ಹಿಂದೂ ಧರ್ಮದಲ್ಲಿ ಗಂಡ ಬದುಕಿರುವಾಗ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಯಾವಾಗ?
ಇತ್ತೀಚಿಗೆ ಪರೀಕ್ಷೆಗೆ ಹಾಜರಾಗುವವರು ಮಂಗಳಸೂತ್ರ ಮತ್ತು ಜನಿವಾರ ತೆಗೆಯಬೇಕು ಎಂದು ಸೂಚಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿ ಮಧ್ಯ ಪ್ರವೇಶಿಸಿದ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಪರೀಕ್ಷಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಹಾಗೂ ಮಂಗಳಸೂತ್ರವನ್ನು ತೆಗೆಯಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಶಾಸ್ತ್ರದಲ್ಲಿ ಈ ರೀತಿ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಮಾಡಬೇಕಾದ ಸಂದರ್ಭಗಳಲ್ಲಿ ಏನು ಮಾಡಬೇಕು? ಈ ವಿಷಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮದುವೆ (Marriage) ಎಂಬುದು ಸುಂದರ ಬಂಧನ. ಒಂದು ಗಂಡು- ಹೆಣ್ಣು ಕೊನೆಯವರೆಗೂ ಒಟ್ಟಾಗಿ ಬದುಕುತ್ತೇವೆ ಎನ್ನುವ ಒಪ್ಪಂದ. ಅದಕ್ಕಾಗಿಯೇ ಮಾಂಗಲ್ಯಧಾರಣೆ ಮಾಡುವ ಮೂಲಕ ಅಗ್ನಿಯ ಸಾಕ್ಷಿಯಾಗಿ ಮನೆಯವರು, ಬಂಧು- ಮಿತ್ರರು ಬಂದು ಹರಸಿ, ಹಾರೈಸಿ ಹೋಗುತ್ತಾರೆ. ಹಾಗಾಗಿಯೇ ಮದುವೆಯ ದಿನ ಗಂಡು, ತನ್ನ ಹೆಂಡತಿಯಾಗಿ ಬರುವವಳಿಗೆ ಕಟ್ಟುವ ಕರಿಮಣಿಗೆ ಅದರದ್ದೇ ಆದಂತಹ ಪವಿತ್ರತೆ ಇರುತ್ತದೆ. ಅದರಿಂದಲೇ ಒಂದು ಹೆಣ್ಣು ಸುಮಂಗಲಿಯಾಗುತ್ತಾಳೆ. ಆದರೆ ಇತ್ತೀಚಿಗೆ ಇದನ್ನು ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ತೆಗೆದಿಡಬಹುದಾದ ರೂಢಿ ಆರಂಭವಾಗಿದೆ. ಇದಕ್ಕೆ ಪೂರಕವೆಂಬಂತೆ ಕೆಲವು ಪರೀಕ್ಷೆಗೆ ಹಾಜರಾಗುವಾಗ ಮಂಗಳಸೂತ್ರವನ್ನು ತೆಗೆದು ಬರಬೇಕು ಎಂಬ ನಿಮಯಗಳಿದ್ದವು. ಇದೀಗ ಹಿಂದೂ ಪರ ಸಂಘಟನೆಗಳಿಂದ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ರೈಲ್ವೆ ನೇಮಕಾತಿ ಮಂಡಳಿಯ (Railway Recruitment Board) ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ (Mangalasutra) ತೆಗೆಸಬಾರದು ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ (V Somanna) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾದರೆ ಶಾಸ್ತ್ರದಲ್ಲಿ ಈ ರೀತಿ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಮಾಡಬೇಕಾದ ಸಂದರ್ಭಗಳಲ್ಲಿ ಏನು ಮಾಡಬೇಕು? ಈ ವಿಷಯದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಾಸ್ತ್ರದಲ್ಲಿ ಹೇಳಿರುವುದೇನು?
