Chanakya Niti : ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳು ಇವೆಯಂತೆ
ಸಂಬಂಧಗಳು ಬಹಳ ಸೂಕ್ಷ್ಮವಾದುದು. ಯಾವುದೇ ಸಂಬಂಧಗಳಿರಲಿ, ಬಹಳ ಕಾಳಜಿಯಿಂದ ಜೋಪಾನವಾಗಿ ನಿಭಾಯಿಸಿಕೊಂಡು ಹೋಗಬೇಕು. ಆದರೆ ಕೆಲವೊಮ್ಮೆ ನಮ್ಮ ವರ್ತನೆ ಹಾಗೂ ನಡವಳಿಕೆಯಿಂದಲೇ ಸಂಬಂಧಕ್ಕೆ ಮುಳುವಾಗುತ್ತದೆ. ದಂಪತಿಗಳಲ್ಲಿ ಹೆಚ್ಚಿನವರು ಸಣ್ಣ ಪುಟ್ಟ ವಿಷಯಗಳನ್ನೆ ದೊಡ್ಡದು ಮಾಡುತ್ತಾರೆ. ಜಗಳವಾಡುತ್ತಲೇ ತಮ್ಮ ಸಮಯ ಹಾಗೂ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಈ ಕೆಲವು ನಡವಳಿಕೆ ಹಾಗೂ ಗುಣಗಳು ದಾಂಪತ್ಯಜೀವನಕ್ಕೆ ಮಾರಕವಾಗುತ್ತದೆ. ಹೀಗಾಗಿ ಚಾಣಕ್ಯನು ದಂಪತಿಗಳಿಗೆ ಈ ಕೆಲವು ವಿಚಾರಗಳ ಬಗ್ಗೆ ಗಮನ ಕೊಡಿ , ಇಲ್ಲದಿದ್ದರೆ ವೈವಾಹಿಕ ಸಂಬಂಧ ಮುರಿದು ಬೀಳುತ್ತದೆ ಎಂದು ಸಲಹೆ ನೀಡಿದ್ದಾರೆ, ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ದಿನಗಳು ವರ್ಷಗಳು ಉರುಳುತ್ತ ಹೋದಂತೆ ವೈವಾಹಿಕ ಜೀವನವೂ ಬೋರ್ ಎನಿಸಬಹುದು. ಸುಖವಾಗಿ ಸಂಸಾರ ಮಾಡಬೇಕು ಎಂದುಕೊಂಡಿದ್ದ ಮನಸ್ಸುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಬಹುದು. ಅದಲ್ಲದೇ, ಗಂಡ ಹೆಂಡತಿ ಚೆನ್ನಾಗಿ ಹೊಂದಿಕೊಳ್ಳದಿದ್ದರೆ, ಜೊತೆಗೆ ಬದುಕುವುದು ಕಷ್ಟವಾಗುತ್ತದೆ. ಚಾಣಕ್ಯ (Chanakya) ತಮ್ಮ ನೀತಿಯಲ್ಲಿ ಗಂಡನು ತನ್ನ ಹೆಂಡತಿಗೆ ಹೇಗೆ ಶತ್ರುವಾಗುತ್ತಾನೆ ಅಥವಾ ಸಂಗಾತಿಯ ನಡುವೆ ಬಾಂಧವ್ಯವೂ ಕಳಚಿ ಬೀಳುವುದು ಏಕೆ ಎಂದು ತಿಳಿಸಿದ್ದಾರೆ. ಈ ಎಲ್ಲವನ್ನು ಸರಿ ಪಡಿಸಿಕೊಂಡರೆ ಮಾತ್ರ ವೈವಾಹಿಕ ಜೀವನ ಸುಖಕರವಾಗಿ ಸಾಗಲು ಸಾಧ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
- ಅಪಹಾಸ್ಯ ಮಾಡುವುದು : ಜೀವನದಲ್ಲಿ ಕಷ್ಟಗಳು ಯಾರಿಗೆ ತಾನೇ ಬರಲ್ಲ, ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟದ ಸಮಯದಲ್ಲಿ ದಂಪತಿಗಳಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡದಂತೆ ಇರಬೇಕು. ಗಂಡ ಹೆಂಡತಿ ಯಾವುದೇ ವಿಷಯದಲ್ಲೂ ಒಬ್ಬರನ್ನೊಬ್ಬರು ಗೇಲಿ ಮಾಡಬಾರದು. ಜೀವನದ ಸಮಸ್ಯೆಗಳಿಗೆ ನೀನೇ ಕಾರಣ ಎಂದು ಹೀಯಾಳಿಸುವುದು, ಅಪಹಾಸ್ಯ ಮಾಡುವುದು ಇಬ್ಬರ ನಡುವೆ ಬಿರುಕು ಮೂಡಲು ಕಾರಣವಾಗುತ್ತದೆ. ಹೀಗಾಗಿ ಬದುಕಿನಲ್ಲಿ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸಲು ಕಲಿಯಿರಿ. ನೀವು ಹೀಗೆ ಮಾಡದಿದ್ದರೆ, ನಿಮ್ಮ ವೈವಾಹಿಕ ಜೀವನ ಬೇಗನೆ ಕುಸಿಯುವ ಸಾಧ್ಯತೆಯಿದೆ.
