AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ವೀಣೆ ಮೀಟಿದ ಜಾಣೆ; “ನಾನು ಮತ್ತು ನನ್ನ ಗೀಚು” ಬಳಗದ 20 ಕಥೆಗಾರರಿಂದ ಸಿದ್ಧವಾಗುತ್ತಿದೆ ಕಥಾ ಸಂಗ್ರಾಮ

Kannada Literature: ಕಥೆಯನ್ನು ಹೀಗೂ ಬರೆಯಬಹುದೇ ಎಂದು ಆಲೋಚಿಸುತ್ತಿರುವಾಗ ಪ್ರವೀಣ್ ಕಟ್ಟೆಯವರಿಗೆ ಹೊಳೆದಿದ್ದೇ ಈ ವಿಶಿಷ್ಟ ರೀತಿಯ ಪ್ರಯತ್ನ. ಒಬ್ಬರು ಹಲವು ಕಥೆಗಳನ್ನು ಬರೆಯುವುದು ಸಹಜ ಆದರೆ ಒಂದು ಕಥೆಯನ್ನು ಹಲವರು ಬರೆದರೆ ಹೇಗಿರುತ್ತೆ ಅಂತ ಯೋಚಿಸಿ ಅದರ ಫಲವಾಗಿ ಹಲವು ನವ ಬರಹಗಾರರನ್ನು ಕಲೆಹಾಕಿ ಕೈಗೊಂಡಿರುವ ವಿಭಿನ್ನ ಪ್ರಯತ್ನವನ್ನೊಮ್ಮೆ ಓದಿ ಆನಂದಿಸಿ.

ಜೀವ ವೀಣೆ ಮೀಟಿದ ಜಾಣೆ; ನಾನು ಮತ್ತು ನನ್ನ ಗೀಚು ಬಳಗದ 20 ಕಥೆಗಾರರಿಂದ ಸಿದ್ಧವಾಗುತ್ತಿದೆ ಕಥಾ ಸಂಗ್ರಾಮ
ಜೀವ ವೀಣೆ ಮೀಟಿದ ಜಾಣೆ; "ನಾನು ಮತ್ತು ನನ್ನ ಗೀಚು" ಬಳಗದ 20 ಕಥೆಗಾರರಿಂದ ಸಿದ್ಧವಾಗುತ್ತಿದೆ ಕಥಾ ಸಂಗ್ರಾಮ
TV9 Web
| Updated By: Digi Tech Desk|

Updated on: Dec 27, 2021 | 12:00 PM

Share

ಯಾವುದೇ ಕಥಾವಸ್ತುವು ಸಾಹಿತ್ಯದ ಒಂದು ಅಂಶವಾಗಿದ್ದು ಈ ಕಥಾವಸ್ತುವು, ಕಥೆಯಲ್ಲಿ ಏನಾಗುತ್ತಿದೆ ಎಂಬ ಸವಿವರವಾದ ಅಂಶವನ್ನು ವಿವರಿಸುತ್ತದೆ. ಕಥೆಗಳು ಸಾಮಾನ್ಯವಾಗಿ ಸ್ಪಷ್ಟವಾದ ಆರಂಭ ಮತ್ತು ಅಂತ್ಯವನ್ನು ಹೊಂದಿರುತ್ತದೆ ಅದು ಸಂಬಂಧಗಳನ್ನು ತೋರಿಸುವುದು ಮತ್ತು ಪಾತ್ರಗಳ ಸಂಘರ್ಷವನ್ನು ಸೃಷ್ಟಿಸುವುದು ಹಾಗೂ ಕಥೆಯ ಭಾಗಗಳನ್ನು ವಿವರಿಸುವ ಮೂಲಕ ಗುರುತಿಸಲ್ಪಡುತ್ತದೆ.

