ಮಂಡ್ಯದಲ್ಲಿ ಹನುಮ ಧ್ವಜ ವಿವಾದ ಶುರುವಾಗಿದ್ಹೇಗೆ? ಯಾಕೆ? ಇಲ್ಲಿದೆ ಘಟನೆ ಹಿನ್ನೆಲೆ

ಮಂಡ್ಯದ ಕೆರಗೋಡು ಗ್ರಾಮದ ಧ್ವಜ ವಿವಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದಾಗಿ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇನ್ನು ಈ ಧ್ವಜಸ್ತಂಭ ನಿರ್ಮಾಣ ಯಾರಿಂದ ಆರಂಭವಾಯ್ತು? ಇದು ಹೇಗೆ ವಿವಾದಕ್ಕೀಡಾಯ್ತು? ಗ್ರಾಮ ಪಂಚಾಯ್ತಿ ಹೇಳಿದ್ದೇನು? ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಮಂಡ್ಯದಲ್ಲಿ ಹನುಮ ಧ್ವಜ ವಿವಾದ ಶುರುವಾಗಿದ್ಹೇಗೆ? ಯಾಕೆ? ಇಲ್ಲಿದೆ ಘಟನೆ ಹಿನ್ನೆಲೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2024 | 9:37 PM

ಮಂಡ್ಯ, (ಜನವರಿ 29): ಮಂಡ್ಯ ತಾಲೂಕಿನ ಕೆರಗೋಡು (Keragodu) ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿಸಿರುವ 108 ಅಡಿ ಆಂಜನೇಯ ಅರ್ಜುನ ಧ್ವಜಸ್ತಂಭ ತೆರವುಗೊಳಿಸಿರುವ ವಿಷಯ ವಿವಾದ ಸ್ವರೂಪ ಪಡೆದುಕೊಂಡಿದೆ. ಮಾತ್ರವಲ್ಲದೆ ಶನಿವಾರ ಗ್ರಾಮಸ್ಥರು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು, ಹಿಂದು ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಇನ್ನು ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡಿದ್ದಾರೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.

ಧ್ವಜಸ್ತಂಭ ನಿರ್ಮಾಣದ ಆರಂಭ ಆಗಿದ್ದೇ ಇಲ್ಲಿಂದ

ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂದೆ 40 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿದ ಕೆಲವರು ನಾವೂ ಅದಕ್ಕೆ ಸಹಕಾರ ನೀಡುತ್ತೇವೆ 60 ಅಡಿ ಧ್ವಜಸ್ತಂಭ ನಿರ್ಮಿಸುವಂತೆ ಸಲಹೆ ನೀಡಿದ್ದರು. ಇದಲ್ಲದೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕ ರವಿಕುಮಾರ್ ಗಣಿಗ ಅವರು ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಆದರೆ ಧ್ವಜಸ್ತಂಭ ನಿರ್ಮಾಣ ಮಾಡುವುದರಿಂದ ಬಸ್ ನಿಲ್ದಾಣಕ್ಕೆ ತೊಂದರೆಯಾಗಬಹುದು ಎಂದು ಸಲಹೆ ನೀಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದಲ್ಲದೆ ಅಂದು ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಯುವಕರು, ತಾವು ತೋರಿಸಿದ ಸ್ಥಳದಲ್ಲೇ ನಾವು ಧ್ವಜಸ್ತಂಭ ನಿರ್ಮಾಣ ಮಾಡುವುದಾಗಿ ಹೇಳಿ, ಸ್ಥಳ ತಿಳಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ವಿವಾದ: ಪಂಚಾಯ್ತಿ ಪಿಡಿಓ ತಲೆದಂಡ, ಇಲ್ಲಿವೆ 5 ಕಾರಣಗಳು