- ಸಂವಹನದ ಕೊರತೆ : ದಾಂಪತ್ಯ ಜೀವನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ, ನೀವಿಬ್ಬರೂ ಪರಸ್ಪರ ಮಾತನಾಡಬೇಕು. ಗಂಡ ಹೆಂಡತಿಯರ ನಡುವೆ ಸಣ್ಣಪುಟ್ಟ ಜಗಳಗಳು ಸರ್ವೇ ಸಾಮಾನ್ಯ ಹಾಗಂದ ಮಾತ್ರಕ್ಕೆ ಪರಸ್ಪರ ಮಾತನಾಡುವುದನ್ನು ನಿಲ್ಲಿಸಬೇಡಿ. ಸಂವಹನದ ಕೊರತೆ ಉಂಟಾದರೆ ಇಬ್ಬರ ನಡುವೆ ಅಂತರ ಹೆಚ್ಚಾಗಿ ದಾಂಪತ್ಯ ಜೀವನದ ಸಾಮರಸ್ಯ ಕಡಿಮೆಯಾಗುತ್ತದೆ.
- ಕೋಪಿಸಿಕೊಳ್ಳುವುದು : ಗಂಡ ಮತ್ತು ಹೆಂಡತಿಯ ನಡುವಿನ ಎಲ್ಲಾ ಸಂಬಂಧಗಳ ಅಂತ್ಯಕ್ಕೆ ಕಾರಣವಾಗುವುದೇ ಈ ಕೋಪ. ಕೋಪದ ಕೈಗೆ ಬುದ್ಧಿ ಕೊಡಬಾರದು. ಗಂಡ ಹೆಂಡತಿಯಿಬ್ಬರೂ ತಮ್ಮ ಕೋಪ ಬಂದಾಗ ಕಟುವಾಗಿ ವರ್ತಿಸಬಾರದು. ಸಮಸ್ಯೆಯನ್ನು ಶಾಂತವಾಗಿ ಪರಿಹರಿಸುವುದು ಮುಖ್ಯ. ಅದಲ್ಲದೇ ಕೋಪದಿಂದ ಆಡುವ ಮಾತುಗಳು ಸಂಬಂಧವನ್ನು ಅಂತ್ಯಗೊಳಿಸುತ್ತದೆ. ಹೀಗಾಗಿ ಕೋಪದ ಮೇಲೆ ನಿಯಂತ್ರಣ ಸಾಧಿಸಿ ಎಂದು ಹೇಳುತ್ತಾರೆ ಚಾಣಕ್ಯ.
- ಅತಿಯಾದ ಖರ್ಚು ವೆಚ್ಚಗಳು : ಜೀವನ ನಿರ್ವಹಣೆಗೆ ಹಣ ಬಹಳ ಅವಶ್ಯಕ. ಗಂಡ ಮತ್ತು ಹೆಂಡತಿ ಇಬ್ಬರೂ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿದ್ದರೆ ಮಾತ್ರ ಹೊಂದಾಣಿಕೆಯಿಂದ ಇರಲು ಸಾಧ್ಯ. ನಿಮ್ಮ ಕುಟುಂಬದ ಸೌಕರ್ಯಗಳಿಗಾಗಿ ಖರ್ಚು ಮಾಡುವುದು ಒಳ್ಳೆಯದು. ಆದರೆ ಅನಗತ್ಯ ಖರ್ಚು ಕೇವಲ ಆರ್ಥಿಕ ಸಮಸ್ಯೆಗಳನ್ನು ತರುವುದಿಲ್ಲ. ಇದು ಗಂಡ ಹೆಂಡತಿಯರ ನಡುವೆ ಜಗಳಕ್ಕೂ ಕಾರಣವಾಗುತ್ತದೆ. ಆದರಿಂದ ಈ ವಿಷಯಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗುತ್ತದೆ.
- ವೈಯಕ್ತಿಕ ವಿಷಯಗಳ ಬಗ್ಗೆ ಇತರರಿಗೆ ಹೇಳುವುದು : ಗಂಡ ಹೆಂಡತಿಯ ನಡುವಿನ ವಿಷಯಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಬ್ಬರೂ ತಮ್ಮ ನಡುವಿನ ವಿಷಯಗಳನ್ನು ರಹಸ್ಯವಾಗಿಡಬೇಕು. ಮೂರನೇ ವ್ಯಕ್ತಿಯ ಬಳಿ ಈ ರಹಸ್ಯ ವಿಷಯಗಳನ್ನು ಎಂದಿಗೂ ಹೇಳಬಾರದು. ನಿಮ್ಮ ಖಾಸಗಿ ಮಾಹಿತಿ ಮೂರನೇ ವ್ಯಕ್ತಿಗೆ ತಿಳಿಯದಂತೆ ಎಚ್ಚರವಹಿಸಿ. ಒಂದು ವೇಳೆ ಮೂರನೇ ವ್ಯಕ್ತಿಯಿಂದ ಕೆಲವು ವಿಷಯಗಳು ಸಂಗಾತಿಗೆ ತಿಳಿದರೆ ಇದುವೇ ದಾಂಪತ್ಯ ಜೀವನ ಹದಗೆಡಲು ಕಾರಣವಾಗುತ್ತದೆ.
- ಪದೇ ಪದೇ ಸುಳ್ಳು ಹೇಳುವುದು : ಸತಿಪತಿಗಳಿಬ್ಬರ ಸಂಬಂಧವೂ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಆಧರಿಸಿದೆ. ಅದರಲ್ಲಿ ಸಂಬಂಧಕ್ಕೆ ಭದ್ರ ಬುನಾದಿಯೇ ಈ ನಂಬಿಕೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಕ್ಕೆ ಕಟ್ಟು ಬಿದ್ದು ಸುಳ್ಳನ್ನು ಹೇಳುತ್ತಾರೆ. ಆದರೆ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡರೆ ಸಂಬಂಧ ಮುರಿದು ಬೀಳಲು ದಾರಿ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಇದ್ದ ವಿಷಯಗಳನ್ನು ಹೇಳಿ ಸಂಗಾತಿಯ ನಂಬಿಕೆ ಉಳಿಸಿಕೊಳ್ಳಿ ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