” ಜೀವ ವೀಣೆ ಮೀಟಿದ ಜಾಣೆ” ಅಬ್ಬಾ! ಹೆಸರೇ ಕೇಳಲು ಎಷ್ಟೊಂದು ಹಿತವಾಗಿದೆ ಅಲ್ವಾ !? ಯಾರಿರಬಹುದು ಈ ಜಾಣೆ !? ಯಾವ ಜೀವದ ವೀಣೆಯನ್ನು ಮೀಟಿರಬಹುದು ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡುತಿರಬಹುದು. ಅಂದಹಾಗೆ “ಜೀವ ವೀಣೆ ಮೀಟಿದ ಜಾಣೆ ಎಂಬುದು ದ.ಕ. ಜಿಲ್ಲೆಯ ಈಗಿನ ಕಡಬ ತಾಲೂಕಿನ “ಕುಮಾರಪುರ ಪ್ರಕಾಶನ” ಸಾಹಿತ್ಯಾಸಕ್ತರಿಗಾಗಿ ರೂಪಿಸಿಕೊಂಡ “ನಾನು ಮತ್ತು ನನ್ನ ಗೀಚು” ಬಳಗ ಪ್ರಸ್ತುತ ಪಡಿಸುತ್ತಿರುವ ಒಂದು ಸುಂದರ ಸಾಂಸಾರಿಕ ರಿಲೇ ಧಾರವಾಹಿ ಕಥೆಯ “ಶಿರೋನಾಮೆ”. ಈ ಸುಂದರ ಕಥೆಯ ಜಾಣೆ “ವೀಣಾ” ಎಂಬ ಸುಂದರ ಹಾಗೂ ಸುಸಂಸ್ಕೃತ ಯುವತಿ, ಇವಳೇ ಈ ಕಥೆಯ ಕಥಾನಾಯಕಿ.

