Veer Savarkar’s Death Anniversary 2025: ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಹಾದಿ ಹೇಗಿತ್ತು?
ಭಾರತದ ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ಕ್ರಾಂತಿಕಾರಿಗಳ ಕಮಾಂಡರ್, ಹಿಂದೂ ರಾಷ್ಟ್ರೀಯವಾದಿ, ಉತ್ಸಾಹಭರಿತ ದಾರ್ಶನಿಕ ಮತ್ತು ಸಕ್ರಿಯ ಸುಧಾರಣಾವಾದಿ ಗುರುತಿಸಿಕೊಂಡವರು ವಿನಾಯಕ್ ದಾಮೋದರ್ ಸಾವರ್ಕರ್. ಫೆಬ್ರವರಿ 26 ಕ್ಕೆ ವೀರ್ ಸಾವರ್ಕರ್ ಅವರ ಪುಣ್ಯತಿಥಿಯಾಗಿದ್ದು, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸಿದ್ಧಾಂತವು ಭಾರತೀಯ ರಾಷ್ಟ್ರೀಯತೆಯ ಉದಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿತು. ವೀರ್ ಸಾವರ್ಕರ್ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ವೀರ್ ಸಾವರ್ಕರ್ ಹೆಸರು ಕೇಳಿದ ತಕ್ಷಣ ದೇಶದ ಅದೆಷ್ಟೋ ಯುವಕರು ಮೈ ಮನವೆಲ್ಲವೂ ರೋಮಾಂಚನಗೊಳ್ಳುತ್ತದೆ. ಅವರ ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ಅವರ ನಿಲುವು ಇಂದಿಗೂ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಟ್ಟಾ ಹಿಂದುತ್ವವಾದಿಯಾಗಿದ್ದವರು ವೀರ್ ಸಾವರ್ಕರ್. ಭಾರತವು ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಸಾವರ್ಕರ್ ಸಹ ಬೆಂಬಲಿಸಿದರು. ಸಾವರ್ಕರ್ 1966 ರ ಫೆಬ್ರವರಿ 26 ರಂದು ಬಾಂಬೆಯಲ್ಲಿ ಕೊನೆಯುಸಿರೆಳೆದರು. ಫೆಬ್ರವರಿ 26 ರಂದು ವೀರ್ ಸಾರ್ವಕರ್ ಅವರ ಪುಣ್ಯ ತಿಥಿಯಾಗಿದ್ದು, ಈ ಬಾರಿಯ ಸಾವರ್ಕರ್ ಅವರ 59 ನೇ ವರ್ಷದ ಪುಣ್ಯ ತಿಥಿಯನ್ನು ಆಚರಿಸಲಾಗುತ್ತಿದೆ.
ಹಿಂದುತ್ವವಾದಿಯಾಗಿದ್ದ ವೀರ್ ಸಾವರ್ಕರ್ ಅವರು ಜನಿಸಿದ್ದು ಮೇ 28, 1883ರಲ್ಲಿ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾಗೂರ್ ಅವರ ಜನನವಾಗಿದ್ದು, ತಂದೆ ದಾಮೋದರ್ ಪಂತ್, ತಾಯಿ ರಾಧಾಬಾಯಿ. ನಾಲ್ವರು ಸಹೋದರ, ಸಹೋದರಿಯರ ಜೊತೆ ಸಾವರ್ಕರ್ ಬೆಳೆದಿದ್ದಾರೆ. ನಾಸಿಕ್ನಲ್ಲಿ ವೀರ್ ಸಾವರ್ಕರ್ ಆರಂಭಿಕ ಶಿಕ್ಷಣ ಪಡೆದರು. ಚಿಕ್ಕಂದಿನಿಂದಲೇ ತೀಕ್ಷ್ಣ ಬುದ್ಧಿಶಕ್ತಿಯನ್ನು ಸಾವರ್ಕರ್ ಹೊಂದಿದ್ದರು. ಹೀಗಾಗಿ ಕೇಸರಿ ಪತ್ರಿಕೆಯನ್ನು ಓದಲು ಆರಂಭಿಸಿದ್ದೇ ಅವರ ಮನಸ್ಸಿನಲ್ಲಿ ಕ್ರಾಂತಿಕಾರಿ ಆಲೋಚನೆಗಳು ಮೊಳಕೆಯೊಡೆಯುವುದಕ್ಕೆ ಪ್ರಮುಖ ಕಾರಣವಾಯಿತು.
ಅದಲ್ಲದೇ, ಕಾನೂನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಸಾವರ್ಕರ್ ಪಾತ್ರರಾಗಿದ್ದರು. ಆದರೆ, ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ಸಾವರ್ಕರ್ ನಿರಾಕರಿಸಿದ್ದಕ್ಕೆ ಅವರಿಗೆ ವಕೀಲರ ಬಿರುದು ನೀಡಲಿಲ್ಲ. 1899ರಲ್ಲಿ “ದೇಶ ಭಕ್ತರ ಮೇಳ” ಎಂಬ ಗುಂಪನ್ನು ರಚಿಸಿದರು. ಆ ವೇಳೆಯಲ್ಲಿ ಸಾವರ್ಕರ್ ಸ್ವಾತಂತ್ರ್ಯ ಚಳುವಳಿಯತ್ತ ಧುಮುಕಿದರು.
