ಬಿಹಾರದಲ್ಲಿ ಲಾಲುಪ್ರಸಾದ್ ಮಗ ತೇಜ್ ಪ್ರತಾಪ್ ಯಾದವ್ ಬಂಧನ; ರಹಸ್ಯ ಸ್ಥಳಕ್ಕೆ ಶಿಫ್ಟ್?
‘ಜನಶಕ್ತಿ ಜನತಾ ದಳ’ (JJD) ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರನ್ನು ಪಾಟ್ನಾ ಪೊಲೀಸರು ಇಂದು ಸಂಜೆ ವಶಕ್ಕೆ ಪಡೆದಿದ್ದಾರೆ. ‘ನೀಟ್’ (NEET) ಪೇಪರ್ ಲೀಕ್ ಅಕ್ರಮವನ್ನು ಖಂಡಿಸಿ ನಡೆಸಲಾಗಿದ್ದ ‘ಬಿಹಾರ ಬಂದ್’ ಅಂಗವಾಗಿ ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ತೇಜ್ ಪ್ರತಾಪ್ ಯಾದವ್ ಅವರನ್ನು ರಹಸ್ಯವಾದ ಸ್ಥಳದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಟ್ನಾ, ಜುಲೈ 25: ಜನಶಕ್ತಿ ಜನತಾ ದಳ (JJD) ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರನ್ನು ಪಾಟ್ನಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಾಟ್ನಾದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಪಾಟ್ನಾದ ಗಾಂಧಿ ಮೈದಾನದ ಬಳಿಯ ರಾಮ್ ಗುಲಾಮ್ ಚೌಕ್ನಲ್ಲಿ ‘ನೀಟ್’ ಪೇಪರ್ ಲೀಕ್ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ತೇಜ್ ಪ್ರತಾಪ್ ಯಾದವ್ ಬೆಂಬಲ ಸೂಚಿಸಿ, ವಿದ್ಯಾರ್ಥಿಗಳೊಂದಿಗೆ ಧರಣಿಯಲ್ಲಿ ಕುಳಿತಿದ್ದರು.
ಆ ಪ್ರತಿಭಟನೆಯ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಅಲ್ಲಿಂದ ತೆರವುಗೊಳಿಸಿದ ನಂತರ, ನಗರದ ಶಾಪಿಂಗ್ ಮಾಲ್ ಒಂದರಲ್ಲಿದ್ದ ತೇಜ್ ಪ್ರತಾಪ್ ಅವರನ್ನು ವಶಕ್ಕೆ ಪಡೆದು, ಪಾಟ್ನಾ ಎಸ್ಪಿ ನೇತೃತ್ವದ ಪೊಲೀಸ್ ತಂಡವು ಬಿಗಿ ಭದ್ರತೆಯ ನಡುವೆ ತಮ್ಮ ಅಧಿಕೃತ ವಾಹನದಲ್ಲಿ ಕರೆದೊಯ್ದಿದೆ.
ಇದನ್ನೂ ಓದಿ: ಎಲ್ಲ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ; ಪ್ರತಿಭಟನೆ ಹಿಂಪಡೆದ ಸಿಜೆಪಿ, ಶಾಂತಿಯುತವಾಗಿ ತೆರಳಲು ವಿದ್ಯಾರ್ಥಿಗಳಿಗೆ ಕರೆ
ಈ ವೇಳೆ ಪೋಲಿಸ್ ವಾಹನದ ಬಾಗಿಲನ್ನು ಹಿಡಿದು ನಿಂತು ಮಾತನಾಡಿದ ತೇಜ್ ಪ್ರತಾಪ್ ಯಾದವ್, “ನಾವು ವಿದ್ಯಾರ್ಥಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ಅವರ ಹಕ್ಕುಗಳಿಗಾಗಿ ಅಗತ್ಯಬಿದ್ದರೆ ಜೀವ ನೀಡಲು ನಾನು ಸಿದ್ಧ” ಎಂದು ಹೇಳಿದರು.
VIDEO | Bihar: Jan Shakti Janata Dal President Tej Pratap Yadav allegedly detained by Patna police.
(Full video available on PTI Videos – https://t.co/n147TvrpG7) pic.twitter.com/FrBSAxnfgM
— Press Trust of India (@PTI_News) July 25, 2026
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ತೇಜ್ ಪ್ರತಾಪ್, “ಈ ರಾಜೀನಾಮೆ ತೀರಾ ಮುಂಚೆಯೇ ಆಗಬೇಕಿತ್ತು. ಆದರೆ ಕೇವಲ ಒಬ್ಬ ಸಚಿವರ ರಾಜೀನಾಮೆಯಿಂದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಗುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ಪ್ರತಿಭಟನೆ ಅಂತ್ಯ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ
ತೇಜ್ ಪ್ರತಾಪ್ ಅವರ ವಶಕ್ಕೆ ಸಂಬಂಧಿಸಿದಂತೆ ಪಾಟ್ನಾ ಪೊಲೀಸರು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇಂದು ಬೆಳಗ್ಗೆ ಗಾಂಧಿ ಮೈದಾನದ ಬಳಿಯ ರಾಮ್ ಗುಲಾಮ್ ಚೌಕ್ನಲ್ಲಿ ನೀಟ್ ಪೇಪರ್ ಲೀಕ್ ಕುರಿತು ನ್ಯಾಯಯುತ ತನಿಖೆಗೆ ಆಗ್ರಹಿಸಿ ನಡೆಯುತ್ತಿದ್ದ ಧರಣಿಯಲ್ಲಿ ತೇಜ್ ಪ್ರತಾಪ್ ಭಾಗವಹಿಸಿದ್ದರು. ಆ ವೇಳೆ ಪ್ರತಿಭಟನೆಯ ಸ್ಥಳದಲ್ಲೂ ಅವರನ್ನು ಸ್ವಲ್ಪ ಸಮಯ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ಅವರನ್ನು ರಹಸ್ಯವಾದ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