ಈಗ ನಾನು ಹೇಳಲು ಹೊರಟಿರುವುದು ಕುಮಾರಪುರ ಪ್ರಕಾಶನದ ನಾನು ಮತ್ತು ನನ್ನ ಗೀಚು ಬಳಗ ಪ್ರಸ್ತುತ ಪಡಿಸುತ್ತಿರುವ ಜೀವ ವೀಣೆ ಮೀಟಿದ ಜಾಣೆ ಎಂಬ ರಿಲೇ ಧಾರವಾಹಿ ಕಥೆಯ ಬಗ್ಗೆ. ಅದರಂತೆ ಯಾವುದೇ ಒಂದು ಕಥೆಯನ್ನು ಒಬ್ಬ ಕಥೆಗಾರ ಅಥವಾ ಕಥೆಗಾರ್ತಿ ಬರೆದಿರುವುದನ್ನೂ ಹಾಗೂ ಬರೆಯುವುದನ್ನೂ ಕಾಣಬಹುದು. ಆದರೆ ಒಂದು ಕಥೆಯನ್ನು 20 ಜನರ ತಂಡವೊಂದು ಒಟ್ಟು ಸೇರಿ ಬರೆಯುವುದು ಅಂದರೆ ಅಪರೂಪದ ಹಾಗೂ ಅದೊಂದು ವಿಶೇಷವೂ ಹೌದು. ಅದರಂತೆ ಕುಮಾರ ಪುರ ಪ್ರಕಾಶನದ ನಾನು ಮತ್ತು ನನ್ನ ಗೀಚು ಬಳಗದ ಸದಸ್ಯರ ತಂಡವೊಂದು ಹೊಚ್ಚ ಹೊಸದಾಗಿ ಈ ರೀತಿಯ ವಿಶಿಷ್ಠವಾದ ಪ್ರಯತ್ನವನ್ನು ಮಾಡಿದೆ. ಅದರಂತೆ ಈ ಧಾರವಾಹಿ ಕಥೆಯಲ್ಲಿ ಒಟ್ಟು 20 ಜನ ಕಥೆಗಾರರು ತಮ್ಮ ತಮ್ಮ ಆಲೋಚನಾ ಲಹರಿಯಂತೆ ಸ್ವತಂತ್ರವಾಗಿ ಕಥೆಯನ್ನು ಬರೆಯುತ್ತಿದ್ದಾರೆ. ಅಂದಹಾಗೆ ಇವರೆಲ್ಲಾ ಪ್ರಬುದ್ಧ ಹಾಗೂ ಹೆಸರಾಂತ ಕಥೆಗಾರರಂತೂ ಅಲ್ಲಾ. ಹಾಗೆ – ಹೀಗೆ ಚಿಕ್ಕ ಪುಟ್ಟ ಕವನ ಹನಿಗವನಗಳನ್ನು ಬರೆಯುತ್ತಿದ್ದ ಬರಹಗಾರರು. ಇವರನ್ನೆಲ್ಲಾ ಒಟ್ಟುಗೂಡಿಸಿ ಪ್ರೋತ್ಸಾಹಿಸಿ ಒಂದು ಸುಂದರವಾದ ವೇದಿಕೆಯನ್ನು ಕಲ್ಪಿಸಿಕೊಟ್ಟವರು ವೃತ್ತಿಯಲ್ಲಿ ವಕೀಲರಾದ ಶ್ರೀಯುತ ಪ್ರವೀಣ್ ಕಟ್ಟೆಯವರು. ಇವರು ಮೂಲತ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೊಂಬಾರು ಎಂಬ ಕುಗ್ರಾಮದವರು. ಇವರು ತಮ್ಮ ಬಹುದಿನಗಳ ಕನಸಿನಂತೆ ಕನ್ನಡ ಸಾಹಿತ್ಯಕ್ಕೆ ಏನಾದರೂ ತಮ್ಮ ಕೈಲಾದ ಸೇವೆಯನ್ನು ನೀಡಬೇಕೆಂಬ ಮಹಾದಾಸೆಯಿಂದ ತಮ್ಮ ದಿವಗಂತ ತಂದೆ ಶ್ರೀ ಕೆ ನೋಣಪ್ಪಗೌಡರ ನೆನಪಿನಾರ್ಥ 2020 ರಲ್ಲಿ ರಾಜ್ಯ ಮಟ್ಟದ ಹನಿಗವನ ಸ್ಪರ್ಧೆ ಏರ್ಪಡಿಸಿದಾಗ ಹರಿದು ಬಂದ ಸಾವಿರಾರು ಹನಿಗವನ ಪ್ರೇಮಿಗಳನ್ನು ಒಗ್ಗೂಡಿಸಿ ದಿನಾಂಕ: 28.11.2020 ರಂದು ನಾನು ಮತ್ತು ನನ್ನ ಗೀಚು ಎಂಬ Whats app ಸಾಹಿತ್ಯ ಬಳಗವನ್ನು ಪ್ರಾರಂಭಿಸಿದರು. ಈ ಬಳಗದ ಮೂಲ ಉದ್ದೇಶ ವೆಂದರೆ ಅದೆಷ್ಟೋ ಜನ ಕವಿಗಳೂ, ಕಥೆಗಾರರೂ ಹಾಗೂ ಸಾಹಿತಿಗಳನ್ನು ಗುರಿತಿಸಿ, ಅವರ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವುದು ಮತ್ತು ಅವರ ಬರವಣಿಗೆಗಳಿಗೆ ವೇದಿಕೆಯಾಗುವುದು. ಅದರಂತೆ “ಎಲೆಮರೆಯ ಕಾಯಿಯಂತಿದ್ದ” ಹಲವಾರು ಪ್ರತಿಭೆಗಳು ಈ ಬಳಗದ ಮೂಲಕ ತಮ್ಮ ಬರವಣಿಗೆಯನ್ನು ಗುರುತಿಸಿಕೊಂಡಿದ್ದಾರೆ.

