ಸೆಪ್ಟೆಂಬರ್​ 03: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಗೋಲ್‌ಮಾಲ್ ಆರೋಪ ಕೇಳಿಬಂದಿದೆ. ನಿವೇಶನ ಹಂಚಿಕೆ ವಿಚಾರದಲ್ಲಿ ಕೋಟ್ಯಂತರ ರೂ ಅವ್ಯವಹಾರದ ಆರೋಪದಿಂದ ಸುದ್ದಿಯಲ್ಲಿದ್ದ ಪ್ರಾಧಿಕಾರ ಇದೀಗ ಟೆಂಡರ್ ಕರೆಯದೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡಿರುವ ಆರೋಪದಿಂದ ಮತ್ತೆ ಚರ್ಚೆಗೆ ಬಂದಿದೆ. 2025-26ನೇ ಸಾಲಿನಲ್ಲಿ ಸರ್ಕಾರದ ಅನುಮೋದನೆ ಪಡೆಯದೆ ಹೆಚ್ಚುವರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ ಎನ್ನಲಾಗಿದ್ದು, ಏಳು ಮಂದಿ ಸಿಬ್ಬಂದಿಗೆ ಬರೋಬ್ಬರಿ 27 ಲಕ್ಷಕ್ಕೂ ಅಧಿಕ ಹಣ ಪಾವತಿಸಿರುವುದು ಲೆಕ್ಕಪತ್ರ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಕೋಟ್ಯಂತರ ರೂ ಅವ್ಯವಹಾರದ ಆರೋಪ, ಮತ್ತೊಂದೆಡೆ ಇದೀಗ ಹೊರಗುತ್ತಿಗೆ ನೌಕರರ ನೇಮಕದಲ್ಲೂ ನಿಯಮ ಉಲ್ಲಂಘನೆಯ ಆರೋಪ ಬಹಿರಂಗವಾಗಿದೆ. 2025-26ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸದೆ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎನ್ನುವುದು ಲೆಕ್ಕಪತ್ರ ಪರಿಶೋಧನೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ‘ಟೆಂಪಲ್ ರನ್’ ಮಾಡುತ್ತಿದ್ದ ಪ್ರಮುಖ ರೂವಾರಿ ಸೇರಿ ಮೂವರ ಬಂಧನ

ಸರ್ಕಾರದ ಅನುಮೋದನೆ ಪಡೆಯದೆ ಹೆಚ್ಚುವರಿಯಾಗಿ ನಾಲ್ಕು ಹುದ್ದೆಗಳಿಗೆ ನೇಮಕ ಮಾಡಿಕೊಂಡಿರುವ ಆರೋಪವೂ ಕೇಳಿಬಂದಿದೆ. ಒಟ್ಟು ಏಳು ಮಂದಿ ಹೊರಗುತ್ತಿಗೆ ಸಿಬ್ಬಂದಿ ನೇಮಕವಾಗಿದೆ. ಇವರಲ್ಲಿ, ನಾಲ್ಕು ಗ್ರೂಪ್-ಡಿ ಹುದ್ದೆ. ಒಬ್ಬ ಡ್ರೈವರ್. ಒಬ್ಬ ಕಂಪ್ಯೂಟರ್ ಆಪರೇಟರ್ ಮತ್ತೊಬ್ಬ ಕ್ಲೀನರ್. ಹೀಗೆ ಒಟ್ಟು ಏಳು ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಈ ಏಳು ಹುದ್ದೆಗಳ ಪೈಕಿ ಮೂರು ಹುದ್ದೆಗಳಿಗೆ ಮಾತ್ರ ಮಂಜೂರಾತಿ ಇತ್ತು ಎಂಬುದು ಪರಿಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ.