ಈ ವಿಷಯವಾಗಿ ವೇ। ಗಜಾನನ ಭಟ್ ಆರೊಳ್ಳಿ ಅವರು ಟಿವಿ9 ಜೊತೆ ಮಾತನಾಡಿದ್ದು ಅವರು ನೀಡಿರುವ ಮಾಹಿತಿಯ ಪ್ರಕಾರ, “ಒಮ್ಮೆ ಕರಿಮಣಿ ಕಟ್ಟಿದ ಮೇಲೆ ಅದನ್ನು ತೆಗೆದಿಡಲು ಯಾವುದೇ ರೀತಿಯ ಅವಕಾಶ ಇಲ್ಲ. ಆದರೆ ಅದು ತುಂಡಾದ ಸಂದರ್ಭಗಳಲ್ಲಿ ಹೆಣ್ಣಿನ ತವರು ಮನೆಯಲ್ಲಿ ನೀಡಿರುವಂತಹ ಧಾರೆ ಗುಂಡನ್ನು ಬೇರೆ ಕರಿಮಣಿ ಅಥವಾ ಸರಕ್ಕೆ ಹಾಕಿಕೊಂಡು ಆ ಬಳಿಕ ಈ ಕರಿಮಣಿಯನ್ನು ತೆಗೆದಿಡಬಹುದು. ಒಂದು ವೇಳೆ ಆಗದಿದ್ದಲ್ಲಿ ಬೇರೆ ಕರಿಮಣಿ ಮಾಡಿಸಿಕೊಂಡು ಇದನ್ನು ತೆಗೆಯಬಹುದು. ಮಾಂಗಲ್ಯ ತಿಳಿಯದೆಯೇ ಕಟ್ಟಾದ ಸಂದರ್ಭಗಳಲ್ಲಿ ಬೇರೆ ಕರಿಮಣಿ ತಂದು ಅದನ್ನು ಗಂಡ ಆಕೆಯ ಕೊರಳಿಗೆ ಹಾಕಬೇಕಾಗುತ್ತದೆ. ಈ ರೀತಿ ಆದಾಗ ಅಂದರೆ ಕೊರಳಿನಲ್ಲಿ ಮಾಂಗಲ್ಯ ಸರವಿಲ್ಲದೆ ಮನೆಯ ವಾಸ್ತು ಬಾಗಿಲನ್ನು ದಾಟಬಾರದು. ಅಂದರೆ ಹೊರಗಡೆ ಎಲ್ಲಿಗೂ ಹೋಗಬಾರದು” ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ ಈಗ ಇಂತಹ ಶಾಸ್ತ್ರ ಸಂಪ್ರದಾಯಗಳನ್ನು ಪಾಲನೆ ಮಾಡುವವರು ತೀರಾ ಕಡಿಮೆಯಾಗಿದ್ದಾರೆ. ಆದರೆ ಕರಿಮಣಿಗೆ ಅದರದ್ದೇ ಆದ ಮಹತ್ವವಿದೆ. ನಗರಗಳಲ್ಲಿ ವಾಸವಾಗಿರುವವರಿಗೆ ಪ್ರತಿನಿತ್ಯ ದೊಡ್ಡ ದೊಡ್ಡ ಕರಿಮಣಿ ಹಾಕಿಕೊಳ್ಳಲು ಸಾಧ್ಯವಿಲ್ಲ ಎನ್ನುವವರು ಸಣ್ಣದಾಗಿ ಮಾಡಿಸಿಕೊಳ್ಳಬಹುದು. ಆದರೆ ಮದುವೆ ಆದ ಮೇಲೆ ಕರಿಮಣಿ ಇಲ್ಲದೆ ಇರಬಾರದು. ಅದರಲ್ಲಿಯೂ ಕೆಲವರಿಗೆ ಮಲಗುವಾಗ, ಸ್ನಾನ ಮಾಡಲು ಹೋಗುವಾಗ ಕರಿಮಣಿ ತೆಗೆದಿಡುವ ರೂಢಿ ಇರುತ್ತದೆ. ಆದರೆ ಈ ರೀತಿ ಮಾಡಬಾರದು. ಒಮ್ಮೆ ಕಟ್ಟಿದ ಕರಿಮಣಿಯನ್ನು ತೆಗೆಯಲು ಅವಕಾಶ ಇರುವುದಿಲ್ಲ.
ಇದನ್ನೂ ಓದಿ: ಚೀನಾದಲ್ಲಿ ರಿಮೋಟ್ ಕಂಟ್ರೋಲ್ ಹಾಸಿಗೆ, ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಆರೋಗ್ಯಕ್ಕೂ ಒಳ್ಳೆಯದು!
ಕರಿಮಣಿ ಧರಿಸುವುದರಿಂದ ಇದು ನಕಾರಾತ್ಮಕ ಶಕ್ತಿಯನ್ನು ತಡೆಯುವುದಲ್ಲದೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಲ್ಲದೆ ಮಂಗಳಸೂತ್ರದಲ್ಲಿರುವ ತಾಳಿಯ ಗುಂಡಗಿನ ಆಕಾರ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಹೃದಯದ ಆರೋಗ್ಯವನ್ನು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಸಹಾಯಕವಾಗಿರುತ್ತದೆ. ಜೊತೆಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಮನಸ್ಸಿನಲ್ಲಿ ಆಗುವಂತಹ ಉದ್ವೇಗ ತರಂಗಗಳನ್ನು ನಿಯಂತ್ರಿಸುವ ಶಕ್ತಿ ಗುಂಡಗಿನ ಆಕಾರಕ್ಕೆ ಇರುತ್ತದೆ. ಬೇರೆ ಯಾವುದೇ ಆಕಾರಗಳಿಗೆ ಈ ಶಕ್ತಿ ಇರುವುದಿಲ್ಲ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Mon, 28 April 25