ಮೇಲ್ಬಾಗದ ರಂಗಮಂದಿರ ಆವರಣದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡುವಂತೆ ಸ್ವತಃ ಶಾಸಕರೇ ತಿಳಿಸಿದ್ದರು. ಅವರ ಸಲಹೆ ಮೇರೆಗೆ ಟ್ರಸ್ಟ್ ವತಿಯಿಂದ ನಿರ್ಮಿಸಲುದ್ದೇಶಿಸಿದ್ದ 60 ಅಡಿ ಧ್ವಜಸ್ತಂಭಕ್ಕೆ ಬದಲಾಗಿ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ಸುಮಾರು 3.50 ಲಕ್ಷ ರೂ ವೆಚ್ಚದಲ್ಲಿ 108 ಅಡಿ ಧ್ವಜಸ್ತಂಭ ನಿರ್ಮಾಣ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ವಿವರಿಸಿದ್ದಾರೆ. ಇನ್ನು ಶಾಸಕರು ಸೂಚಿಸಿದ ರಂಗಮಂದಿರ ಜಾಗವು ಸರ್ಕಾರಕ್ಕೆ ಸೇರಿದ್ದಾಗಿದೆ.

ಇನ್ನು ಇತ್ತೀಚೆಗೆ ಕಾಡಾನೆ ಹಿಡಿಯುವ ಕಾರ್ಯಾಚಾರಣೆ ವೇಳೆ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಸಾವಿಗೀಡಾಗಿತ್ತು. ಈ ಹಿನ್ನೆಲೆಯಲ್ಲಿ ಅದರ ನೆನಪಿಗಾಗಿ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ಎಂದು ನಾಮಕರಣ ಮಾಡಲಾಗಿದೆ. ಇದಲ್ಲದೆ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಸಂದರ್ಭದಲ್ಲಿ ಈ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜವನ್ನು ಹಾರಿಸುತ್ತಾ ಬರಲಾಗಿದೆ. ಉಳಿದ ದಿನಗಳಲ್ಲಿ ರಾಷ್ಟ್ರ ಧ್ವಜವನ್ನು ನಿತ್ಯ ಹಾರಿಸಬಾರದೆಂಬ ಕಾರಣಕ್ಕೆ ಬೇರೆ ದಿನಗಳಲ್ಲಿ ಶ್ರೀ ಆಂಜನೇಯಸ್ವಾಮಿಯ ಕೇಸರಿ ಧ್ವಜವನ್ನು ಹಾರಿಸಲು ನಿರ್ಧರಿಸಲಾಗಿತ್ತು ಎಂದು ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

ಆದರೆ ಮುಖ್ಯವಾಗಿ ಗ್ರಾಮ ಪಂಚಾಯತಿ ಹೊರಡಿಸಿದ ಠರಾವಿನಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸಲು ಮಾತ್ರ ಅನುಮತಿ ನೀಡಲಾಗಿದೆ‌. ಉಳಿದ ದಿನಗಳಲ್ಲಿ ಯಾವುದೇ ಧ್ವಜವನ್ನು ಹಾರಿಸಲು ಅನುಮತಿ ಇಲ್ಲ.

ಬಹುಮತದ ಅನುಮೋದನೆ

ಧ್ವಜ ಸ್ತಂಭ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಪಡೆಯುವ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಗ್ರಾಪಂನಲ್ಲಿ ಸಭೆ ಕರೆಯಲಾಗಿದ್ದು, ಇದರಲ್ಲಿ 22 ಸದಸ್ಯರ ಪೈಕಿ 20 ಜನರು ಹಾಜರಾಗಿದ್ದರು. ಧ್ವಜಸ್ತಂಭ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ 17 ಸದಸ್ಯರು ಧ್ವಜಸ್ತಂಭ ಸ್ಥಾಪಕರ ಪರವಾಗಿ, ಇಬ್ಬರು ತಟಸ್ಥರಾಗಿ ಮತ್ತು ಮತ್ತೋರ್ವ ಸದಸ್ಯ ವಿರೋಧ ವ್ಯಕ್ತಪಡಿಸಿದ್ದರು. ಒಟ್ಟಾರೆ ಬಹುಮತದ ಆಧಾರದ ಮೇರೆಗೆ ಧ್ವಜ ಸ್ತಂಭ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು.