ಕಲಿಯುವ ಛಲವೊಂದಿದ್ದರೆ ಅದು ಎಷ್ಟೇ ಕಷ್ಟವಾಗಿದ್ದರೂ ಅದನ್ನು ಮೆಟ್ಟಿ ನಿಲ್ಲಬಹುದು ಎನ್ನುವಂತೆ ಈ ಬಳಗದಲ್ಲಿ ವಿವಿಧ ರೀತಿಯ ಸಾಹಿತ್ಯ ಪ್ರಕಾರದ ಬರವಣಿಗೆಯ ಕೌಶಲ್ಯವನ್ನು ತಜ್ಞರ ಮಾರ್ಗದರ್ಶನದಲ್ಲಿ ಕಲಿಯಲಾಗಿದೆ ವಿವಿಧ ರೀತಿಯ ಸಾಹಿತ್ಯ ಪ್ರಕಾರಗಳಾದ ಕವನ, ಹನಿಗವನ, ಚುಟುಕು, ಪದ್ಯ, ಚಿತ್ರಬರಹ, ವ್ಯಂಗ್ಯಗವನ, ಗಜಲ್, ಹೈಕು, ಅಬಾಬಿ, ಹಾಗೂ ತಂಕಾ ರುಬಾಯಿ ಎಂಬ ಹತ್ತು ಹಲವು ಬರಹಗಳನ್ನು ತಜ್ಞರ ಮಾರ್ಗದರ್ಶನದಲ್ಲಿ ಪ್ರಾಯೋಗಿಕವಾಗಿ ಕಲಿತು ರಚಿಸಲಾಗಿದೆ. ಈ ಬಳಗದಲ್ಲಿ ಆಗಾಗ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದು ಆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನದ ರೂಪದಲ್ಲಿ ಕನ್ನಡದ ಪ್ರಮುಖರ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಈ ಬಳಗದಲ್ಲಿ ಗಜಲ್ ರಚನಾಕಾರರಾದ ಡಾ.ಮಲ್ಲಿನಾಥ್ ತಳವಾರ್ ರವರು, ಹೈಕು ರಚನಾಕಾರರಾದ “ಮಕರಂದ ಮನೋಜ್ ರವರು ಅಬಾಬಿ ರಚನಕಾರರಾದ ಧನಪಾಲ್ ನಾಗರಾಜಪ್ಪ ಹಾಗೂ ವ್ಯಂಗ ಚಿತ್ರಕಾರರಾದ ಮೋನಪ್ಪ ಎಲ್ ಎನ್ ರಾವ್ ಇರುವುದು ಒಂದು ವಿಶೇಷವಾಗಿದೆ. ಜೊತೆಗೆ ಪುತ್ತೂರಿನ ನಾರಾಯಣ ರೈ ಕುಕ್ಕುವಳ್ಳಿ ಗೌರವ ತೀರ್ಪುಗಾರರಾಗಿಯೂ ಬಳಗದಲ್ಲಿದ್ದಾರೆ.