ಒಂದು ವರ್ಷದ ಬಳಿಕ 1900ರಲ್ಲಿ ಸಾವರ್ಕರ್ “ಮಿತ್ರ ಮೇಳ” ಎಂಬ ಸಂಸ್ಥೆಯನ್ನು ಕೂಡ ಸ್ಥಾಪಿಸಿದರು. ಭಾರತೀಯ ಸ್ವಾತಂತ್ರ್ಯ ಪರ ಕಾರ್ಯಕರ್ತರಾಗಿದ್ದ ಅವರು, ಮತಾಂತರಗೊಂಡ ಹಿಂದೂಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಿಸಬೇಕೆಂದು ಪ್ರತಿಪಾದಿಸಿದರು. ಸಾಮೂಹಿಕ “ಹಿಂದೂ” ಗುರುತನ್ನು ಸೃಷ್ಟಿಸಲು ಅವರು ಹಿಂದುತ್ವ ಎಂಬ ಪದವನ್ನು ಸೃಷ್ಟಿಸಿದರು. ಹಿಂದುತ್ವದ ಕಟ್ಟಾ ಪ್ರತಿಪಾದಕರಾಗಿದ್ದರು. ತಮ್ಮ ಬಿಎ ಓದುತ್ತಿದ್ದ ಸಮಯದಲ್ಲಿ ಬಾಲಗಂಗಾಧರ ತಿಲಕ್ ಅವರ ಮನವಿಯ ಮೇರೆಗೆ ಅವರು ಇಂಗ್ಲಿಷ್ ಸರಕುಗಳನ್ನು ಬಹಿಷ್ಕರಿಸಿದರು.
1909 ರಲ್ಲಿ ಮಾರ್ಲೆ-ಮಿಂಟೋ ಸುಧಾರಣೆಗಳ ವಿರುದ್ಧ ಸಶಸ್ತ್ರ ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಸಾವರ್ಕರ್ ಅವರನ್ನು ಬಂಧಿಸಲಾಯಿತು. ಆದರೆ, ಅವರು ನೀರಿಗೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಕೊನೆಗೆ ಅವರನ್ನು ಬಂಧಿಸಲಾಯಿತು. 1911 ರಲ್ಲಿ, ಅವರಿಗೆ ಎರಡು ಬಾರಿ 50 ವರ್ಷಗಳ ಕಾಲ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. 5 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬಾರದು ಎಂಬ ಷರತ್ತಿನ ಮೇಲೆ ಅವರನ್ನು 1924 ರಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಅವರು ರತ್ನಗಿರಿಯಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಕೆಲಸ ಮಾಡಿದರು. ಎಲ್ಲಾ ಜಾತಿಗಳ ಹಿಂದೂಗಳೊಂದಿಗೆ ಊಟ ಮಾಡುವ ಸಂಪ್ರದಾಯವನ್ನು ಪ್ರಾರಂಭಿಸಿದರು. ಹೀಗೆ ತಮ್ಮದೇ ರೀತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ; ನಿಮ್ಮ ಅಂಗೈಯಲ್ಲಿನ ಈ ರೇಖೆಯ ಆಕಾರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ವೀರ್ ಸಾರ್ವಕರ್ ಅವರ ನುಡಿ ಮುತ್ತುಗಳು
* ದೊಡ್ಡ ಗುರಿಗಾಗಿ ಮಾಡಿದ ಯಾವುದೇ ತ್ಯಾಗ ವ್ಯರ್ಥವಾಗುವುದಿಲ್ಲ.
* ಇತರರನ್ನು ಗೌರವಿಸುವ ಶಕ್ತಿ ಇರುವವರಲ್ಲಿ ಮಾತ್ರ ಸ್ನೇಹ ಸಾಧ್ಯ.
* ನಮ್ಮ ದೇಶ, ರಾಷ್ಟ್ರ ಮತ್ತು ಸಮಾಜದ ಸ್ವಾತಂತ್ರ್ಯಕ್ಕಾಗಿ ದೇವರಿಗೆ ಮೌನ ಪ್ರಾರ್ಥನೆ ಮಾಡುವುದು ಅಹಿಂಸೆಯ ಶ್ರೇಷ್ಠ ಸಂಕೇತವಾಗಿದೆ.
* ದುಃಖವು ಮನುಷ್ಯನನ್ನು ಪರೀಕ್ಷಿಸುವ ಮತ್ತು ಅವನನ್ನು ಮುಂದೆ ಕೊಂಡೊಯ್ಯುವ ಪ್ರೇರಕ ಶಕ್ತಿಯಾಗಿದೆ.
* ಮನಸ್ಸು ಎಂಬುದು ಬ್ರಹ್ಮಾಂಡದ ಸೃಷ್ಟಿಕರ್ತನು ಮಾನವಕುಲಕ್ಕೆ ನೀಡಿದ ಒಂದು ಉಡುಗೊರೆಯಾಗಿದ್ದು, ಅದು ಮನುಷ್ಯನ ಜೀವನದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನ ರೂಪ ಹಾಗೂ ಆಕಾರವನ್ನು ಬದಲಾಯಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