ಅದರಂತೆ ಜ.20ರಂದು ಗ್ರಾಮದಲ್ಲಿ ಸರಳ ಸಮಾರಂಭದಲ್ಲಿ ಧ್ವಜಸ್ತಂಭ ಉದ್ಘಾಟಿಸಿ ಆಂಜನೇಯಸ್ವಾಮಿ ಧ್ವಜವನ್ನು ಹಾರಿಸಲಾಯಿತು. ಮಾತ್ರವಲ್ಲದೆ ಜ.26ರಂದು ಗಣರಾಜ್ಯೋತ್ಸವ ವೇಳೆ ರಾಷ್ಟ್ರ ಧ್ಜವನ್ನು ಹಾರಿಸಿ, ಸಂಜೆ ಮತ್ತೆ ಆಂಜನೇಯಸ್ವಾಮಿ ಧ್ವಜ ಹಾರಿಸಲಾಯಿತು. ಆದರೆ ಮುಖ್ಯವಾಗಿ ಗ್ರಾಮ ಪಂಚಾಯತಿ ಹೊರಡಿಸಿದ ಠರಾವಿನಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸಲು ಮಾತ್ರ ಅನುಮತಿ ನೀಡಲಾಗಿತ್ತು‌. ಉಳಿದ ದಿನಗಳಲ್ಲಿ ಯಾವುದೇ ಧ್ವಜವನ್ನು ಹಾರಿಸಲು ಅನುಮತಿ ಇಲ್ಲ. ಆದರೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ಎರಡು ದಿನ ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯತಿಯವರು ಮೌಖಿಕವಾಗಿ ಅನುಮತಿ ನೀಡಿದ್ದರು. ಅದರಂತೆ ಗ್ರಾಮಸ್ಥರು ಹನುಮ ಧ್ವಜ ಹಾರಿಸಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದ್ರೆ, ಇದನ್ನು ಸಹಿಸದ ಕೆಲವರು ಪಿತೂರಿ ನಡೆಸಿ ತಾಲೂಕು ಪಂಚಾಯಿತಿ ಇಒ ವೀಣಾ ಅವರಿಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನನ್ವಯ ಶನಿವಾರ ತಾ.ಪಂ ಇಒ ಸ್ಥಳ ಪರಿಶೀಲನೆ ನಡೆಸಿ ಧ್ವಜಸ್ತಂಭವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ಇದಲ್ಲದೆ ಹಿಂದೂ ಪರ ಸಂಘಟನೆಗಳ ಪದಾಧಿಕಾರಿ, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದರು. ಈ ನಡುವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ ಇಒ ಮತ್ತು ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಲಹೆ ಮೇರೆಗೆ ಧ್ವಜಸ್ತಂಭ ತೆರವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಸೂಚನೆ ಮೇರೆಗೆ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದ್ದರು.

24 ಗಂಟೆಯೂ ರಾಷ್ಟ್ರಧ್ವಜ ಹಾರಿಸಲು ನಿರ್ಧಾರ

ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮತ್ತೆ ಗ್ರಾಮಕ್ಕೆ ಆಗಮಿಸಿದ ತಾ.ಪಂ ಇಒ ಮತ್ತು ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಕೇವಲ ಹನುಮ ಧ್ವಜ ತೆರವುಗೊಳಿಸಲು ಮುಂದಾದರು. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕೂಡ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಿ, ಕೊನೆಗೂ ಹನುಮ ಧ್ವಜ ಕೆಳೆಗೆ ಇಳಿಸಿ, ರಾಷ್ಟ್ರಧ್ವಜ ಹಾರಿಸಲಾಯಿತು. ಇನ್ಮುಂದೆ ವಿವಾದಿತ ಧ್ವಜ ಸ್ತಂಭದಲ್ಲಿ 24 ಗಂಟೆಯೂ ರಾಷ್ಟ್ರಧ್ವಜ ಹಾರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.