ಉಡುಪಿ: ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ಶಂಕೆ
ಸಾಲ ತೀರಿಸಿದರೂ ದಾಖಲೆ ಪತ್ರಗಳನ್ನು ವಾಪಸ್ ನೀಡದೆ ಉಪ್ಪುಂದದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮ್ಯಾನೇಜರ್ ಗ್ರಾಹಕರ ಜತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಾಖಲೆ ಪತ್ರ ಕೇಳಲು ಹೋದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದೂ ಹೇಳಲಾಗಿದೆ. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಉಡುಪಿ, ಫೆಬ್ರವರಿ 12: ಉಡುಪಿ (Udupi) ಜಿಲ್ಲೆಯ ಬೈಂದೂರು (Byndoor) ತಾಲೂಕಿನ ಉಪ್ಪುಂದದ (Uppunda) ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ ಭಾರೀ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಹಕಾರಿ ಸಂಘದಲ್ಲಿ ಅಡವಿಟ್ಟ ದಾಖಲೆ ಪತ್ರವೇ ಕಾಣೆಯಾಗಿದ್ದು, ಕೇಳಲು ಹೋದ ಸಾಲಗಾರರನ್ನು ಮ್ಯಾನೇಜರ್ ಬೆದರಿಸಿ ಬ್ಯಾಂಕ್ನಿಂದ ಹೊರಗಟ್ಟಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಸುಶೀಲಾ ಎಂಬವರು 2017ರಲ್ಲಿ ಆಸ್ತಿ ಪತ್ರವಿಟ್ಟು 15 ಲಕ್ಷ ರೂಪಾಯಿ ಸಾಲ ಪಡೆದಿದ್ದರು. 10 ವರ್ಷದ ಅವಧಿಗಾಗಿ ಪಡೆದಿದ್ದ ಸಾಲವನ್ನು 2023ರ ನವೆಂಬರ್ನಲ್ಲೇ ಮರು ಪಾವತಿಸಿದ್ದರು. ಮುಂಚಿತವಾಗಿಯೇ ಮರು ಪಾವತಿ ಮಾಡಿದ್ದರೂ ಅಡವಿಟ್ಟ ಆಸ್ತಿ ಪತ್ರದ ದಾಖಲೆಯನ್ನು ಮ್ಯಾನೇಜರ್ ವಾಪಸ್ ನೀಡಿಲ್ಲ. 2-3 ಬಾರಿ ಬ್ಯಾಂಕ್ನಲ್ಲಿ ವಿಚಾರಿಸಿದರೂ ಸಿಬ್ಬಂದಿ ಸ್ಪಂದಿಸಿಲ್ಲ.
ಕಳೆದ ಜನವರಿ ತಿಂಗಳಿನಲ್ಲಿ ದಾಖಲೆ ಪತ್ರ ಕೇಳಲು ಹೋಗಿದ್ದಾಗ ಸುಶೀಲಾ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಗೆ ಹೇಳಿ ಸುಶೀಲಾ ಮತ್ತು ಅವರ ಪುತ್ರನನ್ನು ಮ್ಯಾನೇಜರ್ ಹೊರಗಟ್ಟಿದ್ದರು. ದಾಖಲೆ ಪತ್ರ ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆ ಬಗ್ಗೆ ಕುಟುಂಬದವರು ಈಗ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಪಿಎಸ್ಐ, ಗೃಹರಕ್ಷಕ ದಳದ ಅಧಿಕಾರಿ ಮೇಲೆ ತಂಡದಿಂದ ಹಲ್ಲೆ, ಜೀಪು ಜಖಂ
ಇದೀಗ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ಚಂದ್ರ ಶೆಟ್ಟಿ ಸೇರಿ ನಾಲ್ವರ ವಿರುದ್ಧ ಸುಶೀಲಾ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