ಈ ಧಾರವಾಹಿಯ ಕಥೆಯೂ 20 ಜನ ಕಥೆಗಾರ/ಕಥೆಗಾರ್ತಿಯ ಬರಹದಲ್ಲಿ ಒಟ್ಟು 20 ಅಧ್ಯಾಯಗಳಲ್ಲಿ ಮೂಡಿಬರುತ್ತಿದೆ. ಒಬ್ಬೊಬ್ಬ ಕಥೆಗಾರರೂ ಕಥೆಯ ಒಂದೊಂದು ಅಧ್ಯಾಯವನ್ನು ಬರೆಯುತ್ತಿದ್ದಾರೆ. ಅಂದರೆ ಒಬ್ಬ ಕಥೆಗಾರ ತನ್ನ ಆಲೋಚನೆಯಿಂದ ಕಥೆಯನ್ನು ಪ್ರಾರಂಭಿಸುತ್ತಾನೆ ನಂತರ ಮತ್ತೊಬ್ಬ ಕಥೆಗಾರ ಆ ಕಥೆಯನ್ನು ಮುಂದುವರೆಸುತ್ತಾನೆ ಹೀಗೆ ಸುಮಾರು 19 ಜನ ಕಥೆಗಾರರು ತಮ್ಮ ತಮ್ಮ ಇಚ್ಚಾನುಸಾರ ಸ್ವತಂತ್ರವಾಗಿ ಬರೆದ ಕಥೆಯನ್ನು 20ನೆಯ ಕಥೆಗಾರ ಅಂದರೆ ಕಥೆಯನ್ನು ಪ್ರಾರಂಭಿಸಿದ ಕಥೆಗಾರ ತನ್ನ ಕೈ ಚಳಕದ ಬರಹದಿಂದ ಕಥೆಯನ್ನು ಮುಕ್ತಾಯಗೊಳಿಸುತ್ತಾನೆ. ಆದರೆ ಮಧ್ಯದಲ್ಲಿ ಪ್ರತಿಯೊಬ್ಬ ಕಥೆಗಾರನೂ ಕೊನೆಯಲ್ಲಿ ತಮ್ಮ ಕಥೆಗೆ ತಿರುವನ್ನು ನೀಡಬೇಕಾಗುತ್ತದೆ ಇದರಿಂದ ಮುಂದಿನ ಕಥೆಗಾರನು ಕಥೆಯನ್ನು ಮುಂದುವರೆಸಲು ಸವಾಲು ಹಾಕಿದಂತಾಗುತ್ತದೆ. ಇದೇ ಈ ಕಥೆಯ ಪ್ರಮುಖ ಟ್ವಿಸ್ಟ್.

ಸ್ಪರ್ಧೆಯ ನಿಯಮಾನುಸಾರವಾಗಿ ಜೀವ ವೀಣೆ ಮೀಟಿದ ಜಾಣೆ ಈ ಕಥೆಯನ್ನು ಪ್ರಾರಂಭಿಸಿದವರು ಅಂದರೆ ಕಥೆಯ ಮೊದಲನೇ ಅಧ್ಯಾಯವನ್ನು ಪ್ರಾರಂಭಿಸಿದವರು ” ನಿಗೂಢ ಹುಬ್ಬಳ್ಳಿಯವರು” ಹಾಗೂ ಈ ಕಥೆಯನ್ನು ಮುಂದುವರಿಸುತ್ತಿರುವ ಕಥೆಗಾರ/ಕಥೆಗಾರ್ತಿಯರ ವಿವರ ಹೀಗಿದೆ: ಕಥೆಯೊಂದ ಬರೆಯೋಣ… (ಕಥಾ ರಿಲೇ ಸ್ಪರ್ಧೆ) ಭಾಗವಹಿಸುವ ಕಥೆಗಾರ / ಕತೆಗಾರ್ತಿಯರು 1. ನಿಗೂಢ ಹುಬ್ಬಳ್ಳಿ (ಗುರು ಢವಳೇಶ್ವರ) 2. ರಾಜಶೇಖರ್ 3. ಭವ್ಯಾ ಎ.ಎಸ್ 4. ಕಿರಣ್ ಶಂಕರ್ 5. ಶಿರೀಷ ಎಂ ವಿ 6. ಪ್ರವೀಣ ಕಟ್ಟೆ 7. ಚೈತ್ರಾ ಕುಂದರ್ 8. ಗೀತಾ ಎನ್ 9. ಹಿತೇಶ್ ಕುಮಾರ್ ಎ 10. ಸಮೀರ್ ಹುಸೇನ್ 11. ಎಂ.ಎಂ. ಆಚಾರ್ 12. ಜಯಶ್ರೀ ಶಶಿಧರ್ 13. ರಾಮಚಂದ್ರ ರಾವ್ 14. ನಂದನ್ ಕಪ್ಪಳಿ 15.ಡಿ. ಎಸ್.ಚಂದ್ರಶೇಖರ 16. ರೂಪೇಶ್ 17 ಸುಕೃತಿ ಅನಿಲ್ ಪೂಜಾರಿ 18. ಸಂಧ್ಯಾ ಭಟ್ 19. ಮಕರಂದ ಮನೋಜ್ ಎಂ 20. ಕೃಷ್ಣ ದೇವಾಡಿಗ.