ಹೆಚ್ಚುವರಿ ಸಿಬ್ಬಂದಿಗೆ 19 ಲಕ್ಷ ರೂ ಪಾವತಿ; ವಸೂಲಾತಿಗೆ ಶಿಫಾರಸು

ಮಂಜೂರಾದ ಮೂರು ಹುದ್ದೆಗಳ ಬದಲಿಗೆ ಒಟ್ಟು ಏಳು ಹುದ್ದೆಗಳಿಗೆ ನೇಮಕ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಒಟ್ಟು 27 ಲಕ್ಷ ರೂ ಪಾವತಿಯಾಗಿದ್ದು, ಇದರಲ್ಲಿ 19 ಲಕ್ಷ ರೂ ಹೆಚ್ಚುವರಿ ಹುದ್ದೆಗೆ ಪಾವತಿಯಾಗಿದ್ದು, ಅದನ್ನು ವಸೂಲಿ ಮಾಡಲಾಗಿದೆ ಎಂದು ಲೆಕ್ಕಪತ್ರ ಪರಿಶೋಧನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸೈಟ್ ಹಗರಣದ ಬೆನ್ನಲ್ಲೇ ಮತ್ತೊಂದು ತಲೆನೋವು; ಸಚಿವರ ಎಚ್ಚರಿಕೆ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಕೆಲ ದಿನಗಳಿಂದಲೂ ಸಾಕಷ್ಟು ಚರ್ಚೆಯಲ್ಲಿದೆ. ನಿವೇಶನ ನೀಡುವ ವಿಚಾರದಲ್ಲಿ ಸುಮಾರು 8 ಕೋಟಿ 89 ಲಕ್ಷ ರೂ ಅವ್ಯವಹಾರವಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್, ಅವರ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಬಂಧನವಾಗಿರುವುದು ಸುದ್ದಿಯಾಗಿತ್ತು. ಇನ್ನು ಪ್ರಕರಣದಲ್ಲಿ ಮಾಜಿ ಆಯುಕ್ತ ಯೋಗಾನಂದ ಅವರಿಗೂ ಪೊಲೀಸರು ಬಲೆ ಬೀಸಿದ್ದಾರೆ.

ನಿವೇಶನ ಹಂಚಿಕೆ ವಿಚಾರದ ಬಳಿಕ ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲೂ ನಿಯಮ ಉಲ್ಲಂಘನೆಯ ಆರೋಪ ಬೆಳಕಿಗೆ ಬಂದಿದೆ. ಲೆಕ್ಕಪತ್ರ ಪರಿಶೋಧನೆಯಲ್ಲಿ ಆಕ್ಷೇಪ ವ್ಯಕ್ತವಾಗಿರುವ ಈ ಪ್ರಕರಣದಲ್ಲಿ, ಹೆಚ್ಚುವರಿ ಸಿಬ್ಬಂದಿಗೆ ಪಾವತಿಸಿರುವ 19 ಲಕ್ಷಕ್ಕೂ ಅಧಿಕ ರೂ ಹಣವನ್ನು ವಸೂಲಾತಿಗೆ ಒಳಪಡಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ  ಶಿವರಾಜ್ ತಂಗಡಗಿ, ‘ಅಗತ್ಯ ಬಿದ್ದರೆ ಪ್ರಕರಣ ತನಿಖಾ ಸಂಸ್ಥೆಗೆ ಕೊಡಲು ಚಿಂತನೆ ಮಾಡುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಕುಡಾ 8.43 ಕೋಟಿ ಹಗರಣ: ಕಿಂಗ್‌ಪಿನ್ ಸಹೋದರನ ಬಂಧನ; ಆರೋಪಿ ಸಿಕ್ಕಿದ್ದೇ ರೋಚಕ!

ಒಟ್ಟಿನಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಗೋಲ್‌ಮಾಲ್ ಆರೋಪಗಳ ಸರಣಿ ಮುಂದುವರೆದಿದೆ. ನಿವೇಶನ ಹಂಚಿಕೆ ವಿಚಾರದ ಬಳಿಕ ಇದೀಗ ಹೊರಗುತ್ತಿಗೆ ನೌಕರರ ನೇಮಕಾತಿ ವಿಚಾರ ಮುನ್ನೆಲೆಗೆ ಬಂದಿದೆ. ಸರ್ಕಾರದ ಅನುಮತಿ ಪಡೆಯದೆ ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.

Chikkaballapur City Municipal Council Faces Land Scam Allegations: ಸರ್ಕಾರಿ ಜಮೀನು ಪರಬಾರೆ ಮಾಡಿದ ಆರೋಪ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:07 pm, Thu, 3 September 26

Loading...
Unable to load recommendations.
Follow Us