ಶ್ರೀರಂಗಪಟ್ಟಣ ADLR ಭೂ ಹಗರಣ: 200 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ, 9 ಜನರ ಬಂಧನ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ADLR ಕಚೇರಿಯಲ್ಲಿ 200 ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿದ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಇಂದು ಕಚೇರಿಗಳ ಮೇಳೆ ದಾಳಿ ಮಾಡಲಾಗಿದೆ. ಖಾಸಗಿ ವ್ಯಕ್ತಿ ಸೇರಿ 9 ಸರ್ಕಾರಿ ನೌಕರರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು
- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ADLR ಕಚೇರಿಯಲ್ಲಿ ಅಕ್ರಮ
- 200 ಎಕರೆಯಷ್ಟು ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳ ಸೃಷ್ಟಿ
- ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ದಾಳಿ
ಮಂಡ್ಯ, ಜುಲೈ 03: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉಪ ಲೋಕಾಯುಕ್ತರ ನೇತೃತ್ವದಲ್ಲಿ ನಡೆದ ಮೆಗಾ ಕಾರ್ಯಾಚರಣೆಯೊಂದರಲ್ಲಿ ಬೃಹತ್ ಭೂ ಹಗರಣವೊಂದು (Land Scam) ಬಯಲಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣ ADLR ಕಚೇರಿಯಲ್ಲಿ ಅಕ್ರಮ ನಡೆದಿದೆ. ಸುಮಾರು 200 ಎಕರೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಜಾಲವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಜನ ಸರ್ಕಾರಿ ನೌಕರರು ಹಾಗೂ ಓರ್ವ ಖಾಸಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಇತ್ತ ಬಂಧನ ಭೀತಿ ಹಿನ್ನೆಲೆ ADLR ಅಧಿಕಾರಿ ಪರಾರಿ ಆಗಿದ್ದಾರೆ.
ಯಾರೆಲ್ಲಾ ಬಂಧಿತರು
ಖಾಸಗಿ ಡಾಟಾ ಎಂಟ್ರಿ ಆಪರೇಟರ್ ನಿತಿನ್ ಪ್ರೇಮಾನಂದ ಮಹಾಲೆ, ಸರ್ವೆ ಸೂಪರ್ವೈಸರ್ ಯೋಗರಾಜ್, ಭೂ ಮಾಪಕರಗಳಾದ ಅರವಿಂದ, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನೇಶಾ ಸಾರಿಕ ಬಂಧಿತರು. ಬಂಧನದ ಭೀತಿ ಹಿನ್ನೆಲೆ ಶ್ರೀರಂಗಪಟ್ಟಣ ಎಡಿಎಲ್ಆರ್ ಮೊಹಮ್ಮದ್ ಪರಾರಿ ಆಗಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಗುತ್ತಿಗೆ ಪಡೆಯಲು ನಕಲಿ ಪ್ರಮಾಣ ಪತ್ರ ನೀಡಿರುವುದು ಪತ್ತೆ
ಶ್ರೀರಂಗಪಟ್ಟಣದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಜಮೀನು ಮಾಫಿಯಾಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶಾಕ್ ನೀಡಿದ್ದಾರೆ. ಶ್ರೀರಂಗಪಟ್ಟಣದ ತಹಶೀಲ್ದಾರ್, ಎಡಿಎಲ್ಆರ್, ಮಹದೇವಪುರ ಪಿಡಿಒ, ಉಪವಿಭಾಗಾಧಿಕಾರಿ ಕಚೇರಿ ಮೇಲೆ ದಾಳಿ ವೇಳೆ ಅಧಿಕಾರಿಗಳೇ ಬೆಚ್ಚಿಬೀಳುವ ಸತ್ಯಗಳು ಹೊರಬಂದಿವೆ.
ಸರ್ಕಾರಿ ನೌಕರನ ಸೋಗಿನಲ್ಲಿ ವಂಚನೆ
ಖಾಸಗಿ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ ನಿತಿನ್ ಪ್ರೇಮಾನಂದ ಮಹಾಲೆ ತಾನೊಬ್ಬ ಸರ್ಕಾರಿ ನೌಕರ, ಲೈಸೆನ್ಸ್ಡ್ ಸರ್ವೇಯರ್ ಎಂದು ಬಿಂಬಿಸಲಾಗಿದೆ. ಇಲಾಖೆಯ ಉನ್ನತಾಧಿಕಾರಿಗಳೇ ಆತನಿಗೆ ಮೋಜಿಣಿ ತಂತ್ರಾಂಶದ ಐಡಿ, ಪಾಸ್ವರ್ಡ್ ಮತ್ತು ಓಟಿಪಿಗಳನ್ನು ನೀಡಿ ಆಕಾರ್ ಬಂದ್ ಡಿಜಿಟಲೀಕರಣದ ಪ್ರಕ್ರಿಯೆಯನ್ನು ಆತನ ಕೈಗಿಟ್ಟಿದ್ದರು. ಇಷ್ಟೇ ಅಲ್ಲದೆ, ಈ ಖಾಸಗಿ ವ್ಯಕ್ತಿಗೆ ADLR ಮತ್ತು ಸರ್ವೆ ಸೂಪರ್ವೈಸರ್ ಸೇರಿದಂತೆ ಹಲವು ಅಧಿಕಾರಿಗಳು ಒಟ್ಟಾಗಿ ಸಂಬಳ ನೀಡುತ್ತಿದ್ದರು ಎಂಬ ಆಘಾತಕಾರಿ ವಿಷಯ ಪತ್ತೆಯಾಗಿದೆ.
ದಾಖಲೆ ಇಲ್ಲದ 1.4 ಲಕ್ಷ ರೂ ಪತ್ತೆ
ಇನ್ನು ಶ್ರೀರಂಗಪಟ್ಟಣದ ನಿತಿನ್ ಪ್ರೇಮಾನಂದ ಮಹಾಲೆ ಹಾಗೂ ಎಡಿಎಲ್ಆರ್ ಮೊಹಮ್ಮದ್ ಮನೆಯಲ್ಲಿ ಸಕಲೇಶಪುರ, ಹುಣಸೂರು, ಮುಳಬಾಗಿಲು ತಾಲೂಕಿನ ಭೂಮಾಪನ ಇಲಾಖೆಯ ಅಧಿಕಾರಿಗಳ ಸೀಲ್ಗಳು ಪತ್ತೆ ಆಗಿವೆ. ಅಷ್ಟೇ ಅಲ್ಲದೆ ಇಬ್ಬರ ಮನೆಯಲ್ಲಿ ದಾಖಲೆ ಇಲ್ಲದ 1.4 ಲಕ್ಷ ರೂ ಸಹ ಪತ್ತೆ ಆಗಿದ್ದು, ಸದ್ಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



