ತುಮಕೂರು: ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ
ದೇಶದ ಭದ್ರತೆಗೆ ಧಕ್ಕೆ ತರುವ ಪ್ರಚೋದನಾತ್ಮಕ ಸಂದೇಶ ರವಾನಿಸುತ್ತಿದ್ದ ತುಮಕೂರಿನ ಶ್ರೀರಾಮನಗರದ ಅಲ್ಲಾಬಕ್ಷು ಎಂಬಾ ಯುವಕನನ್ನು ಕೇಂದ್ರ ತನಿಖಾ ಸಂಸ್ಥೆಗಳ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ವಿದೇಶಿ ಉಗ್ರ ಸಂಘಟನೆ, ಉಗ್ರನೊಂದಿಗೆ ಎಕ್ಸ್ ಖಾತೆ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ.

ತುಮಕೂರು, ಜೂನ್ 5: ವಿದೇಶಿ ಭಯೋತ್ಪಾದಕ ಸಂಘಟನೆ, ಭಯೋತ್ಪಾದಕನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ತುಮಕೂರಿನಲ್ಲಿ (Tumakur) ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಹಾಗೂ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ದೇಶದ ಆಂತರಿಕ ಬೆಳವಣಿಗೆಗಳ ಕುರಿತು ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ.
ಮುಖ್ಯಾಂಶಗಳು
- ಕೇಂದ್ರ ತನಿಖಾ ಸಂಸ್ಥೆಗಳ ರಹಸ್ಯ ಮಾಹಿತಿಯ ಮೇರೆಗೆ ತುಮಕೂರಿನ ಕ್ಯಾತಸಂದ್ರದಲ್ಲಿ ಶಂಕಿತ ಯುವಕನ ಬಂಧನ.
- ಸಾಮಾಜಿಕ ಜಾಲತಾಣದ ಖಾತೆ ಮೂಲಕ ವಿದೇಶಿ ಉಗ್ರನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅಲ್ಲಾಬಕ್ಷು.
- ದೇಶದ ಭದ್ರತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಪ್ರಚೋದನಾತ್ಮಕ ಚಾಟಿಂಗ್; ನೆರವು ನೀಡಿದ ಮತ್ತೋರ್ವನಿಗಾಗಿ ಪೊಲೀಸರಿಂದ ತೀವ್ರ ಶೋಧ.
ಎಕ್ಸ್ ಖಾತೆ ಮೂಲಕ ಉಗ್ರರ ಜೊತೆ ಲಿಂಕ್
ಬಂಧಿತ ಆರೋಪಿಯನ್ನು ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಬಕ್ಷು (24) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ಸಮಯದಿಂದ ಸಾಮಾಜಿಕ ಜಾಲತಾಣವಾದ ಎಕ್ಸ್ (X) ಖಾತೆಯ ಮೂಲಕ ವಿದೇಶಿ ಮೂಲದ ಶಂಕಿತ ಉಗ್ರ ಸಂಘಟನೆಯ ವ್ಯಕ್ತಿಯೊಬ್ಬನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ದೇಶದ ಆಂತರಿಕ ಭದ್ರತೆ ಮತ್ತು ಶಾಂತಿ ಕದಡುವ ನಿಟ್ಟಿನಲ್ಲಿ ಈತ ಸರಣಿ ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಕುರಿತು ಚಾಟ್ ನಡೆಸುತ್ತಿದ್ದ ಎಂಬ ಆರೋಪವಿದೆ.
ಕೇಂದ್ರ ತನಿಖಾ ಸಂಸ್ಥೆಗಳ ನಿಗಾ: ಮತ್ತೊಬ್ಬನಿಗಾಗಿ ಬಲೆ
ಅಲ್ಲಾಬಕ್ಷು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿದ್ದ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ದೇಶ ವಿರೋಧಿ ಚಾಟಿಂಗ್ಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ತೀವ್ರ ನಿಗಾವಹಿಸಿದ್ದವು. ಆತನ ಲಿಂಕ್ಗಳನ್ನು ಪತ್ತೆಹಚ್ಚಿದ ಬಳಿಕ, ತನಿಖಾ ಸಂಸ್ಥೆಗಳು ರಾಜ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಗುರುವಾರ ರಾತ್ರಿ ಕ್ಯಾತಸಂದ್ರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್, ಭಯೋತ್ಪಾದಕರ ವಿರುದ್ಧ ಮಾಕ್ ಡ್ರಿಲ್ ಹೇಗಿತ್ತು ನೋಡಿ
ಪ್ರಸ್ತುತ ಈ ಬಂಧಿತ ಯುವಕನಿಗೆ ಕೃತ್ಯದಲ್ಲಿ ಸಾಥ್ ನೀಡಿದ ಹಾಗೂ ಆತನ ಜೊತೆ ನಿಕಟ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆತನಿಗಾಗಿ ತುಮಕೂರು ನಗರ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