ಇಂದಿಗೆ ಒಟ್ಟು 16 ಅಧ್ಯಾಯಗಳು ಮುಗಿದಿದ್ದು ಇನ್ನು 4 ಅಧ್ಯಾಯಗಳು ಬಾಕಿ ಇವೆ. ಎಲ್ಲಾ 20 ಅಧ್ಯಾಯಗಳು ಮುಗಿದ ನಂತರ “ಜೀವ ವೀಣೆ ಮೀಟಿದ ಜಾಣೆ” ಎಂಬ ಸುಂದರ ಸಾಂಸಾರಿಕ ರಿಲೇ ಧಾರವಾಹಿ ಕಥೆಯು ಪ್ರಕಟಣೆಗೆ ಸಿದ್ಧವಾಗಿ ಓದುಗರ ಕೈ ಸೇರಲಿದೆ.

ಅದರಂತೆ ಮತ್ತೊಂದು ಮುಖ್ಯವಾದ ವಿಷಯವೆಂದರೆ ತಮ್ಮೆಲ್ಲಾ ಕೆಲಸ- ಕಾರ್ಯಗಳಿಂದ ಬಿಡುವು ಮಾಡಿಕೊಂಡು ಈ ಬಳಗದ ಸ್ಪರ್ಧೆಗಳ ಹಾಗೂ ಬರವಣಿಗೆಯ ಆಗು- ಹೋಗುಗಳ ನಿರ್ವಹಣೆಯನ್ನು ಬಳಗದ ಅಡ್ಮಿನ್ ಗಳಾದ ಪ್ರವೀಣ ಕಟ್ಟೆ, ಶ್ರೀಮತಿ ಸುಕೃತಾ, ಅನಿಲ್ ಪೂಜಾರಿ, ಸುಜಲ್ ಕುಮಾರ್, ಭವ್ಯಾ, ಹಾಗೂ ರಮ್ಯಾ ಕವೀಶ್ ರವರು ಅಚ್ಛುಕಟ್ಟಾಗಿ ನಿರ್ವಹಿಸಿ ನವ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದು ವಿಶೇಷವಾಗಿದೆ.

ಅಂತಿಮ ಅಧ್ಯಾಯ ಹೇಗಿರುತ್ತದೋ ಎಂಬ ಕುತೂಹಲದಿಂದ ನಿಮ್ಮೆಲ್ಲರಂತೆ ನಾನೂ ಸಹ ಕುತೂಹಲಭರಿತನಾಗಿ ಕಾಯುತ್ತಿರುವ ಹಾಗೂ ಅತೀಜರೂರಾಗಿ ನೀವೆಲ್ಲರೂ ಕಥೆಯನ್ನು ಓದಲು ಸಿದ್ದರಾಗಿ ಎಂದು ತಿಳಿಸುವ ನಿಮ್ಮೆಲ್ಲರ ಕವಿಮಿತ್ರ…..

✍️ ಸಮೀರ್ ಹುಸೇನ್.ಆರ್, (ಮೊಬೈಲ್ ಸಂಖ್ಯೆ: 9845662344)

ಇದನ್ನೂ ಓದಿ:Gokak Falls : ಕಿತ್ತು ತಿನ್ನುವ ಬಡತನ ಇದ್ದಾಗಲೂ ಕೊಟ್ಟು ತಿನ್ನುವ ಗುಣ ರೈತನ ರಕ್ತನಾಳಗಳಲ್ಲೇ ಹುದುಗಿದೆ