Navarathri Day 7: ನವರಾತ್ರಿಯ ಏಳನೇ ದಿನ ಅವಲಕ್ಕಿ ಲಡ್ಡು ತಯಾರಿಸಿ ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ
ಇಂದು ನವರಾತ್ರಿಯ ಏಳನೇ ದಿನ. ಈ ದಿನದಂದು ಜಗನ್ಮಾತೆಯ ಕಾಳರಾತ್ರಿ ಅವರತಾರವನ್ನು ಪೂಜಿಸಲಾಗುತ್ತದೆ. ಈ ದಿನದ ಪೂಜೆಗೆ ನೀವು ಬೆಲ್ಲದಿಂದ ತಯಾರಿಸಿದಂತಹ ಅವಲಕ್ಕಿ ಲಡ್ಡನ್ನು ದೇವರಿಗೆ ನೈವೇದ್ಯ ಪ್ರಸಾದವಾಗಿ ಅರ್ಪಿಸಬಹುದು. ಹಾಗಾದರೆ ಅವಲಕ್ಕಿ ಲಡ್ಡು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಇಂದು ನವರಾತ್ರಿ ಹಬ್ಬದ ಏಳನೇ ದಿನ. ಈ ಸಪ್ತಮಿಯ ದಿನದಂದು ಜಗನ್ಮಾತೆಯ ಕಾಳರಾತ್ರಿ ಅವತಾರವನ್ನು ಪೂಜಿಸಲಾಗುತ್ತದೆ. ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಳರಾತ್ರಿಯ ರೂಪವನ್ನು ಅವತರಿಸುತ್ತಾಳೆ. ಈ ಸುದಿನ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕಾಳರಾತ್ರಿಯನ್ನು ಪೂಜಿಸುವುದರಿಂದ, ಆಕೆ ಎಲ್ಲಾ ರೀತಿಯ ದುಷ್ಟಶಕ್ತಿ ನಕರಾತ್ಮಕ ಶಕ್ತಿ ಹಾಗೂ ನಮ್ಮೊಳಗಿನ ಭಯ ಭೀತಿಯನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಈ ದಿನದ ಪೂಜೆಗೆ ಕಾಳರಾತ್ರಿಗೆ ಪ್ರಿಯವಾದ ಬೆಲ್ಲದಿಂದ ತಯಾರಿಸಿದ ಸಿಹಿ ಪದಾರ್ಥವನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ನೀವು ಬೆಲ್ಲದಿಂದ ತಯಾರಿಸಿದಂತ ಅಲವಕ್ಕಿ ಲಡ್ಡನ್ನು ನೈವೇದ್ಯ ರೂಪದಲ್ಲಿ ಅರ್ಪಿಸಬಹುದು. ಅವಲಕ್ಕಿ ಲಡ್ಡು ತಯಾರಿಸುವುದು ಹೇಗೆ, ಈ ಪಾಕವಿಧಾನದ ಮಾಹಿತಿ ಇಲ್ಲಿದೆ.
ಅವಲಕ್ಕಿ ಲಡ್ಡು ಮಾಡಲು ಬೇಕಾಗಿರುವ ಸಾಮಾಗ್ರಿಗಳು:
• ಅವಲಕ್ಕಿ – 200 ಗ್ರಾಂ
• ಬೆಲ್ಲ – 100 ಗ್ರಾಂ
• ಒಣ ತೆಂಗಿನಕಾಯಿ ತುರಿ – ¼ ಕಪ್
• ಗೋಡಂಬಿ ಮತ್ತು ಒಣ ದ್ರಾಕ್ಷಿ – 5 ರಿಂದ 10
• ಏಲಕ್ಕಿ ಪುಡಿ – 1 ಟೀ ಸ್ಪೂನ್
• ತುಪ್ಪ
ಇದನ್ನೂ ಓದಿ: ಹಬ್ಬಕ್ಕೆ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಮಖಾನ ಡ್ರೈ ಫ್ರೂಟ್ ಬರ್ಫಿ
ಅವಲಕ್ಕಿ ಲಡ್ಡು ತಯಾರಿಸುವ ಸುಲಭ ವಿಧಾನ:
ಮೊದಲಿಗೆ ಗ್ಯಾಸ್ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಅವಲಕ್ಕಿ ಹಾಕಿ ಸ್ವಲ್ಪ ಹುರಿದುಕೊಳ್ಳಿ, ನಂತರ ಒಣ ತೆಂಗಿನಕಾಯಿ ತುರಿಯನ್ನು ಸಹ ಹುರಿದುಕೊಳ್ಳಿ ಹಾಗೂ ಅದನ್ನು ತಣ್ಣಗಾಗಲು ಬಿಟ್ಟು ಬಿಡಿ. ಈ ಮಿಶ್ರಣ ತಣ್ಣಗಾದ ಬಳಿಕ ಅದನ್ನು ಒಂದು ಮಿಕ್ಸಿ ಜಾರ್ಗೆ ವರ್ಗಾಯಿಸಿ. ಅದರೊಂದಿಗೆ ಬೆಲ್ಲವನ್ನು ಸಹ ತುರಿದುಕೊಂಡು ಹಾಕಿಕೊಂಡು ರುಬ್ಬಿಕೊಳ್ಳಿ. ಈ ಮಿಶ್ರಣ ರವೆಯಂತೆ ತರಿತರಿಯಾಗಿರಿ .
ಈಗ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದರಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಉರಿದುಕೊಳ್ಳಿ. ನಂತರ ಹುರಿದಿಟ್ಟ ಈ ಮಿಶ್ರಣವನ್ನು ಪಕ್ಕಕ್ಕೆ ಇಟ್ಟು, ಅದೇ ಪ್ಯಾನ್ಗೆ ಸ್ವಲ್ಪ ತುಪ್ಪವನ್ನು ಹಾಕಿ, ರುಬ್ಬಿಟ್ಟ ಬೆಲ್ಲ ಮತ್ತು ಅವಲಕ್ಕಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದಿಟ್ಟ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ.
ಈಗ ಅಂಗೈಗೆ ಸಲ್ಪ ತುಪ್ಪವನ್ನು ಸವರಿಕೊಂಡು ಅವಲಕ್ಕಿ ಮಿಶ್ರಣದಿಂದ ಸಣ್ಣ ಸ್ಣಣ ಲಡ್ಡುಗಳನ್ನು ತಯಾರಿಸಿದರೆ, ಕಾಳರಾತ್ರಿ ದೇವಿಗೆ ನೈವೇದ್ಯ ಪ್ರಸಾದ ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